ದಾವಣಗೆರೆ: ಕಳೆದ ಕೆಲವು ದಿನಗಳ ಹಿಂದಷ್ಟೇ ಬಹಿರಂಗವಾಗಿ ಕಿತ್ತಾಡಿಕೊಂಡಿದ್ದ ಸಚಿವರಾದ ಬಿ.ಜೆಡ್. ಜಮೀರ್ ಅಹಮದ್ ಖಾನ್ ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ಅವರು ಭಾನುವಾರ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಗೆ ಸೂಚಿಸಿದ್ದಾರೆ ಎಂದು ಜಮೀರ್ ಈ ಸಂದರ್ಭದಲ್ಲಿ ತಿಳಿಸಿದರು.
ದಾವಣಗೆರೆಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ್ ಮತ್ತು ಜಮೀರ್, ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ನಾವಿಬ್ಬರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಘೋಷಿಸಿದರು.
ನೆರೆಯ ಕೇರಳದ ಹತ್ತು ಜಿಲ್ಲೆಗಳಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸುವ ಜವಾಬ್ದಾರಿಯನ್ನು ಜಮೀರ್ ಅವರಿಗೆ ವಹಿಸಲಾಗಿತ್ತು. ಮಾರ್ಚ್ 26 ರಿಂದ ಅವರು ಅಲ್ಲಿಯೇ ಬೀಡುಬಿಟ್ಟಿದ್ದರು. ಆದರೆ, ಕರ್ನಾಟಕದ ಉಪಚುನಾವಣೆ ನಡೆಯಲಿರುವ ಎರಡು ಕ್ಷೇತ್ರಗಳಲ್ಲಿ ಜಮೀರ್ ಅವರ ಅವಶ್ಯಕತೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹಿರಿಯ ನಾಯಕ ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಚರ್ಚಿಸಿ, ಜಮೀರ್ ಅವರನ್ನು ಮರಳಿ ಕರೆಸಿಕೊಂಡಿದ್ದಾರೆ.
“ಸಮರ್ಥ್ ಅವರ ಪರ ಪ್ರಚಾರ ಮಾಡಲು ನಾನು ಇಲ್ಲಿಗೆ ಬಂದಿದ್ದೇನೆ. ಬಾಗಲಕೋಟೆಯಲ್ಲೂ ಎರಡು ದಿನ ಪ್ರಚಾರ ನಡೆಸಲಿದ್ದೇನೆ. ಅಗತ್ಯ ಬಿದ್ದರೆ ಮತ್ತೆ ದಾವಣಗೆರೆಗೆ ಬರುತ್ತೇನೆ,” ಎಂದು ಜಮೀರ್ ತಿಳಿಸಿದರು.
ಕೆಲವು ತಿಂಗಳ ಹಿಂದೆ ಜಮೀರ್ ದಾವಣಗೆರೆಗೆ ಭೇಟಿ ನೀಡಿದ್ದಾಗ, ಮುಸ್ಲಿಂ ಸಮುದಾಯದವರು ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಈ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸುವುದಾಗಿ ಜಮೀರ್ ಹೇಳಿದ್ದು ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. “ಆದರೆ, ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ಸದಸ್ಯರಿಗೇ ಟಿಕೆಟ್ ನೀಡಬೇಕು ಎಂಬ ಕಾರಣಕ್ಕೆ ಹೈಕಮಾಂಡ್ ಸಮರ್ಥ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿತು,” ಎಂದು ಜಮೀರ್ ವಿವರಿಸಿದರು.
ಇದೇ ವೇಳೆ ಮಾತನಾಡಿದ ಸಚಿವ ಮಲ್ಲಿಕಾರ್ಜುನ್, ಜಮೀರ್ ಮತ್ತು ತಾವು ಆಪ್ತ ಸ್ನೇಹಿತರು ಎಂದು ಹೇಳಿದರು. “ನಾವಿಬ್ಬರೂ ಏಕವಚನದಲ್ಲೇ ಮಾತನಾಡಿಸಿಕೊಳ್ಳುವಷ್ಟು ಹತ್ತಿರದವರು. ಅದು ಕೇವಲ ಒಂದು ಕ್ಷಣದ ಅಸಮಾಧಾನ ಅಷ್ಟೆ. ನಮ್ಮ ನಡುವೆ ಯಾವುದೇ ದ್ವೇಷವಿಲ್ಲ,” ಎಂದು ಕಿತ್ತಾಟದ ವಿಷಯವನ್ನು ತಳ್ಳಿಹಾಕಿದರು.
