
ಟ್ರಸ್ಟ್ ಮತ್ತು ಪ್ರತಿಷ್ಠಾನಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ಆಯ್ಕೆಯಲ್ಲಿ ಸಾಲು ಸಾಲು ಯಡವಟ್ಟುಗಳನ್ನು ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈಗ ಎಚ್ಚೆತ್ತುಕೊಂಡಂತಿದೆ. ನಿನ್ನೆಯ ದಿನ ಇಲಾಖೆಗೆ ಅಡಿಯಲ್ಲಿ 21 ಟ್ರಸ್ಟ್ ಮತ್ತು ಪ್ರತಿಷ್ಠಾನಗಳಿಗೆ ಅಧ್ಯಕ್ಷ ಸದಸ್ಯರ ಆಯ್ಕೆ ನಂತರ ಇಂದು ಆ ಆಯ್ಕೆಯನ್ನು ಇಲಾಖೆ ವಾಪಸ್ ಪಡೆದುಕೊಂಡಿದೆ.
ಪ್ರಮುಖವಾಗಿ 8 ತಿಂಗಳ ಹಿಂದೆಯೇ ಮೃತಪಟ್ಟಿರುವ ಪೂರ್ಣಚಂದ್ರ ತೇಜಸ್ವಿಯವರ ಹೆಂಡತಿ, ಸಾಹಿತಿ ಶ್ರೀಮತಿ ರಾಜೇಶ್ವರಿಯವರನ್ನು ಟ್ರಸ್ಟ್ ನ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದು ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದರ ಜೊತೆಗೆ ಪೂರ್ಣಚಂದ್ರ ತೇಜಸ್ವಿಯವರ ಹೆಸರಿನ ಪ್ರತಿಷ್ಠಾನಕ್ಕೆ ಚಿಂತಕರಾದ ನರೇಂದ್ರ ರೈ ದೇರ್ಲ ಅವರನ್ನು ಹೇಳದೇ ಕೇಳದೆ ಆಯ್ಕೆ ಮಾಡಿದ್ದು ಮತ್ತು ಆಯ್ಕೆ ನಂತರ ಅವರು ಆ ಜವಾಬ್ದಾರಿಯನ್ನು ನಿರಾಕರಿಸಿದ್ದು ಹೆಚ್ಚು ಚರ್ಚೆಯಾಗಿತ್ತು.
ಸಧ್ಯ ತೀವ್ರ ಮುಖಭಂಗವಾದ ನಂತರ ಸರ್ಕಾರ ಈ ಆಯ್ಕೆಯನ್ನು ವಾಪಸ್ ಪಡೆದುಕೊಂಡಿದೆ. ಸರ್ಕಾರ ಇಂತಹ ಸಮಿತಿಗಳಲ್ಲಿ ಯೋಗ್ಯರನ್ನು, ಅರ್ಹರನ್ನು ಕೂರಿಸಿದ್ದರೆ ಇಂತಹ ಪ್ರಮಾದ ಆಗುತ್ತಿರಲಿಲ್ಲ ಎಂಬುದು ಎಲ್ಲರ ಅಭಿಪ್ರಾಯವಾಗಿದೆ.