Home Uncategorized ʼನಿನಗೆ ನೀನೇ ಗೆಳೆಯಾʼ; ಅನಾರ್ಕಿಕ್‌ ಬದುಕಿಗೊಂದು ನುಡಿನಮನ

ʼನಿನಗೆ ನೀನೇ ಗೆಳೆಯಾʼ; ಅನಾರ್ಕಿಕ್‌ ಬದುಕಿಗೊಂದು ನುಡಿನಮನ

0

ನುಡಿನಮನ

ಹಿರಿಯ ಲೇಖಕ, ಚಿಂತಕ, ಸಾಮಾಜಿಕ ಹೋರಾಟಗಾರ, ಫ್ಯಾಸಿಸಂನ ಪ್ರಬಲ ವಿರೋಧಿ ಪಟ್ಟಾಭಿರಾಮ ಸೋಮಯಾಜಿಯವರು ನಿಧನರಾಗಿದ್ದಾರೆ. ಕೋಮು ಸೌಹಾರ್ದ ವೇದಿಕೆ ಸಹಿತ ಹಲವು ಜನಪರ ಸಂಘಟನೆಗಳ ಪ್ರತಿಭಟನೆ, ಚಳುವಳಿಗಳಲ್ಲಿ ಸಕ್ರಿಯರಾಗಿದ್ದ ಪಟ್ಟಾಭಿಯವರಿಗೆ ನುಡಿನಮನ ಬರೆದಿದ್ದಾರೆ ಅವರ ಹೋರಾಟದ ಗೆಳೆಯ, ಚಿಂತಕ ಕೆ ಫಣಿರಾಜ್‌.

ನಿನಗೆ ನೀನೇ ಗೆಳೆಯಾ, ನಿನಗೆ ನೀನೇ..! 

ಅವರಿವರ ನಂಬುಗೆಯ ಮಳಲ ರಾಶಿಯ ಮೇಲೆ

ಬಾಳಮನೆಯನು ಮುಗಿಲಿಗೆತ್ತರಿಸಲಿಹೆಯಾ?.

ನಿನಗೆ ನೀನೇ.ಗೆಳೆಯಾ, ನಿನಗೆ ನೀನೇ..!.


ಮನ ಸಿಡಿದು ಹೋಳಾಗುತಿರುವ ವೇಳೆ,

ಕನಸುಗಳ ಗುಳ್ಳೆಗಳು ಒಡೆದೊಡೆದು ಬೀಳೆ

ಜನಮದೀ ರಿಂಗಣದಿ ಕಾಲುಗಳು ಸೋಲೆ,

ನಿನಗೆ ನೀನೇ.ಗೆಳೆಯಾ, ನಿನಗೆ ನೀನೇ!

-ಗೋಪಾಲಕೃಷ್ಣ ಅಡಿಗ

‘ಸಾಹಿತ್ಯ ವಿಮರ್ಶಕ, ಸಾಮಾಜಿಕ ಹೋರಾಟಗಾರ, ವಿಶ್ರಾಂತ ಇಂಗ್ಲೀಷ್ ಪ್ರಾಧ್ಯಾಪಕ ಪಟ್ಟಾಭಿರಾಮ ಸೋಮಯಾಜಿಯವರು, ಕೆಲ ವರ್ಷಗಳ ಅನಾರೋಗ್ಯದ ಕಾರಣವಾಗಿ, ತಮ್ಮ 64ನೇ ವಯಸ್ಸಿನಲ್ಲಿ ತೀರಿಕೊಂಡಿದ್ದಾರೆ’ ಎನ್ನುವುದು ಒಂದು ಸಾಧಾರಣ ಮಾಹಿತಿ. ಇಲ್ಲಿ ಪಟ್ಟಾಭಿಯವರ ಹೆಸರಿನ ಬದಲಾಗಿ, ಅದೇ ಲಕ್ಷಣಗಳನ್ನುಳ್ಳ ಮತ್ತೊಬ್ಬ ವ್ಯಕ್ತಿಯ ಹೆಸರು ಸೇರಿಸಿದರೂ ಅರ್ಥದಲ್ಲಿ ಬದಲಾವಣೆ ಆಗುವುದಿಲ್ಲ. ಮಾಹಿತಿಗಳು ವ್ಯಕ್ತಿಗಳನ್ನು ಸಾಧಾರಣಗೊಳಿಸುವುದಿಲ್ಲ, ವ್ಯಕ್ತಿತ್ವಗಳನ್ನು ಸಾಧಾರಣ ಗೊಳಿಸಿಬಿಡುತ್ತವೆ. ಒಂದೇ ಕಾಲ ದೇಶದಲ್ಲಿ, ಒಂದೇ ನಮೂನೆಯ ಸಾಮಾಜಿಕ ಸ್ತರದಲ್ಲಿ ಬದುಕುವ ವ್ಯಕ್ತಿಗಳ ವ್ಯಕ್ತಿತ್ವಗಳು ವೈವಿಧ್ಯಮಯವೂ, ವಿಲಕ್ಷಣವೂ ಆಗಿರುತ್ತವೆ ಎಂಬ ಸಾಮಾಜಿಕ ವಾಸ್ತವವು ನಮ್ಮಲ್ಲಿ ಭಯವನ್ನು ಹುಟ್ಟಿಸುತ್ತದೆ. ಯಾಕೆಂದರೆ, ಈ ವಾಸ್ತವವನ್ನು ಒಪ್ಪಿಕೊಂಡು ಬಿಟ್ಟರೆ, ವ್ಯಕ್ತಿಗಳನ್ನು ನಿಯಂತ್ರಿಸುವುದೂ, ಲೋಕಾರೂಢಿಗೆ ಒಗ್ಗಿಸುವುದೂ ಕಷ್ಟವಾಗಿ ಬಿಡುತ್ತದೆ; ಅಧಿಕಾರ ನಿರಾಕರಣೆಗೆ (ಅನಾರ್ಕಿ) ಘನತೆ ಬಂದು ಬಿಡುತ್ತದೆ! ಸರಿ-ತಪ್ಪು, ಒಳಿತು-ಕೆಡುಕುಗಳನ್ನು  ಸ್ಥಾಪಿತ ಪಟ್ಟಿಗಳಿಗೆ ಹೊಂದಿಸಿ ನಿರ್ಣಯಿಸುವುದು ಕಠಿಣವಾಗಿ ಬಿಡುತ್ತದೆ; ವ್ಯಕ್ತಿಗಳ ಸಾಮಾಜಿಕ ನಡುವಳಿಕೆಗಳಿಗೆ ಕಾರಣಗಳು, ಆ ನಡುವಳಿಕೆಗಳ ಪರಿಣಾಮಗಳ ಆಧಾರದಲ್ಲಿ ಸರಿ-ತಪ್ಪು, ಒಳಿತು-ಕೆಡುಕಗಳನ್ನು ತೂಗುವ ಜವಾಬ್ದಾರಿ ಹೆಗಲಿಗೆ ಹೇರಿಕೊಳ್ಳುತ್ತದೆ!


ಜುಲೈ 1, 2023ರಂದು ತೀರಿಕೊಂಡ ಗೆಳೆಯ ಪಟ್ಟಾಭಿರಾಮ ಸೋಮಯಾಜಿಯವರ ಕುರಿತು ಮಾತನಾಡಲು ಹೊರಡುವಾಗ ಈ ಬಗೆಯ ವರಾತದಿಂದಲೇ ಶುರುವಿಟ್ಟುಕೊಳ್ಳದೆ ವಿಧಿ ಇಲ್ಲ; ಯಾಕೆಂದರೆ ಅವರು ತಮ್ಮ ಬದುಕಿನ ನಡೆ ನುಡಿಗಳಲ್ಲಿ ಇದೇ ಬಗೆಯ ವರಾತಗಳನ್ನು ನೆಚ್ಚಿಕೊಂಡಿದ್ದರು.


ಪಟ್ಟಾಭಿಯವರು ಇಂಗ್ಲೀಷ್ ಸಾಹಿತ್ಯದ ವಿದ್ಯಾರ್ಥಿಯಾಗಿದ್ದು, ಅವರ ಯೌವನ ಕಾಲದ (1970ರ ದಶಕ) ಯೌವನಿಗರ ತುಡಿತವಾಗಿತ್ತು ಎಂಬ ಕಾರಣಕ್ಕೆ ಇರಬೇಕು. ಕನ್ನಡ ಸಾಹಿತ್ಯದಲ್ಲಿ ಪ್ರಸಿದ್ಧಿ ಪಡೆಯುತ್ತಿದ್ದವರಲ್ಲಿ ಅನೇಕರು ಇಂಗ್ಲೀಷ್ ಸಾಹಿತ್ಯದಲ್ಲಿ ವಿದ್ಯಾಭ್ಯಾಸ ಮಾಡಿ, ಇಂಗ್ಲೀಷ್ ನಲ್ಲಿ ದೊರಕುತ್ತಿದ್ದ ಪಶ್ಚಿಮದ ತತ್ವವಿಚಾರ, ಸಾಹಿತ್ಯಗಳ ಕುರಿತು ಬರೆದು ಚರ್ಚಿಸುತ್ತಿದ್ದ ಕಾಲವದು. ಪಟ್ಟಾಭಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಹೋಗಿ ಪದವಿ ಪಡೆದದ್ದು ಕಾಲದ ಗುಣವೇ ಆಗಿತ್ತು. ಅವರು ಬರೆದದ್ದು ಕಡಿಮೆ, ವೇದಿಕೆಗಳಿಂದ ಮಾತನಾಡಿದ್ದು ಜಾಸ್ತಿ. ಮೊದಲಿಗೆ ನವ್ಯವಿಮರ್ಶೆಯ ಮಾನದಂಡಗಳಿಂದ ಕೆಲವು ವಿಮರ್ಶೆಗಳನ್ನು ಅವರು ಬರೆದದ್ದು ಇದೆ. 1990ರ ದಶಕದಲ್ಲಿ ಅವರು ಕರ್ನಾಟಕದ ವಿವಿಧ ಚಳುವಳಿಗಳಲ್ಲಿ ಭಾಗವಹಿಸಲು ಶುರು ಮಾಡಿದ ನಂತರ ಅವರ ಸಾಹಿತ್ಯದ ಗ್ರಹಿಕೆಯ ವಿಧಾನವೇ ಬದಲಾಯಿತು. ಅಲ್ಲಿಯವರೆಗೂ ಸಾಹಿತ್ಯದ ಮೂಲಕ ಸಮಾಜದ ಬದುಕನ್ನು ಗ್ರಹಿಸುತ್ತಿದ್ದವರು, ಆ ನಂತರದಲ್ಲಿ ಬದುಕಿನ ಮೂಲಕ ಸಾಹಿತ್ಯದ ಗುಣವನ್ನು ಅರಿಯುವ ಕಡೆ ಹೊರಳಿದರು. ಅವರ ಮಾತು ಬರಹಗಳಲ್ಲಿ ನಾವು ಸಾಧಾರಣವಾಗಿ ಯಾವುದನ್ನು ‘ಸಾಹಿತ್ಯ ವಿಮರ್ಶೆ’ ಎಂಬ ಲಕ್ಷಣದಲ್ಲಿ ಗುರುತಿಸುತ್ತೇವೋ, ಆ ಲಕ್ಷಣಗಳು ಕಾಣೆಯಾಗ ತೊಡಗಿದವು; ನಿತ್ಯದ ಬದುಕಿನ ಸಾಮಾನ್ಯ ತವಕ ತಲ್ಲಣಗಳ ನಿರೂಪಣೆಗಳ ಮೂಲಕ ಸಾಮಾಜಿಕ ಅಧಿಕಾರದ ಸ್ವರೂಪ, ಮನುಷ್ಯರ ಸಾಮಾಜಿಕ  ಬದುಕಿನ ಸಂಕಟಗಳ ನಿರೂಪಣೆಗಳನ್ನು ಅವರು ಸಾಹಿತ್ಯ ಪಠ್ಯಗಳ ಮೂಲಕ ಹೇಳತೊಡಗಿದರು. ಕುವೆಂಪು ತಮ್ಮ ಬದುಕಿನ ಕಥನವಾದ ‘ನೆನಪಿನ ದೋಣಿಯಲ್ಲಿ’  ಭಾರತದ ರಾಜಕೀಯ, ಸಾಮಾಜಿಕ ಅಧಿಕಾರಗಳ ವರಸೆಗಳನ್ನು  ಪದರು ಪದರಾಗಿ ತೆರೆದಿಡುತ್ತಾರೆ ಎಂಬ ಪಟ್ಟಾಭಿಯವರ ವಿಶ್ಲೇಷಣೆಯು ಸಾಹಿತ್ಯವನ್ನು ಓದುವ ಭಿನ್ನ ಬಗೆಯನ್ನು ಪರಿಚಯಿಸುವ ಬರಹವಾಗಿದೆ. ಸಾಹಿತ್ಯ ಸಂಸ್ಕೃತಿಗಳ ಕುರಿತ ಸಭೆಯೇ ಇರಲಿ, ಸಾಮಾಜಿಕ ಚಳುವಳಿಗಳ ಕುರಿತ ಸಭಾ ವೇದಿಕೆಯೇ ಇರಲಿ, ಪಟ್ಟಾಭಿ ಚೌಕಟ್ಟುಗಳನ್ನು ಕಿತ್ತಾಕಿ ವರ್ತಮಾನದ ವಿದ್ಯಮಾನಗಳನ್ನು ಸಾಹಿತ್ಯ ಪಠ್ಯ, ತತ್ವಶಾಸ್ತ್ರ ವಿಚಾರಗಳ ಜೊತೆ ಹೆಣೆದು ನಿರಾಳವಾಗಿ ವ್ಯಾಖ್ಯಾನಿಸುತ್ತ ನಿಂತುಬಿಡುತ್ತಿದ್ದರು. ಈ ಬಗೆ ಹಲವರಲ್ಲಿ ಅಚ್ಚರಿ ಹುಟ್ಟಿಸುತ್ತಿದ್ದರೆ, ಮತ್ತೆ ಕೆಲವರಿಗೆ ಕಿರಿ ಕಿರಿ ಉಂಟುಮಾಡುತ್ತಿದ್ದದ್ದು ಸಾಮಾನ್ಯವಾಗಿತ್ತು. ಆದರೆ ಪಟ್ಟಾಭಿ ಅವುಗಳ್ಯಾವುದರಿಂದಲೂ ವಿಚಲಿತರಾದಂತೆ ಕಾಣುತ್ತಿರಲಿಲ್ಲ.


ಅವರು ಇಂಗ್ಲೀಷ್ ಮೇಷ್ಟ್ರಾಗಿ ತರಗತಿಗಳಲ್ಲಿ ಇದೇ ಬಗೆಯ ಸಾಹಿತ್ಯ ಪಾಠ ಮಾಡುವುದು, ಅದರ ನೈತಿಕ ಮುಂದುವರಿಕೆ ಎಂಬಂತೆ ಕಾಲೇಜಿನ ಆಡಳಿತ ಮಂಡಳಿಗಳ ಅಧಿಕಾರವನ್ನು ಎದುರು ಹಾಕಿಕೊಳ್ಳುವುದೂ ಸಾಮಾನ್ಯವಾಗತೊಡಗಿತ್ತು. ಅವರು ಪರಿಸರ ಚಳುವಳಿ, ಕೋಮು ಸೌಹಾರ್ದ  ಚಳುವಳಿಗಳಲ್ಲಿ  ತೀವ್ರವಾಗಿ ತೊಡಗಿಸಿಕೊಂಡ ನಂತರವಂತೂ ಆಡಳಿತ ಮಂಡಳಿಯಿಂದ ‘ಷೋ ಕಾಸ್ ನೋಟಿಸು’, ‘ಅಮಾನತ್ತು ನೋಟಿಸು’, ‘ಶಿಕ್ಷಾ ವರ್ಗಾವಣೆ’ ಗಳ ಸರಣಿ ಸಾಧಾರಣವಾಗಿ ಹೋಗಿತ್ತು. ಈ ಕಾರಣವಾಗಿ ಅವರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಪಾಠ ಮಾಡುವ ಅವಕಾಶದಿಂದ ವಂಚಿತರಾಗಬೇಕಾಯಿತು. ‘ಕೊಂಚ ಹೊಂದಾಣಿಕೆ ಮಾಡಿಕೊಂಡು ಹುಷಾರಿಂದ ಕೆಲಸ ಮಾಡಿ’ ಎಂಬ ಹಿತೈಷಿಗಳ ಸಲಹೆಗೆ ಪಟ್ಟಾಭಿ ‘ ನಾನು ಏನ್ಸಾರ್ ತಪ್ಪು ಮಾಡುತ್ತಿದ್ದೇನೆ! ನಾನು ಮೇಷ್ಟ್ರಾಗಿರೋ ಹೊತ್ತಿಗೇ ನಾಗರಿಕ ಹಕ್ಕಿರುವ ಒಬ್ಬ ಪ್ರಜೆ ಕೂಡ ಆಗಿದ್ದೇನೆ. ಎರಡನ್ನೂ ಬೇರೆ ಹ್ಯಾಗ್ ಮಾಡಕಾಗುತ್ತೆ?’ ಎಂಬ ಕಠಿಣ ನೈತಿಕ ಸವಾಲು ಮುಂದಿಡುತ್ತಿದ್ದರು; ಅವರ ಕೆಲಸ ಉಳಿಸುವುದು ನಾಗರಿಕರಾಗಿ ನಮ್ಮ ಹೊಣೆಯೂ ಹೌದು ಎಂದು ಸಂಗಾತಿಗಳು, ಹಿತೈಷಿಗಳು ವ್ಯಾಜ್ಯ ನಿರ್ವಹಣೆಯಲ್ಲಿ ಭಾಗಿಯಾಗುವುದು- ಇವು ಅವರು ಕೆಲಸದಿಂದ ವಿಶ್ರಾಂತರಾಗುವವರೆಗೂ ನಡೆದೇ ಇತ್ತು. ಇದು ಪಟ್ಟಾಭಿಯವರೊಬ್ಬರ ಪಾಡಲ್ಲ. ಅವರ ತಲೆಮಾರಿನ ಹಲವಾರು ಕಾಲೇಜು ಮೇಷ್ಟ್ರುಗಳು ಇದೇ ಪರಿಸ್ಥಿತಿಯಲ್ಲಿ, ಇದೇ ನೈತಿಕ ಸವಾಲಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ಪಟ್ಟಾಭಿಯವರ ವೃತ್ತಿ ಬದುಕಿನ ವಿಲಕ್ಷಣತೆಯು ನಮ್ಮ ಸಾಮಾಜಿಕ ಸ್ಥಿತಿಗತಿಯನ್ನೂ ತೋರಿಸುವ ರಾವುಗನ್ನಡಿ ಆಗಿರುವುದನ್ನು ಸೂಚಿಸುತ್ತದೆ.


1990ರ ದಶಕದ ನಂತರದ ಚಳುವಳಿಗಳಲ್ಲಿ ಭಾಗಿಯಾಗಿದ್ದ 1960ರ ದಶಕದ ತಲೆಮಾರಿನ ಅನೇಕರು 1970-80ರ ದಶಕಗಳಲ್ಲಿ ಚಳುವಳಿ ಕಟ್ಟಿದ ಸಂಘಟನೆಗಳ ಸಖ್ಯದಲ್ಲಿ ಇದ್ದವರಾಗಿದ್ದಾರೆ. ಆದರೆ ಪಟ್ಟಾಭಿ ಇದಕ್ಕೆ ಅಪವಾದವಾಗಿದ್ದರು. ಅವರು 1990ರ ದಶಕದಲ್ಲಿ ಚಳುವಳಿಗಳ ಸಖನಾಗಿದ್ದು ತಾನು ತನ್ನ ಬದುಕಿನ ದಿಕ್ಸೂಚಿಯಂತೆ ನೆಚ್ಚಿಕೊಂಡಿದ್ದ ಸಾಹಿತ್ಯ ತಾತ್ವಿಕತೆಯ ನೈತಿಕ ಒತ್ತಾಯದಲ್ಲಿ. ವೃತ್ತಿಯ ಪ್ರತಿಕೂಲ ವಾತಾವರಣದ ನಡುವೆಯೂ ಅವರು ಚಳುವಳಿಗಳಲ್ಲಿ ತೀವ್ರವಾಗಿ ತೊಡಗಿಕೊಂಡು ಕರ್ನಾಟಕದಾದ್ಯಂತ ಸುತ್ತತೊಡಗಿದ್ದರು; ಚಳುವಳಿಗಳ ವಲಯದಲ್ಲಿ ಅವರ ಕುರಿತು ಅಭಿಮಾನ-ಪ್ರೀತಿ ವೃದ್ಧಿಸಿದ್ದು ಮಾತ್ರವಲ್ಲದೆ ಪಟ್ಟಾಭಿಯವರಿಗೂ ಸಾರ್ವಜನಿಕ ಬದುಕಿನ ಹೊಸ ವಲಯದ ಪರಿಚಯವಾಗಿ ಅವರ ಸಾಹಿತ್ಯದ ಅರಿವಿನ ಬಗೆಯು ಬದಲಾಯಿತು. ಆದರೆ, ಈ ಅನುಬಂಧಗಳು ಯಾವತ್ತೂ ಸುಸೂತ್ರವಾದವುಗಳಲ್ಲ. ಬೃಹತ್‌ ಅಧಿಕಾರ ವ್ಯವಸ್ಥೆಯನ್ನು ಎದುರಿಸುವ ಕಡಿಮೆ ಕಸುವಿನ ಭಿನ್ನಮತದ ಚಳುವಳಿಗಳಿಗಳಿಗೆ ಸುಶಿಕ್ಷಿತ ಮಧ್ಯಮವರ್ಗದ ಸಾರ್ವಜನಿಕ ಭಾಗವಹಿಸುವಿಕೆಯ ಅವಶ್ಯಕತೆ ತುಂಬಾ ಇರುತ್ತದೆ, ಅವುಗಳ ಮೌಲ್ಯವೂ ಹೆಚ್ಚುತ್ತದೆ. ಅದೇ ಬಗೆಯಲ್ಲಿ ಸುಶಿಕ್ಷಿತ ವರ್ಗದ ಮಂದಿಗೂ, ತಮ್ಮ ಸೀಮಿತ ಬದುಕಿನಾಚೆಯ ಲೋಕಾನುಭವವು ದಕ್ಕಿ, ಅವರ ಬದುಕಿನ ತಾತ್ವಿಕತೆಯೂ ವಿಸ್ತರಿಸುತ್ತದೆ. ಇದೆಲ್ಲಾ ವಿವರ ಸರಿಯಾದರೂ, ಚಳುವಳಿಗಳು ಕನಿಷ್ಟ ಮಟ್ಟದ ವ್ಯಕ್ತಿವಿಶಿಷ್ಟತೆಗಳನ್ನು ಮಾತ್ರ ಗೌರವಿಸುತ್ತವೆ, ಗರಿಷ್ಟ ಮಟ್ಟದ ಸಾಮೂಹಿಕ ನಿಯಮಬದ್ಧತೆಯನ್ನು ಬೇಡುತ್ತವೆ. ವ್ಯಕ್ತಿವಿಶಿಷ್ಟತೆಯನ್ನೇ ಘನ ನೈತಿಕ ನಿಲುವಾಗಿಟ್ಟುಕೊಂಡ ಸುಶಿಕ್ಷಿತರಿಗೆ ಸಾಮೂಹಿಕ ನಿಯಮಬದ್ಧತೆ ರುಚಿಸುವುದಿಲ್ಲ. ಎರಡರ ನಡುವಿನ ಬಿಗು ಸಮತೋಲದಲ್ಲಿ ಇರುವಷ್ಟು ಇರುತ್ತದೆ; ಹೆಚ್ಚಾದರೆ ಹರಿದು ಹೋಗುತ್ತದೆ. ಪಟ್ಟಾಭಿಯವರ ವಿಷಯದಲ್ಲೂ ಅಂಥದ್ದೇ ಆಯಿತು.

ಪಟ್ಟಾಭಿಯವರ ವೈಯಕ್ತಿಕತೆ ಅಡಿಗರ ಪದ್ಯ ‘ನಿನಗೆ ನೀನೇ ಗೆಳೆಯ’ ಎಂಬ ತಾತ್ವಿಕತೆಯದು; ನಂಬುಗೆಯ ಮಳಲರಾಶಿಯ  ಮೇಲೆ/ಬಾಳಮನೆಯನು ಮುಗಿಲಿಗೆತ್ತರಿಸಲಿಹೆಯಾ?’ ಎಂಬ ತಮ್ಮ ವೈಯಕ್ತಿಕ ಬದುಕಿನ ಸಂದಿಗ್ಧದಲ್ಲಿ ಅವರ  ಖಾಸಗಿ ಬದುಕಿನ ಬಿಕ್ಕಟ್ಟುಗಳು ಚಳುವಳಿಯ ಜೊತೆಗಿನ ಅವರ ಸಂಬಂಧದಲ್ಲಿ ಬಿರುಕು ತಂದವು. ಎರಡುವರೆ ದಶಕಗಳ ಅವರ ಚಳುವಳಿಗಳ ಜೊತೆಯ ನಂಟು, ಬದುಕಿನ ಕೊನೆಯ ಹತ್ತು ವರ್ಷಗಳಲ್ಲಿ ತೆಳುವಾಗಿ ಹೋಯಿತು. ಪಟ್ಟಾಭಿಯವರು ಬಾಲ್ಯದಲ್ಲೇ ತಂದೆ ತಾಯಿಯರನ್ನು ಕಳೆದುಕೊಂಡು ನೆಂಟರ ಆಸರೆಯಲ್ಲಿ ಬೆಳೆದವರು. ಅವರಿಗೆ ಒಂದು ಜೀವಂತ ಸಂಬಂಧಗಳ ಹಂಬಲವಿದ್ದ ಹಾಗೇ ಒಂಟಿ ಬದುಕಿನ ನೆಮ್ಮದಿಯೂ ಒಗ್ಗಿ ಹೋಗಿತ್ತು. ಒಂಟಿತನದ ಅಭಿಲಾಷೆ ಹಾಗು ಸಂಸಾರ ಜೀವನಗಳನ್ನು ಸರಿದೂಗಿಸುವುದು ದುರ್ಬರ. ಮತ್ತೊಬ್ಬರ ಜೊತೆ ಹೊಂದಿಕೊಂಡು ನಿತ್ಯ ಸಂಸಾರ ನಡೆಸಲು ನಿರಾಕರಿಸುವವರ ವಾಸ್ತವಿಕ ವ್ಯಕ್ತಿ ಗುಣಗಳು ರೂಢಿಗತ ಸಾಮುದಾಯಿಕ ಬದುಕಿಗೆ ಒಂದು ಸವಾಲು. ಅಂಥ ಸವಾಲು ಎಸೆದು ಹಲವು ಕಾಲ ಅವರೂ ನೋವು ಅನುಭವಿಸಿದರು, ಕ್ಷಣಿಕ ಸಂಬಂಧ ಹೊಂದಿದವರೂ ನೋವುಂಡರು. ಹಾಗಂತ ಪಟ್ಟಾಭಿಯವರ ಜೈವಿಕ ಬದುಕು ಕೊನೆಗೊಂಡಿದ್ದರೂ, ಅವರ ಬದುಕಿನ  ಅನಾರ್ಕಿಕ್ ವ್ಯಕ್ತಿತ್ವವನ್ನು ಸಾಮುದಾಯಿಕ ಬದುಕು ಎದುರಿಸುತ್ತಲೇ ಇರಬೇಕಾಗುತ್ತದೆ.

ಕೆ. ಫಣಿರಾಜ್

ಪ್ರಗತಿಪರ ಚಿಂತಕರು

ಇದನ್ನೂ ಓದಿ-ಮಹಿಳಾ ಅಸ್ಮಿತೆಯ ಸಂಕೇತ- ಸಾರಾ

You cannot copy content of this page

Exit mobile version