ಮುಂಬಯಿ: ಮಾಂಸಾಹಾರದಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದಾದರೆ ಸಸ್ಯಾಹಾರಿಗಳು ಮಾಂಸಾಹಾರಿ ಹೋಟೆಲ್ಲುಗಳಿಂದ ಏಕೆ ತಿನಿಸುಗಳನ್ನು ತರಿಸಬೇಕು ಎಂದು ಮುಂಬಯಿಯ ಗ್ರಾಹಕರ ನ್ಯಾಯಾಲಯವೊಂದು ಕೇಳಿದೆ.
ಕಟ್ಟುನಿಟ್ಟಾಗಿ ಸಸ್ಯಾಹಾರ ಪಾಲಿಸುವವರು ಮಾಂಸಾಹಾರಿ ಹೋಟೆಲ್ಲುಗಳಿಂದ ಆಹಾರ ತರಿಸಿ ನಂತರ ತಪ್ಪಾದ ಆಹಾರ ಬಂದರೆ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಯಿತು ಎನ್ನುವ ಬದಲು ಮಾಂಸಾಹಾರಿ ಹೋಟೆಲಿನಿಂದ ಆಹಾರ ತರಿಸುವುದನ್ನು ತಪ್ಪಿಸಬೇಕು ಎಂದು ಅದು ಅಭಿಪ್ರಾಯಪಟ್ಟಿದೆ.
ವಾವ್ ಮೊಮೊಸ್ ಎನ್ನುವ ಹೊಟೆಲ್ ಒಂದರಲ್ಲಿ ಗ್ರಾಹಕರು ವೆಜ್ ಕಾಂಬೊ ಮೊಮೊಸ್ ಆರ್ಡರ್ ಮಾಡಿದ್ದರು. ಆದರೆ ಹೊಟೆಲ್ ಚಿಕನ್ ಮೊಮೊಸ್ ಕಳುಹಿಸಿತ್ತು ಎಂದು ಆರೋಪಿಸಿ ಗ್ರಾಹಕ, ಗ್ರಾಹಕ ವ್ಯಾಜ್ಯ ಆಯೋಗದ ಮೊರೆ ಹೋಗಿದ್ದರು.
ಆದರೆ ಗ್ರಾಹಕರು ಚಿಕನ್ ಮೊಮೊ ಆರ್ಡರ್ ಮಾಡಿದ್ದರು ಎಂದು ಹೋಟೆಲ್ ತನ್ನ ಬಳಿಯಿದ್ದ ಆರ್ಡರ್ ಕಾಪಿ ಸಮೇತ ಕೋರ್ಟಿಗೆ ಮಾಹಿತಿ ನೀಡಿತ್ತು. ನಂತರ ಕೋರ್ಟ್ ಗ್ರಾಹಕರು ಸರಿಯಾದ ಸಾಕ್ಷಿ ಪ್ರಸ್ತುತಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪ್ರಕರಣವನ್ನು ರದ್ದುಪಡಿಸಿದೆ.
ಗ್ರಾಹಕ ಹೋಟೆಲ್ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದು, 6 ಲಕ್ಷ ರೂಪಾಯಿಗಳ ಪರಿಹಾರ ಕೊಡಿಸಬೇಕೆಂದು ದಾವೆ ಹೂಡಿದ್ದರು, ಪ್ರಕರಣವನ್ನು ವಜಾಗೊಳಿಸುವ ಸಂದರ್ಭದಲ್ಲಿ ಆಯೋಗ ಮೇಲಿನಂತೆ ಗ್ರಾಹಕರನ್ನು ಪ್ರಶ್ನಿಸಿದೆ.