“…ಆಮ್ ಆದ್ಮಿಗೆ ಕೊಟ್ಟಂತೆ ಹೆಚ್ಚುವರಿ ಒಂದು ಅವಧಿಯನ್ನು ಕಾಂಗ್ರೆಸ್ಗೆ ಅದು ಕರ್ನಾಟಕದಲ್ಲಿ ನೀಡುತ್ತದೆ ಎಂದು ಭಾವಿಸುವಂತಿಲ್ಲ. ಹಾಗಾಗಿ ಕಾಂಗ್ರೆಸ್ ಇಲ್ಲಿ, ಗ್ಯಾರಂಟಿಗಳ ಹ್ಯಾಂಗ್ಓವರ್ನಿಂದ ತುರ್ತಾಗಿ ಆಚೆ ಬಂದು ಅಣಿಯಾಗದಿದ್ದರೆ 2018ರ ವಿಧಾನಸಭೆ ಮತ್ತು 2014ರ ಲೋಕಸಭೆಯಲ್ಲಿ ಎದುರಾದ ನಿರಾಸೆಯೇ ಅದಕ್ಕೆ ಗತಿಯಾಗಲಿದೆ…” ಮಾಚಯ್ಯ ಹಿಪ್ಪರಗಿ ಅವರ ಬರಹದಲ್ಲಿ
ದಿಲ್ಲಿಯಲ್ಲಿ ಆಪ್ ಸೋಲೇನೊ ನಿರೀಕ್ಷಿತವಾಗಿತ್ತು. ಆದರೆ ಬಿಜೆಪಿಗೆ ಸಿಕ್ಕಿರುವ ಇಷ್ಟು ದೊಡ್ಡ ಗೆಲುವು ತುಸು ಅಳತೆಗೆ ಮೀರಿದ್ದು ಅನ್ನಿಸುತ್ತಿದೆ; ಜೊತೆಗೆ ಗಾಬರಿ ಹುಟ್ಟಿಸುವಂತದ್ದು. ಸೋತೇ ಬಿಡುವ ಅಪಾಯದಲ್ಲಿದ್ದ ಮಹಾರಾಷ್ಟ್ರದಲ್ಲಿ, ಬಿಜೆಪಿ ದಕ್ಕಿಸಿಕೊಂಡ ಭರ್ಜರಿ ಗೆಲುವಿನ ಸುತ್ತ ಹೊರಬೀಳುತ್ತಿರುವ ಆಘಾತಕಾರಿ ಅಕ್ರಮಗಳ ಮಾಹಿತಿಗಳ ನಡುವೆ ದಿಲ್ಲಿಯಲ್ಲಿ ಬಿಜೆಪಿ ಗೆಲುವನ್ನು ಯಾವ ತಕ್ಕಡಿಯಲ್ಲಿಟ್ಟು ತೂಗಬೇಕೆಂಬ ಗೊಂದಲ ಕಾಡುತ್ತಿದೆ.
ಆದರೆ ಈ ಫಲಿತಾಂಶದಿಂದಾಗಿ, ಮುಂದೆ ನಡೆಯಬಹುದಾದ ರಾಜಕೀಯ ಸಾಧ್ಯತೆಗಳನ್ನು ಅಂದಾಜಿಸಿದಾಗ ಅಪಾಯಕಾರಿ ಲಕ್ಷಣಗಳೇ ದಟ್ಟವಾಗಿ ಗೋಚರಿಸುತ್ತವೆ. ಮೊದಲನೆಯದಾಗಿ, ಗ್ಯಾರಂಟಿ ಯೋಜನೆಗಳನ್ನು ಅಪಾರವಾಗಿ ನಂಬಿಕೂತಿರುವ ಕರ್ನಾಟಕ ಕಾಂಗ್ರೆಸ್ಗೆ ಇಲ್ಲೊಂದು ತೀಕ್ಷ್ಣ ಪಾಠವಿದೆ. ಜನಪ್ರಿಯ ಅಥವಾ ಜನಪರ ಕಲ್ಯಾಣ ಕಾರ್ಯಕ್ರಮಗಳು ಚುನಾವಣೆಯಲ್ಲಿ ದೊಡ್ಡಮಟ್ಟದ ಯಶಸ್ಸು ತಂದುಕೊಡುತ್ತವೆ ಎಂಬ ಕಾಲ ಇದಲ್ಲ. ಈಗಿನ ದಿಲ್ಲಿ ಚುನಾವಣೆಯ ಮಾನದಂಡದಲ್ಲಿ ಮಾತ್ರವಲ್ಲ, ಹಿಂದೆ 2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಇದು ಸಾಬೀತಾಗಿದೆ. 2013ರಲ್ಲಿ ಅಧಿಕಾರಕ್ಕೇರಿ, ಭರಪೂರ ಭಾಗ್ಯಗಳನ್ನು ಕೊಟ್ಟಿದ್ದ ಇದೇ ಸಿದ್ದರಾಮಯ್ಯನವರ ಸರ್ಕಾರ, 2018ರಲ್ಲಿ ಸೋಲಬೇಕಾಯ್ತು. ಭಾಗ್ಯಗಳಿಗಿಂತ ಜನ, ಧರ್ಮ ಮತ್ತು ಜಾತಿಯ ಆಧಾರದಲ್ಲಿ ಮತ ಹಾಕಿದ್ದರು. ಕಾಂಗ್ರೆಸ್ ಪಕ್ಷ ತನ್ನ ಆಡಳಿತಕ್ಕೆ ಪ್ರತಿಯಾಗಿ ಶೇಕಡಾವಾರು ಮತಗಳಲ್ಲಿ ಏರಿಕೆಯನ್ನು ಕಂಡರೂ, ಅವುಗಳನ್ನು ಸೀಟುಗಳಾಗಿ ಬದಲಾಯಿಸಲು ಬೇಕಾದ ಸಾಂದ್ರೀಕೃತ ಎಲೆಕ್ಟೋರಲ್ ಪೊಲಿಟಿಕ್ಸ್ನಲ್ಲಿ ಮುಗ್ಗರಿಸಿತ್ತು. ತೀರಾ ಇತ್ತೀಚೆಗೆ 2024ರ ಲೋಕಸಭಾ ಚುನಾವಣೆಯಲ್ಲೂ ಇದು ಪುನರಾವರ್ತನೆಯಾಯ್ತು. ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ಹೊರತಾಗಿಯೂ ಕಾಂಗ್ರೆಸ್ ಗೆಲ್ಲಲು ಸಾಧ್ಯವಾದದ್ದು ಕೇವಲ 9 ಕ್ಷೇತ್ರಗಳಲ್ಲಿ ಮಾತ್ರ. 2019ರ ಫಲಿತಾಂಶಕ್ಕೆ ಹೋಲಿಸಿದರೆ ಇದು ಏರಿಕೆಯಂತೆ ಕಾಣಬಹುದು, ಆದರೆ 2024ರಲ್ಲಿ ಅದು ಇರಿಸಿಕೊಂಡಿದ್ದ ನಿರೀಕ್ಷೆ ಮತ್ತು ದೇಶಾದ್ಯಂತ ಬಿಜೆಪಿಗೆ ಮತದಾರರು ಪ್ರತಿಕ್ರಿಯಿಸಿದ ನೀರಸ ರೀತಿಯನ್ನು ಪರಿಗಣಿಸಿದಾಗ ಕಾಂಗ್ರೆಸ್ ಪಕ್ಷ ನಿರಾಸೆ ಅನುಭವಿಸಿದ್ದು ಸಾಬೀತಾಗುತ್ತೆ.
ಈಗ ದಿಲ್ಲಿಯಲ್ಲಿ ಆಪ್ನ ಸೋಲು ಕೂಡಾ, ಚುನಾವಣೆಯಲ್ಲಿ ಜನಪರ ಯೋಜನೆಗಳನ್ನಷ್ಟೇ ಅಪಾರವಾಗಿ ನಂಬಿಕೊಳ್ಳುವುದು ಅಷ್ಟೊಂದು ಸಾಧುವಲ್ಲ ಎಂಬುದನ್ನು ದೃಢಪಡಿಸುತ್ತದೆ. ಆರೋಗ್ಯ, ಶಿಕ್ಷಣ ಮತ್ತು ಮೂಲಸೌಕರ್ಯಗಳ ಕ್ಷೇತ್ರದಲ್ಲಿ ಆಮ್ ಆದ್ಮಿ ಸರ್ಕಾರ ಸಾಕಷ್ಟು ವಿನೂತನ ಮತ್ತು ಜನೋಪಕಾರಿ ಯೋಜನೆಗಳನ್ನು ಜಾರಿಗೆ ತಂದಿತ್ತು. ಉಚಿತ ವಿದ್ಯುತ್, ಉಚಿತ ನೀರು, ಮಹಿಳೆಯರಿಗೆ ಉಚಿತ ಪ್ರಯಾಣ, ಮೊಹಲ್ಲಾ ಕ್ಲಿನಿಕ್, ಸರ್ಕಾರಿ ಶಾಲೆಗಳ ಅತ್ಯಾಧುನಿಕ ಉನ್ನತೀಕರಣ ಹೀಗೆ ಗ್ಯಾರಂಟಿಗಳನ್ನು ಹೋಲುವ ಸಾಕಷ್ಟು ಜನಪ್ರಿಯ ಕಾರ್ಯಕ್ರಮಗಳನ್ನು ಆಮ್ ಆದ್ಮಿ ಜಾರಿಗೆ ತಂದಿತ್ತು. ಆದಾಗ್ಯೂ ಆಮ್ ಆದ್ಮಿ ಪಕ್ಷವನ್ನು ದಿಲ್ಲಿಯ ಜನ ತಿರಸ್ಕರಿಸಿದ್ದಾರೆ. 2018ರಲ್ಲಿ ಕರ್ನಾಟಕದ ಜನ ಭಾಗ್ಯಗಳ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಂತೆ!
ಹಾಗಾಗಿ, ಕರ್ನಾಟಕದ ಕಾಂಗ್ರೆಸಿಗರು ನಿಜಕ್ಕೂ ಬಿಜೆಪಿಯ ಕೋಮುವಾದಿ ರಾಜಕಾರಣವನ್ನು ಹಿಮ್ಮೆಟ್ಟಿಸುವ ದೂರದೃಷ್ಟಿ ಹೊಂದಿದ್ದರೆ, ಅವರು ಆದಷ್ಟು ಬೇಗ ಗ್ಯಾರಂಟಿ ಯೋಜನೆಗಳ ಹ್ಯಾಂಗ್ಓವರ್ನಿಂದ ಆಚೆ ಬಂದು ಕಾರ್ಯಶೀಲವಾಗಬೇಕಿದೆ. ಆಮ್ ಆದ್ಮಿಯವರ ಸೋಲನ್ನು ವಿಶ್ಲೇಷಿಸುತ್ತಿರುವವರು ಕೂಡಾ ಹೇಳುತ್ತಿರುವ ಒಂದು ಸಾಮಾನ್ಯ ಮಾತೆಂದರೆ, ತಾವು ಜಾರಿಗೆ ತಂದ ಜನಪ್ರಿಯ ಕಾರ್ಯಕ್ರಮಗಳನ್ನು ವಿಸ್ತರಿಸುವಲ್ಲಿ ಮತ್ತು ಆ ಮೂಲಕ ಅಭಿವೃದ್ಧಿಯ ವಿಶ್ವಾಸವನ್ನು ಚಾಲನೆಯಲ್ಲಿಡುವಲ್ಲಿ ಆಪ್ ಮುಗ್ಗರಿಸಿದ್ದರಿಂದಲೇ ಈ ಸೋಲು ಎನ್ನುತ್ತಾರೆ. ಅದು ನಿಜವೂ ಹೌದು.
ಮೊದಲ ಅವಧಿಯ ಆಪ್ ಆಡಳಿತ ವೈಖರಿಯನ್ನು ಗಮನಿಸಿಯೇ ದಿಲ್ಲಿ ಜನ ಎರಡನೇ ಅವಧಿಗೆ ಕೇಜ್ರಿವಾಲ್ ಪಕ್ಷವನ್ನು ಆಯ್ಕೆ ಮಾಡಿದ್ದರು. ಆದರೆ ಅಷ್ಟೊತ್ತಿಗಾಗಲೇ ಎಚ್ಚೆತ್ತುಕೊಂಡಿದ್ದ ಬಿಜೆಪಿ, ಎರಡನೇ ಅವಧಿಯಲ್ಲಿ ಆಮ್ ಆದ್ಮಿ ಪಕ್ಷ ಹೆಚ್ಚು ಕ್ರಿಯಾಶೀಲವಾಗದಂತೆ ನೋಡಿಕೊಳ್ಳುವಲ್ಲಿ ತಂತ್ರರೂಪಿಸಿತು. ಕೇಂದ್ರ ಸರ್ಕಾರ ಮತ್ತು ದಿಲ್ಲಿ ಲೆಫ್ಟಿನೆಂಟ್ ಗೌರ್ನರ್ ಜೊತೆ ಸಂಘರ್ಷದಲ್ಲೇ ಆಮ್ ಆದ್ಮಿ ಪಕ್ಷ ಮೈಮರೆಯುವಂತೆ ಮಾಡಿತು. ಪರಿಣಾಮವಾಗಿ ಆಪ್ ಸರ್ಕಾರ, ತಾನೇ ಅನುಷ್ಠಾನಕ್ಕೆ ತಂದಿದ್ದ ಯೋಜನೆಗಳನ್ನೂ ಹೊಸ ವ್ಯಾಪ್ತಿಗೆ ವಿಸ್ತರಿಸಲು ಸಾಧ್ಯವಾಗಲಿಲ್ಲ; ಹೊಸ ಯೋಜನೆಗಳನ್ನೂ ರೂಪಿಸಲು ಆಗಲಿಲ್ಲ. ಅರವಿಂದ್ ಕೇಜ್ರಿವಾಲ್, ಬಿಜೆಪಿಯ ಹುನ್ನಾರಗಳ ವಿರುದ್ಧ ಹೋರಾಡುವುದಕ್ಕೆ ತಮ್ಮನ್ನು ಸಂಪೂರ್ಣವಾಗಿ ತೆತ್ತುಕೊಂಡರೇ ವಿನಾ, ತಮ್ಮ ಪಕ್ಷದ ಆಶೋತ್ತರಗಳನ್ನು ಪೂರೈಸುವ ರಾಜಕಾರಣದಲ್ಲಿ ಮುಗ್ಗರಿಸಿದರು. ಆ ಸಂಘರ್ಷ ರಾಜಕೀಯವಾಗಿ ಜನರಿಗೆ ಒಂದು ರೋಚಕ ರಂಜನೆ ಒದಗಿಸಿದ್ದೇನೊ ನಿಜ, ಆದರೆ ತಮ್ಮ ಬದುಕಿನ ವಿಚಾರಕ್ಕೆ ಬಂದಾಗ ಜನರಿಗೆ ಆಪ್ ಆಡಳಿತ ಜಡಗಟ್ಟಿದಂತೆ ಭಾಸವಾಗತೊಡಗಿತು. ಅವರು ಭ್ರಮಾನಿರಸನಕ್ಕೆ ತುತ್ತಾದರು. ಪರಿಣಾಮ ಈ ಫಲಿತಾಂಶ!
ಜನಪರ ಯೋಜನೆಗಳ ಪ್ರಭಾವವನ್ನು ಮತ್ತು ಭ್ರಷ್ಟಾಚಾರರಹಿತ ರಾಜಕೀಯ ಇಮೇಜುಗಳನ್ನು ಹೇಗೆ ಕಟ್ಟಿಹಾಕಬಹುದು ಅನ್ನೋದನ್ನು ದಿಲ್ಲಿ ಪ್ರಯೋಗಶಾಲೆಯಲ್ಲಿ ಬಿಜೆಪಿ ಚೆನ್ನಾಗಿ ಮನದಟ್ಟು ಮಾಡಿಕೊಂಡಿದೆ. ಹಾಗಾಗಿ, ಆಮ್ ಆದ್ಮಿಗೆ ಕೊಟ್ಟಂತೆ ಹೆಚ್ಚುವರಿ ಒಂದು ಅವಧಿಯನ್ನು ಕಾಂಗ್ರೆಸ್ಗೆ ಅದು ಕರ್ನಾಟಕದಲ್ಲಿ ನೀಡುತ್ತದೆ ಎಂದು ಭಾವಿಸುವಂತಿಲ್ಲ. ಹಾಗಾಗಿ ಕಾಂಗ್ರೆಸ್ ಇಲ್ಲಿ, ಗ್ಯಾರಂಟಿಗಳ ಹ್ಯಾಂಗ್ಓವರ್ನಿಂದ ತುರ್ತಾಗಿ ಆಚೆ ಬಂದು ಅಣಿಯಾಗದಿದ್ದರೆ 2018ರ ವಿಧಾನಸಭೆ ಮತ್ತು 2014ರ ಲೋಕಸಭೆಯಲ್ಲಿ ಎದುರಾದ ನಿರಾಸೆಯೇ ಅದಕ್ಕೆ ಗತಿಯಾಗಲಿದೆ. ಗ್ಯಾರಂಟಿಗಳ ಹ್ಯಾಂಗ್ಓವರ್ನಿಂದ ಆಚೆ ಬರುವುದೆಂದರೆ ಗ್ಯಾರಂಟಿಗಳತ್ತ ನಿರ್ಲಕ್ಷ್ಯ ವಹಿಸುವುದಲ್ಲ. ಬದಲಿಗೆ, ಗ್ಯಾರಂಟಿಗಳಾಚೆಗೂ ಅಭಿವೃದ್ಧಿ ಜನರ ಕಣ್ಣಿಗೆ ಗೋಚರಿಸುವಂತೆ ಮಾಡುವುದು; ಮೋದಿ ಸರ್ಕಾರ ಮತ್ತು ಬಿಜೆಪಿ ಜೊತೆಗಿನ ಸಂಘರ್ಷವನ್ನು ಒಂದು ಮಿತಿಯಲ್ಲಿಟ್ಟುಕೊಳ್ಳುತ್ತಲೇ, ವಿರೋಧಿಗಳನ್ನು ಸೈದ್ದಾಂತಿಕವಾಗಿ ಮತ್ತು ಸಾಮಾಜಿಕವಾಗಿ ನಿಷ್ಠುರ ರೀತಿಯಲ್ಲಿ ಮುಖಾಮುಖಿಯಾಗುವುದು. ಇಲ್ಲಿ ಕಾಂಗ್ರೆಸ್ಗೆ ಪ್ರಚಾರದ ಮತ್ತು ನೆರೇಟಿವಿಟಿಯ ಜಾಣ್ಮೆಯೂ ಅಗತ್ಯವಿದೆ.
ಇನ್ನು ದಿಲ್ಲಿಯ ಗೆಲುವಿನಿಂದ ಬಿಜೆಪಿ ವೃದ್ಧಿಸಿಕೊಂಡಿರುವ ಶಕ್ತಿ ಮತ್ತು ವಿಶ್ವಾಸಗಳು ನಿಜಕ್ಕೂ ಅಪಾಯಕಾರಿಯಾದವು. ಜಾರ್ಖಂಡ್ನಲ್ಲಿ ಹೇಮಂತ್ ಸೊರೇನ್ ಅವರ ಸರ್ಕಾರವನ್ನು ಗೋಳು ಹೊಯ್ದುಕೊಂಡಿದ್ದ ಬಿಜೆಪಿಗೆ ಅಲ್ಲಿನ ಫಲಿತಾಂಶ ಸಣ್ಣ ಅಳುಕು ಹುಟ್ಟಿಸಿತ್ತು. ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರ ಅಧಿಕಾರಗಳನ್ನು ಬಳಸಿಕೊಂಡು ಪ್ರಾದೇಶಿಕ ಸರ್ಕಾರವೊಂದನ್ನು ಅಸ್ಥಿರಗೊಳಿಸಲು ಅಥವಾ ಸುಗಮವಾಗಿ ಆಡಳಿತ ನಡೆಸಲು ಬಿಡದೆ ಕೆಟ್ಟಹೆಸರು ತರಲು ಬಿಜೆಪಿ ಅಲ್ಲಿ ಯತ್ನಿಸಿತ್ತು. ಹೇಮಂತ್ ಸೊರೇನ್ ಅವರನ್ನು ಜೈಲಿಗೂ ಕಳಿಸಿತ್ತು. ಸೊರೇನ್ ಅನುಪಸ್ಥಿತಿಯಲ್ಲಿ ಜೆಎಂಎಂ ಸರ್ಕಾರದ ಸಿಎಂ ಆಗಿ ಆಡಳಿತ ನಡೆಸಿದ್ದ ಚಂಪೈ ಸೊರೇನ್ ಅವರು ಕೂಡಾ ಹೇಮಂತ್ ವಿರುದ್ಧ ಬಂಡೆದ್ದು ಪಕ್ಷದಿಂದ ಹೊರಬರುವಂತೆ ಮಾಡಿತ್ತು. ಆದರೆ ಅಲ್ಲಿಯ ಜನ ಹೇಮಂತ್ ನೇತೃತ್ವದ ಇಂಡಿಯಾ ಮೈತ್ರಿಕೂಟವನ್ನು ಗೆಲ್ಲಿಸಿದ್ದರು. ತಮ್ಮ ಇಂತಹ ದ್ವೇಷದ, ಅಸಹಕಾರದ, ಕುತಂತ್ರದ ರಾಜಕಾರಣಕ್ಕೆ ಜನ ತಿರುಗೇಟು ನೀಡುತ್ತಾರೆ ಎಂಬ ಅಳುಕು ಜಾರ್ಖಂಡ್ ಚುನಾವಣೆಯಿಂದ ಬಿಜೆಪಿಗೆ ಕಾಡುತ್ತಿತ್ತು. ಆದರೆ ಈಗ ದಿಲ್ಲಿ ಫಲಿತಾಂಶ ಅಂತಹ ಅಳುಕನ್ನು ಬಿಜೆಪಿಗೆ ಅಳಿಸಿಹಾಕಿದೆ. ಹೇಮಂತ್ ಸೊರೇನ್ಗಿಂತ ಕೆಟ್ಟದಾಗಿ ಆಪ್ ನಾಯಕರ ಮೇಲೆ ದಾಳಿ ನಡೆಸಿತು; ಆ ಸರ್ಕಾರವನ್ನು ಕಾಡಿತು. ಆದರೂ ಅಲ್ಲಿ ಅದು ಗೆದ್ದಿದೆ.
ಇದರರ್ಥ, ಇನ್ನುಮುಂದೆ ಬಿಜೆಪಿಯೇತರ ಸರ್ಕಾರಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಬಿಜೆಪಿ ಇಂತದ್ದೇ ತಂತ್ರವನ್ನು ಇದಕ್ಕಿಂತಲೂ ವ್ಯಾಪಕವಾಗಿ ಬಳಸುವ ಸಾಧ್ಯತೆಯಿದೆ. ನಮ್ಮ ತಂತ್ರಗಳು ಎಷ್ಟೇ ಕಾನೂನುಬಾಹಿರವಾಗಿರಲಿ, ಸಂವಿಧಾನವಿರೋಧಿಯಾಗಿರಲಿ ಮತ್ತು ಪ್ರಾದೇಶಿಕ ವಿರೋಧಿಯಾಗಿರಲಿ ಒಟ್ಟಿನಲ್ಲಿ ಆಡಳಿತಾರೂಢ ಪಕ್ಷಕ್ಕೆ ಸುಸೂತ್ರವಾಗಿ ಆಡಳಿತ ನಡೆಸಲು ಬಿಡದೆ ಕೆಟ್ಟ ಹೆಸರು ತಂದರೆ, ಚುನಾವಣೆಯಲ್ಲಿ ನಮ್ಮ ಪರವಾಗಿ ಫಲಿತಾಂಶವನ್ನು ದಕ್ಕಿಸಿಕೊಳ್ಳಬಹುದು ಎಂಬ ನಂಬಿಕೆಯನ್ನು ದಿಲ್ಲಿ ಫಲಿತಾಂಶ ಬಿಜೆಪಿಗೆ ತಂದುಕೊಟ್ಟಿದೆ.
ಕರ್ನಾಟಕದಲ್ಲೂ ಈ ಪ್ರಯೋಗವನ್ನು ನಾವು ಕಾಣಬೇಕಾಗುತ್ತದೆ. ಕಾಂಗ್ರೆಸ್ ಸರ್ಕಾರವನ್ನು ತಿವಿದು ಕೇಂದ್ರದೊಂದಿಗೆ ಸಂಘರ್ಷಕ್ಕೆ ಬರಮಾಡಿಕೊಳ್ಳುವುದು, ಇಲ್ಲಿನ ನಾಯಕರ ಮೇಲೆ ರಾಜಕೀಯ ಹಗೆತನಕ್ಕೆ ಮುಂದಾಗುವುದು, ರಾಜ್ಯಪಾಲರ ಮೂಲಕ ಸುಸೂತ್ರ ಆಡಳಿತಕ್ಕೆ ಕೊಕ್ಕೆ ಹಾಕುವುದು, ಪಕ್ಷವನ್ನು ಒಡೆಯಲೆತ್ನಿಸುವುದು, ಕೇಂದ್ರದಿಂದ ಅಸಹಕಾರ ತೋರುವುದು, ಆ ಸಿಟ್ಟು ರಾಜ್ಯ ಸರ್ಕಾರದ ಮೇಲೆ ತಿರುಗುವಂತೆ ಮಾಡುವುದು…. ಒಟ್ಟಿನಲ್ಲಿ `ಹಾಳಾದ ಈ ಸರ್ಕಾರ ತೊಲಗಲಿ’ ಎಂಬ ಅಭಿಪ್ರಾಯ ಜನರಲ್ಲಿ ಮೂಡುವಂತೆ ಮಾಡಲು ಬಿಜೆಪಿ ಯತ್ನಿಸುತ್ತದೆ. ಆಮ್ ಆದ್ಮಿ ಸರ್ಕಾರವನ್ನು ಬಿಜೆಪಿ ಸತತವಾಗಿ ಸಿಲುಕಿಸುತ್ತಾ ಬಂದದ್ದು ಇಂತದ್ದೇ ಖೆಡ್ಡಾದೊಳಕ್ಕೆ!
ಈಗಾಗಲೇ ಆ ಯತ್ನಕ್ಕೆ ಬಿಜೆಪಿ ಮುಂದಾಗಿದೆ. ಮೈಕ್ರೊಫೈನಾನ್ಸ್ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ವಾಪಾಸ್ ಕಳಿಸಿದ್ದಾಗಲಿ, ತನ್ನದೇ ಕೇಂದ್ರ ಸಮಿತಿಯ ಮೂಲಕ ಅವೈಜ್ಞಾನಿಕವಾಗಿ ಮೆಟ್ರೋ ದರ ಏರಿಕೆಯಾಗುವಂತೆ ಮಾಡಿದ್ದಾಗಲಿ, ದಿಲ್ಲಿ ಫಲಿತಾಂಶ ಬಂದ ಮಾರನೇ ದಿನವೇ ರಾಜ್ಯಾಧ್ಯಕ್ಷ ವಿಜಯೇಂದ್ರನನ್ನು ದಿಢೀರ್ ದಿಲ್ಲಿಗೆ ಕರೆಸಿಕೊಂಡಿದ್ದಾಗಲಿ ಎಲ್ಲವೂ ಬಿಜೆಪಿಯ ಈ ತಯಾರಿಯ ಸೂಚಕಗಳು. ಒಳಗೊಳಗೇ ಅಧಿಕಾರ ಹಂಚಿಕೆಯ ಬೇಗುದಿಯಲ್ಲಿ ಕುದಿಯುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕೆಂದರೆ, ಮೊದಲು ರಾಜ್ಯ ಬಿಜೆಪಿಯೊಳಗಿರುವ ಒಡಕುಗಳನ್ನು ಸರಿ ಮಾಡಬೇಕು. ಇಷ್ಟು ದಿನ ಆ ಭಿನ್ನಮತವನ್ನು ನಿಭಾಯಿಸುವಲ್ಲಿ ಅಷ್ಟೇನೂ ಆಸಕ್ತಿ ತೋರದಿದ್ದ ಬಿಜೆಪಿ ಹೈಕಮಾಂಡ್ ದಿಢೀರ್ ವಿಜಯೇಂದ್ರನನ್ನು ದಿಲ್ಲಿಗೆ ಕರೆಸಿಕೊಂಡು ಒಳಗಿನ ತಳಮಳಗಳನ್ನೆಲ್ಲ ಸರಿಪಡಿಸುವ ಕೆಲಸಕ್ಕೆ ಮುಂದಾಗಿರೋದೆ ಈ ಕಾರಣಕ್ಕೆ.
ಈಗ ರಾಜ್ಯ ಕಾಂಗ್ರೆಸ್ ಸರ್ಕಾರ ಮೊದಲಿಗಿಂತಲೂ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಿದೆ. ಒಳಗಿನ ಮನಸ್ತಾಪಗಳನ್ನು ಸರಿಮಾಡಿಕೊಳ್ಳುವುದರ ಜೊತೆಗೆ, ಗ್ಯಾರಂಟಿಯ ಹೊರತಾಗಿಯೂ ಅಭಿವೃದ್ಧಿಯ ಅನುಭವವನ್ನು ಜನರಿಗೆ ದಾಟಿಸುವ ಕೆಲಸಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ…..ದಿಲ್ಲಿ ಫಲಿತಾಂಶವೇ ಇಲ್ಲಿ!!!
- ಮಾಚಯ್ಯ ಎಂ ಹಿಪ್ಪರಗಿ