Home ರಾಜ್ಯ ಮೌಢ್ಯದಿಂದ ದೇಶದ ಏಳಿಗೆ ಎಂದಿಗೂ ಅಸಾಧ್ಯ ಎಂಬುದು ಸರ್ವ ಕಾಲಿಕ ಸತ್ಯ: ಎಚ್‌ ಸಿ ಮಹಾದೇವಪ್ಪ

ಮೌಢ್ಯದಿಂದ ದೇಶದ ಏಳಿಗೆ ಎಂದಿಗೂ ಅಸಾಧ್ಯ ಎಂಬುದು ಸರ್ವ ಕಾಲಿಕ ಸತ್ಯ: ಎಚ್‌ ಸಿ ಮಹಾದೇವಪ್ಪ

0

ಬೆಂಗಳೂರು: ಜನವರಿ 22ರಂದು ಮನೆಗಳಲ್ಲಿ ದೀಪ ಹಚ್ಚಿದರೆ ಅದು ಬಡತನ ನಿರ್ಮೂಲನಕ್ಕೆ ಪ್ರೇರಣೆಯಾಗುತ್ತದೆ ಎನ್ನುವ ಪ್ರಧಾನಿ ಮೋದಿಯವರ ಹೇಳಿಕೆಯನ್ನು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌ ಸಿ ಮಹಾದೇವಪ್ಪ ವಿರೋಧಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ತಾಣ ಎಕ್ಸ್‌ (ಟ್ವಿಟರ್) ಮೂಲಕ‌ ಹೇಳಿಕೆ ನೀಡಿರುವ ಅವರು, “ಮೌಢ್ಯತೆಯಿಂದ ದೇಶದ ಏಳಿಗೆ ಎಂದಿಗೂ ಅಸಾಧ್ಯ ಎಂಬುದು ಸರ್ವ ಕಾಲಿಕ ಸತ್ಯ. ಪ್ರಜಾಪ್ರಭುತ್ವ ರಾಜ್ಯಾಂಗದ ಮಾರ್ಗದಲ್ಲಿ ಆಡಳಿತ ನಡೆಸಬೇಕಿದ್ದ ಪ್ರಧಾನಿಗಳೇ ಮೌಢ್ಯವನ್ನು ಬಿತ್ತರಿಸುತ್ತಾ, ಧಾರ್ಮಿಕ ಮಂಡಳಿಯ ನಡವಳಿಕೆಯನ್ನು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಬಿತ್ತರಿಸುತ್ತಿರುವುದು ನಿಜವಾದ ದುರಂತಗಳಲ್ಲಿ ಒಂದು” ಎಂದು ಕಿಡಿ ಕಾರಿದ್ದಾರೆ.

ಅವರ ಹೇಳಿಕೆಯ ಮುಂದುವರೆದ ಭಾಗದಲ್ಲಿ “ದೀಪ ಹಚ್ಚುವ ಮೂಲಕ ಬಡತನ ನಿರ್ಮೂಲನೆ ಮಾಡುವ ಇಂತಹ ಮನಸ್ಥಿತಿಯ ಜನರು ಇರುವಾಗ, ಇವರಿಗೆ ಗರೀಬಿ ಹಟಾವೋದಂತಹ ಕಾರ್ಯಕ್ರಮಗಳಾಗಲೀ, ಉಳುವವನೇ ಭೂಮಿಯ ಒಡೆಯ ಕಾಯ್ದೆಯ ಮಹತ್ವವಾಗಲೀ, ಅನ್ನಭಾಗ್ಯದ ಪ್ರಾಮುಖ್ಯತೆಯಾಗಲೀ ತಿಳಿಯುವುದು ಅಸಾಧ್ಯವೇ ಸರಿ” ಎಂದು ಪ್ರಧಾನಿಯನ್ನು ಕುಟುಕಿದ್ದಾರೆ.

ʼನಮ್ಮ ಸರ್ಕಾರವು ಭಗವಾನ್ ರಾಮನ ಅದರ್ಶನಗಳಿಂದ ಪ್ರೇರಣೆ ಪಡೆದಿದೆ. ಹೀಗಾಗಿ ಪ್ರತಿಯೊಬ್ಬರೂ ಜ. 22ರಂದು ರಾಮ ಜ್ಯೋತಿಯನ್ನು ಬೆಳಗಬೇಕು. ಅದು ಅವರ ಬದುಕಿನಲ್ಲಿನ ಬಡತ ನಿರ್ಮೂಲನೆಗೆ ಪ್ರೇರಣೆಯಾಗಬೇಕು’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮಹಾರಾಷ್ಟ್ರದ ಸಭೆಯೊಂದರಲ್ಲಿ ಮನವಿ ಮಾಡಿದ್ದಾಗಿ ಕನ್ನಡ ದಿನಪತ್ರಿಕೆ ಪ್ರಜಾವಾಣಿ ವರದಿ ಮಾಡಿತ್ತು.

You cannot copy content of this page

Exit mobile version