Home ವಿಶೇಷ ಎಲ್ಲವೂ ತಾನಾಗಿದ್ದ ವ್ಯಕ್ತಿ ಡಾಕ್ಟರ್ ತಿಪ್ಪೇಸ್ವಾಮಿ

ಎಲ್ಲವೂ ತಾನಾಗಿದ್ದ ವ್ಯಕ್ತಿ ಡಾಕ್ಟರ್ ತಿಪ್ಪೇಸ್ವಾಮಿ

0

1923 ಮೇ 15 ರಂದು ಜನಿಸಿದ್ದ ಜನಪ್ರಿಯ ವೈದ್ಯ, ಸಾಮಾಜಿಕ ಕಳಕಳಿಯ ಡಾಕ್ಟರ್ ತಿಪ್ಪೇಸ್ವಾಮಿ ಅವರಿಗೆ ಇಂದು ಶತಮಾನೋತ್ಸವದ ಸಂಭ್ರಮ.ಆ ಪ್ರಯುಕ್ತ ಅವರ ಗೌರಾವಾರ್ಥವಾಗಿ ʼಮುಟ್ಟಿಸಿಕೊಂಡವರುʼ ಎಂಬ ಪುಸ್ತಕದಲ್ಲಿ  ಅವರ ಶಿಷ್ಯ, ಚಿತ್ರದುರ್ಗ ಜಿಲ್ಲೆಯ ಬೆಳಗಟ್ಟದ ಡಾಕ್ಟರ್ ಕೃಷ್ಣಾರೆಡ್ಡಿ ಅವರು ಬರೆದಿರುವ ಲೇಖನವನ್ನು ಆಯ್ದು ಪ್ರಕಟಿಸಿದ್ದೇವೆ.

ನಮ್ಮ ತಂದೆ ಬಟ್ಟಟ್ಟಿ ತಿಪ್ಪಣ್ಣ ಮತ್ತು ಡಾ. ಬಿ.ಎಂ.ತಿಪ್ಪೇಸ್ಟಾಮಿಯವರು ಸ್ನೇಹಿತರು. ನಮ್ಮ ತಂದೆ ಡಾಕ್ಟರವರ ಕಟ್ಟಾ ಅಭಿಮಾನಿ. ಚಿತ್ರದುರ್ಗ ಜಿಲ್ಲೆಯ ಬೆಳಗಟ್ಟದಲ್ಲಿ ಮೆಣಸಿನ ಕಾಯಿ ಬೆಳೆಯೋರು ಯಾರು ಅಂದ್ರೆ ನಮ್ಮನೆ ಹೆಸರುವಾಸಿ. ಆ ಊರಿಗಷ್ಟೇ ಅಲ್ಲ ಇಡೀ ಜಿಲ್ಲೇಗೆ ಹೆಸರುವಾಸಿ.

196೦ – 61ರಲ್ಲಿ ನಾನು ಮೊದಲು ಡಾಕ್ಟರನ್ನು ಬೆಂಗಳೂರಿನಲ್ಲಿ ನೋಡಿದ್ದೆ. ರಂಗನಾಥ್ ಮತ್ತು ಬಸವಲಿಂಗಪ್ಪನವರು ಬಳೆಪೇಟೆಯಲ್ಲಿ ಪ್ರಾಕ್ಟೀಸ್ ಮಾಡ್ತಾ ಇದ್ರು. ಅವರೆಲ್ಲಾ ಗೆಳೆಯರು ಆಗ. ನಾನು ಮೆಡಿಕಲ್‍ಗೆ ಸೇರುವ ಸಲುವಾಗಿ ಅವರನ್ನು ಕಾಣಲು ಹೋಗಿದ್ದೆ. ಎಲ್ಲರೂ ಸೀಟಿಗಾಗಿ ಪ್ರಯತ್ನಿಸಿದರು. ನಾನೂ ತುಂಬಾ ಕಷ್ಟಪಟ್ಟಿದ್ದೆ. ಆದರೆ ಕೇವಲ ಎರಡು ಪರ್ಸೆಂಟ್‍ನಿಂದ ಸೀಟು ಮಿಸ್ಸಾಯ್ತು. ಡಾಕ್ಟರು ತುಂಬಾ ಒದ್ದಾಡಿದರು. ‘ಅಲ್ಲಯ್ಯ, ನಿಮ್ಮಪ್ಪ ನೋಡ್ದ್ರೆ ಮಗನ್ನ ಡಾಕ್ಟ್ರೇ ಮಾಡ್ಬೇಕೂಂತ ಹಂಬಲಿಸ್ತಾನೆ, ನೀನೆಂತಹ ಕೆಲ್ಸ ಮಾಡಿದ್ಯಲ್ಲಯ್ಯ… ಇನ್ನೊಂದೆರ್ಡು ಪರ್ಸೆಂಟಾಗ್ಬಿಟ್ಟಿದ್ರೆ ಆಗೇ ಹೋಗೋದು… ಸ್ವಲ್ಪ ಕಷ್ಟ ಪಡ್ಡೇಕಿತ್ತಯ್ಯ…’ ಎಂದೆಲ್ಲಾ ಹೇಳಿದರು. ಸರಿ ಮತ್ತೇನು ಮಾಡುವುದೆಂದು ತೋಚದೆ ನಾನು ಪಶುವೈದ್ಯಕೀಯ ಕೋರ್ಸಿಗೆ ಸೇರಿದೆ. ಡಾಕ್ಟ್ರು ಆಗಾಗ ಬಂದು ವಿಚಾರಿಸ್ತಾ ಇದ್ರು. ಅವರಿಗಂತೂ ಅಸಮಾಧಾನ ಇದ್ದೇ ಇತ್ತು. ನಾನು ಮೂರು ವರ್ಷ  ಕೋರ್ಸ್ ಮುಗಿಸಿದೆ. ಆಗ ಒಂದು ಸುಯೋಗ ಒದಗಿ ಬಂತು. ದಾವಣಗೆರೆಯಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭ ಮಾಡಿದ್ರು. ಮೊದಲನೆಯ ವರ್ಷ ಪ್ರೊಫೆಷನಲ್‌ ಪರೀಕ್ಷೆ ಆಗೋಗಿತ್ತು. ಆಗ ಕೊಟ್ರಬಸಪ್ಪ ಗಾಂಜೀವೀರಪ್ಪ ಇವರೆಲ್ಲ ಇದ್ದರು. ಅಷ್ಟೊತ್ತಿಗೆ ಡಾಕ್ಟರೂ ಹುಬ್ಬಳ್ಳಿಯಿಂದ ದಾವಣಗೆರೆಗೆ ಬಂದಿದ್ರು. ಆಗ ಅವರು ನಾನು ವೆಟರನರಿಗೆ ಬರೆದು ಪಾಸ್ ಮಾಡಿ ಪ್ರಿ ಪ್ರೊಫೆಷನರಿ ಪರೀಕ್ಷೆ ಹಾಗೂ ಡೆಂಟಲ್‍ಗೆ ಮತ್ತು ಮೆಡಿಕಲ್‍ಗೆ ಇದ್ದ ಪ್ರಿ ಪ್ರೊಫೆಷನರಿ ಪರೀಕ್ಷೆ ಒಂದೇ ಎಂದ್ಹೇಳಿ ಯೂನಿವರ್ಸಿಟಿಯಲ್ಲಿ ಹೋಗಿ ವಿಚಾರಿಸಲು ಹೇಳಿದರು. ಈಗಾಗಲೇ ಆ ಪರೀಕ್ಷೆಯಲ್ಲಿ ನಾನು ತೇರ್ಗಡೆಯಾಗಿದ್ದರಿಂದ ಮೆಡಿಕಲ್‍ಗೆ ಸೀಟು ಕೊಡಲು ಆಗಬಹುದು ಅಂತ ಆಸೆ ನಮಗೆ. ನಮ್ಮಣ್ಣ ಬಂದ, ಎಲ್ಲಾ ಹೋಗಿ ಯೂನಿವರ್ಸಿಟಿಯಲ್ಲಿ ಮಾತಾಡಿದಾಗ ಅವರು ಕಾಲೇಜಿನವರು ಒಪ್ಪಿದರೆ ನಮ್ಮದ್ಯಾವುದೂ ಅಬ್ಜೆಕ್ಷನ್ ಇಲ್ಲಾಂತ ಬರ್ಕೊಟ್ರು. ಸೊ ನನಗೆ ಮೆಡಿಕಲ್ ಸೀಟು ಸಿಕ್ತು.

ನಮಪ್ಪ ಬಂದರು. ಆಗ ‘ನೋಡು, ಚೆನ್ನಾಗೋದು ಚೆನ್ನಾಗಿ ಅರ್ಥ ಮಾಡ್ಕೋ. ಒಬ್ಬ ಶ್ರೇಷ್ಠವ್ಯಕ್ತಿಯ ನೆರಳಿನಲ್ಲಿದ್ದೀ. ಈ ಅವಕಾಶನ್ನ ಉಪಯೋಗಿಸ್ಕೊ’ ಎಂದೆಲ್ಲ ಬುದ್ಧಿವಾದ ಹೇಳಿದರು. ‘ನೋಡೌಟ್, ಐ ಸಾ ಒನ್ ಎಮಿನೆಂಟ್ ಪರ್ಸನ್ ಇನ್ ಹಿಮ್… ಹಿಸ್ ಟೀಚಿಂಗ್ಸ್ ವೆರ್ ಸುಪರ್ಬ್!’ ಯಾವುದೇ ಸಂಗತಿಯಲ್ಲಿ ಅವರು ತಮ್ಮ ಬೋಧನೆಯಲ್ಲಿ ಅಥವಾ ಸರ್ಜರಿಯಲ್ಲಾಗಲಿ ತಮ್ಮ ಕನ್ಸಿಸ್ಟೆನ್ಸಿಯನ್ನು ಕಳಕೊಳ್ತಾ ಇರಲಿಲ್ಲ. ಅವರು ಏನಾದ್ರೂ ಒಂದು ಹೇಳಿದ್ರೆ ಅದೊಂದು ಗಾಸ್ಪೆಲ್ ಟ್ರೂತ್! ನಮಗೆ ಆ ಬಗ್ಗೆ ಯಾವುದೇ ಅನುಮಾನವೇ ಉಳಿಯುತ್ತಿರಲಿಲ್ಲ. ಸುಮ್ನೆ ಬೇರೆಯವರ ಹಾಗೆ ಏನೋ left and right ಹೇಳಿ ನಮ್ಮನ್ನ confuse ಮಾಡ್ತಿರ್ಲಿಲ್ಲ. ಒಂದು ಶಬ್ದ ಅವರು ಉಚ್ಚರಿಸಿದ್ರೂ ಅದೊಂದು ವೇದವಾಕ್ಯ. ಬಡಮಕ್ಕಳ ಬಗ್ಗೆ ಅವರಿಗೆ ತುಂಬಾ ಕನಿಕರ. ಅವರ ತೊಂದರೆಗಳು ತಾಪತ್ರಯಗಳು ಶಿಕ್ಷಣ ಪಡೆಯಲು, ಮೇಲೆ ಬರಲು ಅವರು ಎದುರಿಸುವ ಕಷ್ಟಗಳು ಸಮಸ್ಯೆಗಳು ಈ ಬಗ್ಗೆ ತುಂಬಾ ಗಮನ ಕೊಡುತ್ತಿದ್ದರು. ಆ ತರಹದ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳನ್ನು ಹುಡುಕಿ, ಅವರ ಬಗ್ಗೆ ಕಾಳಜಿ ವಹಿಸಿ ಪ್ರತಿ ಹಂತದಲ್ಲೂ ಅವರನ್ನು ಗೈಡ್ ಮಾಡೋರು. ತಮ್ಮಿಂದಾದಷ್ಟು ಸಹಾಯ ಮಾಡ್ತ ಇದ್ರು. ಜೀವನದ ಕೊನೆ ಗಳಿಗೆಯವರೆಗೂ ಹೀಗೆ ಒಬ್ಬ ಕಡು ಬಡವನೂ ಒಂದು ಉತ್ಕೃಷ್ಟ ಮಟ್ಟ ತಲುಪಬಹುದು ಎಂಬುದಕ್ಕೆ ತಾವೇ ಒಂದು ಉದಾಹರಣೆಯಾಗಿ ಬಾಳಿದರು.

ನಾನು ಎಂ.ಬಿ.ಬಿ.ಎಸ್. ಅಂತಿಮ ವರ್ಷದಲ್ಲಿದ್ದಾಗ ನಮಗೆ ophthalmology ಗೆ ಒಂದು ತಿಂಗ್ಳು ಪೋಸ್ಟಿಂಗ್ ಇತ್ತು. ನನಗೋ ಅವರ ಬಗ್ಗೆ ವಿಪರೀತ ಭಯ. ಬೈತಾರೆ ಅಥವಾ ತುಂಬಾ ಸ್ಟ್ರಿಕ್ಟ್ ಅಂತಲ್ಲ. ಅವರ straight forwardness ಗೆ ನೇರವಾಗಿ ಏನೇ ಇದ್ರೂ ಹೇಳುವ ಅವರ ಸ್ವಭಾವಕ್ಕೆ ಭಯ ಬೀಳ್ತಿದ್ದೆ ನಾನು. ಸೋ ಅವರ ಮಟ್ಟಕ್ಕೆ ಅವರು ಕೇಳುವ ಪ್ರಶ್ನೆಗಳಿಗೆ ತಡವರಿಸದೆ ಉತ್ತರಿಸಲು ಇದೊಂದು ಸಬ್ಜೆಕ್ಟನ್ನು ಹಗಲು ರಾತ್ರಿ ಓದ್ತಾ ಇದ್ವಿ ಎಲ್ರೂ. ಬೇರಾವ ಸಬ್ಜೆಕ್ಟ್ ಏನೇ ಆದ್ರೂ ಇದು ಮಾತ್ರ ಯಾವಾಗ್ಲೂ ಥರೋ ಆಗಿರ್ತಿದ್ವಿ. ಅವತ್ತು ಕೆಟರಾಕ್ಟ್ ಆಪರೇಷನ್ ಇದೆ ಅಂದ್ರೆ ಮುಗೀತು ನಮಗೆ ಆಪರೇಷನ್ನಿನ ಪ್ರತಿಯೊಂದು ಹಂತವೂ ಗೊತ್ತಿರಬೇಕು. ಅವರು ಕೇಳುವ ಪ್ರಶ್ನೆಗೆ ಪಟ್ಟಂತ ಉತ್ತರಿಸಲು ನಮ್ಮಲ್ಲಿ ಪೈಪೋಟಿ ಇರ್ತಿತ್ತು. ನಾವು ಉತ್ತರಿಸಿ ಅವರು ಯಸ್ ಅಂದ್ಟಿಟ್ರೆ ಅವತ್ತೆಲ್ಲಾ ನಮಗೆ ತುಂಬಾ ಸಂತೋಷದ ದಿವಸ.

ಅವರ ಸರ್ಜರಿ ಕೂಡಾ ಅಷ್ಟೆ. ಅಕ್ಯೂರೇಟ್ ಸೆಕ್ಸಸ್ ರೇಟು ಹಂಡ್ರೆಡ್ ಪರ್ಸೆಂಟ್. ಅವರಿಗೆ ಆ ಸರ್ಜಿಕಲ್ ಕೈಗಳಿದ್ವು.  ಡಾ. ತಿಪ್ಪೇಸ್ವಾಮಿ ಸರ್ಜರಿ ಮಾಡಿದಾರೆ ಅಂದ್ರೆ ಅದು ಫೇಲ್ಯೂರ್ ಆಗ್ಲಿಕ್ಕೆ ಸಾಧ್ಯವೇ ಇಲ್ಲ. ಅಷ್ಟೊಂದು ಮುಂಜಾಗ್ರತೆ. ಪೋಸ್ಟ್‌ ಆಪರೇಟಿವ್ ಫಾಲೋ ಅಪ್ ಕೇರ್ ಏನಿದೆಯಲ್ಲಾ ಎಲ್ಲಾ ಪರ್ಫೆಕ್ಟ್! ಗ್ರೇಟ್ ಡೆಡಿಕೇಷನ್! ವೃತ್ತಿಗೆ ಸಂಬಂಧ ಪಟ್ಟ ಹಾಗೆ ಅವರ ಜ್ಞಾನ ಬೆಟ್ಟದಷ್ಟು. ಅದನ್ನ ಹಾಗೆ exhibit ಮಾಡೋರು ಕೂಡ. ಮತ್ತೆ ತಮ್ಮ ವಿದ್ಯಾರ್ಥಿಗಳಿಗೆ ತಮಗೆ ಗೊತ್ತಿರುವುದನ್ನೆಲ್ಲಾ ಹೇಳಿ ಎಲ್ಲವನ್ನೂ ಕಲಿಸುತ್ತಿದ್ದರು. ನಿಜ ಹೇಳುವುದಾದರೆ ನಮ್ಮ ಇಂಡಿಯನ್ ಮೆಡಿಸಿನ್ ಸೊರಗಿದ್ದೆ ಸಂಬಂಧಪಟ್ಟವರು ನಮ್ಮ ಯುವ ಪೀಳಿಗೆಗೆ ತಮ್ಮ ಜ್ಞಾನವನ್ನು ಸರಿಯಾಗಿ propagate ಮಾಡದೆ ಇರುವುದಕ್ಕೆ. ಆದರೆ ನಮ್ಮ ಡಾಕ್ಟರ್‌ ಕೈಲಿ it was entirely different. ಅವರು ವಿದೇಶದಲ್ಲಿ ಕಲಿತದ್ದೇ ಆಗಲಿ, ಇಲ್ಲಿ ಕಲಿತದ್ದೇ ಆಗಲಿ or in practice or his own methodology ಎಲ್ಲವನ್ನೂ ವಿದ್ಯಾರ್ಥಿಗಳಿಗೆ ವಿಸ್ತಾರವಾಗಿ ಹೇಳ್ತಾ ಇದ್ರು. ಅವರ ಜೀವನದ ಗುರಿಯೇ ಇದಾಗಿತ್ತೇನೋ. ವಿದ್ಯಾರ್ಥಿಗಳನ್ನ ತರಬೇತಿಗೊಳಿಸಿ, ಅವರ ಜ್ಞಾನವನ್ನು ಹೆಚ್ಚಿಸಿ ಅದರಿಂದ ಇವರು ತೃಪ್ತಿ ಹೊಂದುತ್ತಿದ್ರು.

ಅವರ ಸೇವಾ ಮನೋಭಾವಕ್ಕೆ ಅವರ ಮಾನವೀಯತೆಗೆ ಒಂದು ಒಳ್ಳೆ ಉದಾಹರಣೆ ಎಂದರೆ ನಾನು house surgeon ಆಗಿದ್ದಾಗ 1971ರಲ್ಲಿ ಬಾಂಗ್ಲಾದೇಶದ ಯುದ್ಧಕ್ಕೆ ಹೋಗಬೇಕಾಯ್ತು. ಅದೂ ವಾಲಂಟರಿ ಬೇಸಿಸ್ ಮೇಲೆ. ಆಗ ನಾನು ನನ್ನ ಪ್ರೊಫೆಸರ್ಸ್ ಎಲ್ಲರನ್ನೂ ಭೇಟಿಯಾಗಿ ಅವರ ಸಲಹೆ ಸೂಚನೆಗಳನ್ನು ಪಡೆಯಲು ಹೋದೆ. ಯಾಕೆಂದ್ರೆ ನಾನಾಗ ಕೆಲಸ ಮಾಡಬೇಕಾಗಿದ್ದದ್ದು ನಿರಾಶ್ರಿತರ ಡೇರೆಯಲ್ಲಿ. ಬಾಂಗ್ಲಾದೇಶದ ಗಡಿ ಪ್ರದೇಶದಿಂದ ಬಂದವರೇ ಎಲ್ಲಾ ಒಂದೊಂದು ಡೇರೆಯಲ್ಲೂ ಸುಮಾರು 30 ರಿಂದ 60 ಸಾವಿರ ನಿರಾಶ್ರಿತರು. ಎಲ್ಲರೂ ಒಂದಲ್ಲಾ ಒಂದು ಖಾಯಿಲೆಯಿಂದ ನರಳುತ್ತಿದ್ದವರೇ. ಡಾಕ್ಟರ್ ತಿಪ್ಪೇಸ್ವಾಮಿಯವರನ್ನು ಭೇಟಿಯಾದಾಗ ಅವರು ನನಗೆ ಅಲ್ಲಿ ಇರಬಹುದಾದ ಪರಿಸ್ಥಿತಿಯ ಒಂದು ಸಮಗ್ರ ಚಿತ್ರಣ ಕೊಟ್ಟರು. ಆ ಪರಿಸ್ಥಿತಿಯಲ್ಲಿ ವಾತಾವರಣದಲ್ಲಿ ಇರಬಹುದಾದ ಖಾಯಿಲೆಗಳೇನು? ಎಂತೆಂತಹ ಪೇಷೆಂಟ್ಸ್ ಇರ್ತಾರೆ… ಆ ಪರಿಸ್ಥಿತಿಗೆ ಅನುಗುಣವಾಗಿ ಜಟಿಲತೆಯೇನು? ಅಗತ್ಯವೇನು… ? ಆ ಪೇಷೆಂಟುಗಳ ಮನಸ್ಥಿತಿ ಹೇಗಿರುತ್ತೆ…? ಮುಂತಾದ್ದೆಲ್ಲಾ ತಿಳಿಸಿ ಹೇಳಿ ಸರಿಯಾದ ಆಹಾರ ಪೋಷಣೆ ಇಲ್ಲದಿರುವ ರೋಗಿಗಳು; ವಿಟಮಿನ್‍ಗಳ ಕೊರತೆ ಇರೋ ಮಕ್ಕಳು, ಕುರುಡುತನ ಇತ್ಯಾದಿ… ಇತ್ಯಾದಿ ಎಲ್ಲಾ ತಿಳಿಸಿ ಅಲ್ಲಿಗೆ ಬೇಕಾಗುವಷ್ಟು ಮೆಡಿಸಿನ್ಸ್ ಕೊಟ್ಟರು. ಅವರು ಹೇಳಿದ್ದ ಚಿತ್ರಣವೇ ಅಲ್ಲಿತ್ತು. ನಾನಲ್ಲಿ ನವೆಂಬರ್ ಮೂರರಿಂದ ಜನವರಿ ಕೊನೇವರೆಗೂ ಇದ್ದು ಹೆಚ್ಚು ಕಮ್ಮಿ ಯುದ್ಧ ಪೂರ ನಿಂತ ಮೇಲೆ ಬಂದೆ. ನನ್ನ ನೋಡಿ ತುಂಬಾ ಖುಶಿ ಪಟ್ರು. ಅವರನ್ನು ನಾನು ಅವರ ಬೋಧನೆಗಳ ಮೂಲಕ, ಅವರು ನಮಗೆ ಕೊಟ್ಟ ಜ್ಞಾನದ ಮೂಲಕ, ನನ್ನಲ್ಲಿ ಅವರು ಕ್ರಿಯೇಟ್ ಮಾಡಿದ ಒಂದು ಸೇವಾ ಮನೋಭಾವನೆಯ ಮೂಲಕ ಈಗಲೂ ಸ್ಮರಿಸುತ್ತೇನೆ. ಮತ್ತೆ ಅವರಿಂದ ಕಲಿತದ್ದನ್ನು ಪ್ರಾಪಗೇಟ್ ಮಾಡ್ತಾ ಇದ್ದೇನೆ.

ಅವರು ತಮ್ಮ ವೃತ್ತಿಯನ್ನು ಹೇಗೆ ಪ್ರೀತಿಸ್ತಿದ್ರೋ ಹಾಗೇ ಭೂಮಿಯನ್ನು ಪ್ರೀತಿಸ್ತಿದ್ರು; ಅವರ ಜಮೀನು, ಮೊದಲೇ ನಾನು ತಿಳಿಸಿರುವಂತೆ ನಾವು ಮೆಣಸಿನಕಾಯಿ ಬೆಳೆಯುವುದರಲ್ಲಿ ಹೆಸರುವಾಸಿ. ಡಾಕ್ಟರಿಗೆ ನಮ್ಮ ಕಾಯಿ ತುಂಬಾ ಹಿಡಿಸಿತ್ತು. ಒಮ್ಮೆ ನನಗೆ ತಮ್ಮ ತೋಟಕ್ಕೆ ಸಸಿ ತರಲು ಹೇಳಿದರು. ಅವರು ಮೊದಲೇ ಹೋಗಿ ಸಸಿಯನ್ನು ನೆಡಲು ಅನುವುಗೊಳಿಸಿ ಅಲ್ಲಿ ಕಾಯ್ತಾ ಇದ್ರು. ಆನಂತರ ನಾನು ಒಂದು ಭಾನುವಾರ ಸಸಿಯೊಂದಿಗೆ ಅವರ ತೋಟ ಇರುವ ಬ್ಯಾಲದ ಮರ ಕಾಲೋನಿಗೆ ಹೋದೆ. ಸಸಿಯೆಲ್ಲಾ ತಾವೇ ನಿಂತು ನೆಡಿಸಿ, ಆನಂತರ ಇಬ್ಬರೂ ಊರಿಗೆ ಮರಳಿದ್ದೆವು. ವ್ಯವಸಾಯದಲ್ಲೂ ಅವರ ಕುಶಲತೆಯನ್ನು ಕಂಡೆ ಅಂದು ನಾನು.

ಒಮ್ಮೆ ಅವರು ನನ್ನ ಬಳಿ ಬಂದು ಒಂದು ಜೋಕ್ ಅಂತ ಒಂದು ಘಟನೆ ಹೇಳಿದರು. ಅವರಿಗದು ಜೋಕೇನೋ ಆದರೆ ನನಗೆ ಅನ್ನಿಸಿದ್ದು ಅವರ ಅಂದಿನ ಪರಿಸ್ಥಿತಿಯ ಕಟುವಾಸ್ತವ ಅಂತ. ಸಾಮಾನ್ಯವಾಗಿ ಆಪರೇಷನ್ ಆದ್ಮೇಲೆ ಕೆಲವರು ಡಾಕ್ಟರುಗಳಿಗೆ ನೂರೋ ಐವತ್ತೋ ತಮ್ಮ ಶಕ್ತ್ಯಾನುಸಾರ ಕೊಟ್ಟು ಹೋಗುತ್ತಾರೆ. ಇವರಿಗೂ ಹಾಗೆ ಕೊಡಲು ಬಂದಾಗ ಬೈದು ಕಳಿಸ್ತಾ ಇದ್ದರಂತೆ. ಆದರೆ ಒಂದು ಸಲ ದುಡ್ಡಿನ ತಾಪತ್ರಯವಾಗಿ ಮನೆಯಲ್ಲಿ ಕಾಫಿಪುಡಿ ಹಾಲಿಗೂ ದುಡ್ಡಿಲ್ಲವಂತೆ. ಅವತ್ತು ಅಂದುಕೊಂಡರಂತೆ ಇವತ್ತು ಯಾರಾದ್ರೂ ಬಂದು ದುಡ್ಡುಕೊಟ್ರೆ ಬೇಡ ಅನ್ಬಾರ್ದು. ನಾನಾಗಿ ಏನು ಕೇಳಲ್ವಲ್ಲ. ಅವರಾಗಿ ಕೊಟ್ರೆ ಕೊಡ್ಲಿ ಎಂದುಕೊಂಡು ಮನೇಲಿ ಕೂತಿದ್ರಂತೆ. ಒಬ್ಬ ಬಂದ್ನಂತೆ ‘ನಮಸ್ಕಾರ ಸಾರ್…’ ಅಂತ. ‘ಓ ಬಾಪ್ಪ ಬಾ…’ ಇವರು ಅವನನ್ನ ಒಳಕ್ಕೆ ಕರೆದಿದ್ದಾರೆ. ‘ಸರ್ ಆಪರೇಷನ್‌ ಎಲ್ಲಾ ಚೆನ್ನಾಗಾಯ್ತು ಸರ್… ನೀವು ದೊಡ್ಡ ಮನುಷ್ಯರು ಸಾರ್.. ಏನ್ಮಾಡಾನ ಸಾರ್ ನೀವು ದುಡ್ಡಂತು ಮುಟ್ಟೊಲ್ಲ… ತುಂಬಾ ಉಪಕಾರವಾಯ್ತು ಸಾರ್…’ ಇವರೋ ‘ಥತ್ ಇವನ್ನ…’ ಅಂದುಕೊಂಡರಂತೆ. ಅವ್ನು ಕೈ ಮುಗ್ದು, ಇವರನ್ನ ಇನ್ನಷ್ಟು ಕೊಂಡಾಡಿ ಹೊರಟು ಹೋಗಿದ್ದಾನೆ. ‘ನೋಡಯ್ಯ ದುಡ್ಡು ಬರ್ಬೇಕು ಅಂದ್ರೆ ಹೇಗಾದ್ರು ಬರುತ್ತೆ. ಅದಕ್ಕಾಗಿ ಖಂಡಿತಾ ಆಸೆ ಪಡ್ಬಾರ್ದು. ನಾನು ಕೇಳಿ ಅಥವಾ ಇಸ್ಕೊಂಡು ಸಣ್ಣವನಾಗ್ತಿದ್ದೆ ಅನ್ನಿಸ್ತು ಆಮೇಲೆ. ನನ್ನ ನಿರ್ಧಾರ ಮುಂದೆ ಮತ್ತೂ ಗಟ್ಟಿಯಾಯ್ತು. ಹಾಗಂತ ನಾನೇನು ಸತ್ಯ ಹರಿಶ್ಚಂದ್ರ ಅಂತ ಹೇಳಲ್ಲಯ್ಯ. ನನಗೂ ಎಲ್ಲರಿಗೂ ಇರುವ ಹಾಗೆ ದೌರ್ಬಲ್ಯಗಳಿವೆ. ನಿನ್ನ ಕೆಲ್ಸ ನನ್ನಿಂದ ಆಯ್ತು ಅಂದ್ರೆ ನಿನ್ನ ಮನೆಗೆ ಕರದ್ರೆ ಬರ್ತೀನಿ, ಕಾಫಿ ಕುಡೀತೀನಿ, ಊಟಕ್ಕಾಕಿದ್ರೆ ಮಾಡ್ತೀನಿ. ನ್ಯಾಯವಾಗಿ ಪ್ರಾಮಾಣಿಕ ಅಂದ್ರೆ ಇದ್ಯಾವುದನ್ನೂ ನಾನು ಮಾಡ್ಬಾರ್ದು ಏನಂತೀಯಯ್ಯ…?” ನನ್ನ ಕೇಳಿದ್ರು. ನಾನು ‘ನೀವು ಬಿಡಿ ಸಾರ್ ದೇವರಿದ್ದ ಹಾಗೆ’ ಅಂದೆ. ಸ್ವಲ್ಪ ಎಮೋಷನಲ್ ಆಗಿ ‘ಛೆ! ಛೆ! ದೇವರಿಗೆ ನನ್ನ ಹೋಲಿಸಬೇಡಯ್ಯ ಅವನೊಬ್ಬ ಮಹಾ ಲಂಚಕೋರ. ಲಂಚ ಕೊಟ್ಟರೆ ಮಾತ್ರ ಅವನು ಆಶೀರ್ವಾದ ಮಾಡ್ತಾನೆ. ನಾನೊಬ್ಬ ಸಾಮಾನ್ಯ ಮನುಷ್ಯ ಅಂತ ಗುರುತಿಸಿದ್ರೆ ಸಾಕು ಕಣಯ್ಯ ಇನ್ನೇನು ಬೇಡ…’ ಎಂದಿದ್ರು. ನಿಜವಾಗಿಯೂ ನನ್ನಂಥ ಒಬ್ಬ ಸಾಮಾನ್ಯನಿಗೆ ನಿಲುಕದಂತಹ ವಿಚಾರಗಳು ಅವರವು.

ಇವರ ಇನ್ನೊಂದು ಮಹತ್ವದ ಸೇವೆಯೆಂದರೆ ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯರಾದರೂ ಅರ್ಹತೆಗೆ ಅಂಕಗಳನ್ನ ಆಗಲಿ ಅಥವಾ ಜಾತಿಯನ್ನಾಗಲಿ ಮಾನದಂಡವಾಗಿ ಅವರು ಯಾವತ್ತೂ ಬಳಸಲಿಲ್ಲ. ಆ ವ್ಯಕ್ತಿಯ ಪೂರ್ತಿ  ಚರಿತ್ರೆಯನ್ನೇ ಜಾಲಾಡಿ he really deserves… ಎಂದು ನಿರ್ಧಾರ ಮಾಡುವರು. ಆಗ ಅವರು ಮಾಡಿದಂತಹ ಸೇವೆ ಖಂಡಿತಾ ಹಿಂದೆಯೂ ಆಗಿರಲಿಕ್ಕಿಲ್ಲ. ಮುಂದೆಯೂ ಬಹುಶಃ ಆಗಲಿಕ್ಕಿಲ್ಲ. ಪ್ರಾಬಬ್ಲಿ ಹಿಸ್ ಪಿರಿಯೆಡ್ ವಾಸ್ ದಿ ಓನ್ಲಿ ಟೈಂ. ಪ್ರತಿಯೊಬ್ಬ ಯೋಗ್ಯ ಅಭ್ಯರ್ಥಿಗೂ ನ್ಯಾಯ ಸಿಕ್ಕ the only and the best period ಅಂದ್ರೆ ಡಾಕ್ಟರು ಸದಸ್ಯರಾಗಿದ್ದ ಸಮಯ.

ಡಾಕ್ಟರ ಮಕ್ಕಳ ಮದುವೆ ಸಮಯ ಅದು. ಒಬ್ಬ ವ್ಯಕ್ತಿಯ ಮಗನಿಗೆ  ʼಸೆಲೆಕ್ಷನ್ʼ ಇತ್ತಂತೆ. ಇವರ ಬಳಿ ಬಂದ. ಬಂದವನೇ ‘ನಮಸ್ಕಾರ ಬುದ್ದಿ’ ಅಂತೇಳಿ ಬಣ್ಣದ ಪೇಪರ್‍ನಲ್ಲಿ ಸುತ್ತಿದ್ದ ಪೊಟ್ಟಣ ತೆಗೆದ ‘ಸ್ವಾಮಿ ಬಡವನ ಕಾಣಿಕೆ ಬೇಡ ಅನ್ಬಾರ್ದು…’ ಅಂತೇಳಿ ಅದನ್ನ ಅವರ ಮುಂದಿದ್ದ ಮೇಜಿನ ಮೇಲಿಟ್ಟ. ‘ಏನಯ್ಯಾ ಅದು…? ಏನು ಕಾಣಿಕೆ?’ ಅವರು ತಮಾಷೆಯಾಗೇ ಕೇಳಿದ್ರು. “ಬ್ಯಾಡ ಅನ್ಬಾರ್ದು ಸ್ವಾಮಿ ನಿಮ್ಮ ಮಕ್ಳ ಮದ್ವೆನೂ ಬರ್ತಾ ಇದೆ. ಉಪಯೋಗವಾಗುತ್ತೆ….” “ಅದೇನ್ ಮೊದ್ಲು ಹೇಳಯ್ಯ…” ಇವ್ರು ಮತ್ತದೇ ಧಾಟಿಯಲ್ಲಿ ಕೇಳಿದಾಗ ಧೈರ್ಯವಾಗಿ ಹೇಳ್ದ. ‘ಏನಿಲ್ಲ ಬುದ್ಧಿ ಮನ್ಯಾಗೆ ಸ್ವಲ್ಪ ಚಿನ್ನ ಇತ್ತು. ಎಲ್ಲಾ ಕರಗಿಸಿ ಏನೋ ಒಂದು ವಡವೆ ಮಾಡ್ಸಿ ತಂದಿದೀನಿ…” “ನೋಡು ಮೊದ್ಲು ಎತ್ತು ಅದ್ನ… ಮೊದ್ಲು ಅದ್ನ ಎತ್ಗಂಡು ನೀನಿಲ್ಲಿಂದ ಜಾಗ ಖಾಲಿ ಮಾಡು…” ಇವರು ಗಂಭೀರವಾಗಿ ಹೇಳಿದ್ರೂ ಅವನು ಕೇಳುವ ಸ್ಥಿತಿಯಲ್ಲಿರಲಿಲ್ಲ. “ನೋಡಯ್ಯ ನೀನು ಹೀಗಂತ ಗೊತ್ತಿದ್ರೆ ಒಳಕ್ಕೇ ಬಿಟ್ಕೋತಿರ್ಲಿಲ್ಲ. ಈಗ ಅದ್ನ ತಗೊಂಡು ಹೋಗ್ತೀಯೋ ಪೊಲೀಸರ್ನ ಕರಸ್ಲೋ..” ಇವ್ರು ಧಮಕಿ ಹಾಕಿದ್ಮೇಲೆ ಅವ್ನು ಸಪ್ಪಗಾಗಿ ಆ ಪೊಟ್ಟಣ ತೆಗೆದುಕೊಂಡ. “ಅಲ್ಲಯ್ಯ ನಿನ್ನ ಮಗನಿಗೆ ಚೆನ್ನಾಗಿ ಓದೋಕೇಳು. ನಾನು ಕೇಳೋ ಪ್ರಶ್ನೆಗೆ ಸರಿಯಾಗಿ ಉತ್ತರ ಕೊಟ್ರೆ ಮಾರ್ಕ್ಸ್ ಇಲ್ಲಾಂದ್ರೆ ಇಲ್ಲ. ಇವೆಲ್ಲಾ ನನ್ನತ್ತರ ನಡೆಯಲ್ಲ…” ಅವನನ್ನು ಬೈದು ಕಳಿಸಿದ್ರು. ಆ ಹುಡ್ಗ ಆಮೇಲೆ ಸೆಲೆಕ್ಟಾದ ಅಂತ ಅವರೇ ಹೇಳಿದ ನೆನಪು. ಅವರ ಮನೆ ಮುಂದೆ ಜಾತ್ರೆ ಇರೋದು ಆ ಸಮಯದಲ್ಲಿ.

ಇನ್ನೊಮ್ಮೆ ಒಬ್ಬ ಮೆಡಿಕಲ್ ಮುಗಿಸಿದವ ಇವರ ಬಳಿ ಬಂದಿದ್ದ. ಮೆಡಿಕಲ್ ಮುಗಿಸಿ ಎಂಟು ವರ್ಷಗಳಾದ್ರೂ ಕೆಲ್ಸವಿಲ್ಲವಂತೆ. ಮತ್ತವ್ನು ಅದುವರ್ಗೂ ಏನೂ ಕೆಲಸ ಮಾಡ್ದೆ ಸುಮ್ಮನೆ ಇದ್ನಂತೆ ಕೆಲ್ಸ ಸಿಗ್ಲಿ ಅಂತ. “ಅಲ್ಲಯ್ಯ ಎಂಟು ವರ್ಷ ಸುಮ್ನೆ ಖಾಲಿ ಕೂತಿದ್ಯಲ್ಲಯ್ಯಾ…? ಒಂದು ಎಂತದ್ದನ ಪ್ರೈವೇಟ್ ಪ್ರಾಕ್ಟೀಸ್ ಮಾಡ್ಬಹುದಿತ್ತಲ್ಲ…?  what you think I say  charitable industry the government has got ? ಅಲ್ಲಯ್ಯ ಎಂಟು ವರ್ಷ ವೇಸ್ಟ್ ಮಾಡ್ಲಿಕ್ಕೆ ನಾಚ್ಕೆ ಆಗೋಲ್ವೇನಯ್ಯ ನಿಂಗೆ? ಮೈ ಬಗ್ಗಿಸಬೇಕಯ್ಯ… ಕಷ್ಟಪಡಬೇಕು. ಮೆಡಿಕಲ್ ಅಂತಹ ಕೋರ್ಸ್ ಮಾಡಿ ಒಂದು ಸ್ವಂತಿಕೆ ಇಲ್ಲಾಂದ್ರೆ? ಸರ್ಕಾರಿ ನೌಕರಿ ನೆಚ್ಕೋಂಡು ಕಾಲಹರಣ ಮಾಡೋದಂದ್ರೆ it is shame on you, ಅಲ್ಲಯ್ಯ ಇಷ್ಟೊತ್ಗೆ ನಿನಗೆಲ್ಲಾ ಸಬ್ಜೆಕ್ಟು ಮರ್ತು ಹೋಗಿರ್ಬೇಕು…” ಮುಖದ ಮೇಲೆ ಹೇಳಿದ್ರು ಆ ಖಂಡಿತವಾದಿ. ಅನಿಸಿದ್ದನ್ನ ಮುಖಕ್ಕೆ ಹೊಡೆದ ಹಾಗೆ ಹೇಳಿ ಬಿಡೋರು. ಯಾರಾದರೂ ಸರಿಯೆ. ಒಮ್ಮೆ ಒಬ್ಬ ಹೆಣ್ಣು ಮಗಳು ಬಂದಿದ್ರು ಇಂಟರ್ವ್ಯೂಗೆ. ಆಕೇದು ಎಂ.ಎ.ಇನ್ ಅಕೌಂಟ್ಸ್. ‘ಕೆಂಪು ಸಮುದ್ರನ್ನ ಯಾಕಮ್ಮ ಕೆಂಪು ಸಮುದ್ರ ಅಂತ ಕರೀತಾರೆ…?’ ಅಂತ ಕೇಳಿದ್ರು. ಆಕೆ ‘ಸರ್ ನಂದು ಅಕೌಂಟ್ಸ್…’ ಎಂದು ರಾಗ ಎಳೆದರು. ‘ಸರಿಯಮ್ಮ ನೀನು ಅಕೌಂಟ್ಸ್  ಎಂದಾಕ್ಷಣ ಸಾಮಾನ್ಯ ಜ್ಞಾನ ಗೊತ್ತಿರ್ಬಾರ್ದು ಅಂತ ಎಲ್ಲಿದ್ಯಮ್ಮಾ…? ಸ್ಪೆಷಲೈಸೇಷನ್ ಅಂದಾಕ್ಷಣ ಆ ಸಬ್ಜೆಕ್ಟ್ ಹೊರತು ಬೇರೆಲ್ಲ ಮರ್ತು ಹೋಗೋದು ಅಥವಾ ಬೇರೆಯದರ ಜ್ಞಾನವೇ ಇಲ್ಲದಿರೋದು ಅಂತ ಭಾವಿಸಿದ ಹಾಗಿದೆಯಲ್ಲಾ ನೀನು…?’ ‘ಹೆಣ್ಣು ಮಗಳು ಎಂಬ ಮುಲಾಜಿಲ್ಲದೆ ಆ ಹುಡುಗಿಯನ್ನು ಬೈದಿದ್ದರು. ಶಿಕ್ಷಣದ ವಿಷಯದಲ್ಲಿ ಅವರು ತುಂಬಾ ಶಿಸ್ತು. ಅವರ ಸಾಮಾನ್ಯ ಜ್ಞಾನವೂ ಅಗಾಧವಾದ್ದು.

ಅವರಲ್ಲಿದ್ದ ಇನ್ನೊಂದು ಗುಣವೆಂದರೆ ಹಾಸ್ಯ ಪ್ರವೃತ್ತಿ. ಹಾಸ್ಯ ಬೆರೆತ ಅವರ ಮಾತುಗಳಲ್ಲಿ ಒಂದು ರೀತಿಯ ಮೋಡಿಯಿರ್ತಿತ್ತು. ಒಂದು ಇಡೀ ರಾತ್ರಿ ನಾನು, ಡಾ.ಶಂಕರ ಮೂರ್ತಿ, ಆರ್ಯಮಿತ್ರ ಇವರು ಅವರ ಮಾತು ಕೇಳಿ ನಕ್ಕು ನಕ್ಕು ಸುಸ್ತಾಗಿದ್ದೆವು.. ಅವರ ನಗುವೂ ಅಷ್ಟೇ. Attractive smile ! ಅವರಲ್ಲಿ ಒಂದು ತರಹ ಚುಂಬಕದ ಸೆಳೆತವಿತ್ತು. ಗ್ರಾಮ್ಯಭಾಷೆ ಬಳಸಿ ಹಾಸ್ಯ ಬೆರೆಸಿ, ನಗುವ ಅವರ ಪರಿ used to keep every one around him alive.

ಮಾನಸಿಕವಾಗಿ ತುಂಬಾ ಪವರ್ ಫುಲ್ ವ್ಯಕ್ತಿ ಆದ್ರೂ ದೈಹಿಕವಾಗಿ ತುಂಬಾ ಅಸಡ್ಡೆ ಮಾಡಿದ್ರು ಅನ್ಸುತ್ತೆ. ಒಬ್ಬ ವೈದ್ಯರಾಗಿ ಆರೋಗ್ಯಾನ ಸಂಪೂರ್ಣ ಕಡೆಗಣಿಸಿದ್ರು. ಬಹುಶಃ ಅವರ sudden death ಗೆ ಇದೇ ಕಾರಣ ಇರಬೇಕು.

ಒಬ್ಬ ಸರ್ಜನ್ ಆಗಿ, ಒಬ್ಬ ಸಮಾಜ ಸೇವಕನಾಗಿ, ಒಬ್ಬ ರೈತನಾಗಿ, ರಾಜಕಾರಣಿಯಾಗಿ, ಒಬ್ಬ ಸಾಮಾನ್ಯ ಮನುಷ್ಯನಾಗಿ ಅವರಿಗೆ ಅವರದೇ ಆದ ಕ್ವಾಲಿಟೀಸ್ ಇದ್ವು. ಅವರದೇ ಆದ ಪ್ರಿನ್ಸಿಪಲ್ಸ್ ಇದ್ವು. ಅವರದೇ ಆದ ಧ್ಯೇಯ ಧೋರಣೆಗಳಿದ್ವು. He maintained them throughout his life, until his death.

ಡಾ. ಕೃಷ್ಣಾ ರೆಡ್ಡಿ, ಚಿತ್ರದುರ್ಗ

(ಲೇಖನ ಕೃಪೆ: ಮುಟ್ಟಿಕೊಂಡವರು ಪುಸ್ತಕ- ಡಾಕ್ಟರ್ ತಿಪ್ಪೇಸ್ವಾಮಿಯವರ ಕುರಿತು ಲೇಖನಗಳ ಸಂಗ್ರಹ)

ಇದನ್ನೂ ಓದಿhttps://peepalmedia.com/shantaveri-gopal-gouda/ http://ನುಡಿ ನಮನ | ಕರ್ನಾಟಕದಲ್ಲಿ ಮರಳಿ ಹುಟ್ಟುತ್ತಲೇ ಇರುವ ಶಾಂತವೇರಿ ಗೋಪಾಲಗೌಡರು

You cannot copy content of this page

Exit mobile version