ಬೆಂಗಳೂರು : ದುಷ್ಕರ್ಮಿಗಳಿಬ್ಬರು ಮಹಿಳೆಯೊಬ್ಬರ ಮೇಲೆ ಮಚ್ಚು ಬೀಸಿ ಸರಗಳ್ಳತನ ನಡೆಸಿರುವ ಭೀಕರ ಘಟನೆ ಬೆಂಗಳೂರಿನಲ್ಲಿ (Bengaluru Crime ) ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸರಗಳ್ಳರ ಉಪಟಳ ಇತ್ತೀಚಿಗೆ ವಿಪರೀತ ಮಿತಿ ಮೀರಿದ್ದು ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಈಶ್ವರಿ ನಗರದಲ್ಲಿ ಈ ಘಟನೆ ನಡೆದಿದ್ದು, ಉಷಾ ಹಾಗೂ ವರಲಕ್ಷ್ಮೀ ಎಂಬ ಇಬ್ಬರು ಮಹಿಳೆಯರು ರಾತ್ರಿ ವೇಳೆ ಗಣೇಶ ಹಬ್ಬದ ಆರ್ಕೆಸ್ಟ್ರಾ ನೋಡಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಪಲ್ಸರ್ ಬೈಕ್ ನಲ್ಲಿ ಹಿಂದಿನಿಂದ ಬಂದಿದ್ದ ಆರೋಪಿಗಳು ಹಿಂದಿನಿಂದು ಬಂದು ಮಹಿಳೆಯ ಕುತ್ತಿಗೆಗೆ ಮಚ್ಚು ಇಟ್ಟು ಬೆದರಿಕೆ ಹಾಕಿ ಸರ ನೀಡುವಂತೆ ಒತ್ತಾಯಿಸಿದ್ದರು. ಮಾರಕಾಸ್ತ್ರಗಳನ್ನು ಕಂಡು ಭಯಭೀತಗೊಂಡ ಉಷಾ ಕೂಡಲೇ ತಮ್ಮ ಕೊರಳಲ್ಲಿದ್ದ ಚಿನ್ನದ ಸರ ನೀಡಿದ್ದರು. ನಂತರ ವರಲಕ್ಷ್ಮೀ ಬಳಿ ಚಿನ್ನದ ಸರ ಕೇಳಿದಾಗ ಅವರು ಸರ ನೀಡಲು ನಿರಾಕರಿಸಿ ಪ್ರತಿರೋಧ ಒಡ್ಡಿದ್ದರು. ಇದರಿಂದ ಕುಪಿತಗೊಂಡ ದುಷ್ಕರ್ಮಿಗಳು ಮಚ್ಚು ಬೀಸಿದ್ದರು. ಇದರಿಂದ ವರಲಕ್ಷ್ಮಿಯವರ ಕೈಬೆರಳು ತುಂಡಾಗಿತ್ತು. ಪಾತಕಿಗಳು ವರಲಕ್ಷ್ಮಿಯವರ ಕೈಯಿಂದ ಸರ ಕಿತ್ತುಕೊಂಡು ಪರಾರಿಯಾಗಿದ್ದರು.
ಉಷಾ ಅವರ 10 ಗ್ರಾಂ ತೂಕದ ಸರ ಹಾಗೂ ವರಲಕ್ಷ್ಮಿ ಅವರ 45 ಗ್ರಾಂ ತೂಕದ ಸರ ಕಳ್ಳರ ಪಾಲಾಗಿದೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪ್ರತ್ಯೇಕ ತಂಡ ರಚಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.