ಭಾರತೀಯ ಸೇನೆಯ ನಿವೃತ್ತ ಸೈನಿಕರಾದ ಸೈಖೋಮ್ ರಾಕೆಟ್ ತಮ್ಮ ಜೇಬಿನಿಂದ ಬಂದೂಕಿನ ಗುಂಡೊಂದನ್ನು ಹೊರತೆಗೆದು ತೋರಿಸುತ್ತಾ, “ಇದೇ ಗುಂಡಿನಿಂದ ನನ್ನ ಮಗ ಸತ್ತಿದ್ದ” ಎಂದರು. ಜುಲೈ 10ರ ಬೆಳಗ್ಗೆ ಇಂಪಾಲ್ ನಗರದಿಂದ ಸ್ವಲ್ಪ ದೂರದಲ್ಲಿ ಕಡಂಗ್ಬಂದ್ ಎನ್ನುವ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಅವರ 28 ವರ್ಷದ ಸೈಖೋಮ್ ಶುಬೋಲ್ ಗಾಯಗೊಂಡಿರುವ ವಿಷಯ ತಿಳಿದುಬಂತು. “ನಮಗೆ ಫೋನಿನಲ್ಲಿ ಮಗನ ಕಾಲಿಗೆ ಗುಂಡು ಬಿದ್ದಿದೆ ಎಂದು ತಿಳಿಸಲಾಗಿತ್ತು.” ಗುಂಡು ಕಾಲಿಗೆ ಬಿದ್ದಿರುವುದರಿಂದ ಜೀವಕ್ಕೆ ಅಪಾಯವೇನೂ ಇಲ್ಲ ಕಾಲಿಗೆ ಚಿಕಿತ್ಸೆ ಮಾಡಿದರೆ ಸರಿಹೋಗಬಹದು ಎಂದು ಅವರು ಭಾವಿಸಿದ್ದರು. ಆದರೆ ಸ್ಥಳಕ್ಕೆ ಹೋಗಿ ನೋಡಿದಾಗ ಅವರ ಮಗ ಬದುಕಿರಲಿಲ್ಲ.
ಸೈಖೋಮ್ ಶುಬೋಲ್ ಕಳೆದ ಕೆಲವು ದಿನಗಳಿಂದ ಮೈತೇಯಿ ಸಮುದಾಯದ ಗ್ರಾಮ ರಕ್ಷಣಾ ಸಮಿತಿಯಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದರು. ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಹಿಂಸಾಚಾರ ಹೆಚ್ಚಾಗಿರುವ ಪ್ರದೇಶಗಳಲ್ಲಿ ಈ ಸಮಿತಿಗಳು ಸಕ್ರಿಯವಾಗಿವೆ. ಜುಲೈ 10ರ ಬೆಳಿಗ್ಗೆ, ಇಂಫಾಲ್ ಕಣಿವೆಯ ಬಳಿಯ ಪರ್ವತ ಪ್ರದೇಶಗಳಲ್ಲಿ ಸಶಸ್ತ್ರ ಗುಂಪುಗಳ ನಡುವಿನ ಹಿಂಸಾಚಾರಕ್ಕೆ ಶುಬೋಲ್ ತುತ್ತಾಗಿದ್ದರು.
ಸೈಖೋಮ್ ರಾಕೆಟ್ ತನ್ನ ಮಗನತ್ತ ಗುಂಡು ಹಾರಿಸಿದವರು ಯಾರೆನ್ನುವುದರ ಕುರಿತು ತನಿಖೆಯಾಗಬೇಕು ಎನ್ನುತ್ತಾರೆ. ಅದೇ ಸಮಯದಲ್ಲಿ ಎರಡು ತಿಂಗಳಿಗಿಂತಲೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಹಿಂಸಾಚಾರವು ಏಕೆ ನಿಲ್ಲುತ್ತಿಲ್ಲವೆನ್ನವುದೂ ಅವರಿಗೆ ಅರ್ಥವಾಗುತ್ತಿಲ್ಲ.
“ರಾಜಕೀಯ ಪಕ್ಷಗಳಿಗೆ ನಾನು ಒಂದು ಮಾತು ಹೇಳಲು ಬಯಸುತ್ತೇನೆ. ನೀವು ತಪ್ಪು ಕೆಲಸ ಮಾಡಬೇಡಿ. ಮನುಷ್ಯರ ಜೀವವನ್ನು ಆಟಿಕೆಯಾಗಿ ಪರಿಗಣಿಸಬಾರದು. ಈಗ ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ಬಿಜೆಪಿ ಸರ್ಕಾರವಿದೆ. ಹೀಗಿರುವಾಗ, ಈ ಎರಡೂ ಸರಕಾರಗಳಿಂದ ಏನೂ ಮಾಡಲು ಸಾಧ್ಯವಿಲ್ಲವೆ? ನಿಮಗೆ ಪರಿಹಾರ ಹುಡುಕಲು ಏಕೆ ಸಾಧ್ಯವಾಗುತ್ತಿಲ್ಲ?” ಎಂದು ಅವರು ನೋವಿನಿಂದ ಕೇಳುತ್ತಾರೆ.
ಮೃತ ಶುಬೋಲ್ ಮನೆಯಲ್ಲಿ ಆಕ್ರೋಶಿತ ಜನರ ಗುಂಪು ನೆರೆದಿತ್ತು. ಶುಬೋಲ್ ಅವರ ತಾಯಿ ತನ್ನ ಮಗ ಫುಟ್ಬಾಲ್ ಆಡುವಾಗ ಧರಿಸುತ್ತಿದ್ದ ಉಡುಪನ್ನು ಹಿಡಿದುಕೊಂಡು ರೋಧಿಸುತ್ತಿದ್ದರು.

ಬೀದಿಗಳಲ್ಲಿ ಭುಗಿಲೆದ್ದಿರುವ ಆಕ್ರೋಶ
ಈ ಸಾವಿನ ಸುದ್ದಿ ಬಂದ ಕೆಲವು ಗಂಟೆಗಳ ನಂತರ, ಇಂಫಾಲ್ನ ಬೀದಿಗಳಲ್ಲಿ ಸ್ಥಳೀಯ ಜನರೊಳಗಿನ ನೋವು ಮತ್ತು ಆಕ್ರೋಶ ಭುಗಿಲೆದ್ದಿತು.
ಶುಬೋಲ್ ಅವರ ಮನೆಯಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿ, ಹೆಚ್ಚಿನ ಸಂಖ್ಯೆಯ ಮಹಿಳೆಯರೇ ಇದ್ದ ಗುಂಪು ಇಂಫಾಲ್ ನಗರದ ಪ್ರಸಿದ್ಧ ಇಮಾ ಮಾರುಕಟ್ಟೆಯ ಬಳಿಯ ಎಲ್ಲಾ ರಸ್ತೆಗಳನ್ನು ನಿರ್ಬಂಧಿಸಿತು.
ದೊಡ್ಡ ಸಂಖ್ಯೆಯಲ್ಲಿ ಪೊಲೀಸ್ ನಿಯೋಜನೆಯಿಂದಾಗಿ ಈ ಮಹಿಳೆಯರಿಗೆ ಅಲ್ಲಿನ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ಮನೆಗೆ ಹೋಗಲು ಸಾಧ್ಯವಾಗಲಿಲ್ಲ.
ಮಣಿಪುರದಲ್ಲಿ ಎರಡು ತಿಂಗಳಿಗೂ ಹೆಚ್ಚು ಕಾಲ ನಡೆದ ಜನಾಂಗೀಯ ಹಿಂಸಾಚಾರದ ಮತ್ತೊಂದು ಅಧ್ಯಾಯವನ್ನು ಅಂದು ಇಂಫಾಲದ ಬೀದಿಗಳಲ್ಲಿ ಬರೆಯಲಾಗಿತ್ತು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಿರುಪಮಾ ಲೈಶ್ರಾಮ್, “ನಮಗಾಗಿ ಯುವಕನೊಬ್ಬ ಜೀವ ಕೊಟ್ಟಿದ್ದಾನೆ. ನಾಳೆ ಇನ್ನೂ ಎಷ್ಟು ಜನರು ಸಾಯುತ್ತಾರೆ ಎನ್ನುವುದು ತಿಳಿದಿಲ್ಲ. ದಯವಿಟ್ಟು ನಮ್ಮನ್ನು ರಕ್ಷಿಸಿ. ಇದು ನಮ್ಮ ವಿನಂತಿ. ನಾವು ಸಾಯಲು ಬಯಸುವುದಿಲ್ಲ. ನಮಗೆ ಕುಟುಂಬಗಳಿವೆ, ಮಕ್ಕಳಿದ್ದಾರೆ, ದಯವಿಟ್ಟು ನಮ್ಮನ್ನು ಉಳಿಸಿ.” ಎಂದು ಬೇಡಿಕೊಂಡರು
ಮಣಿಪುರ ಹಿಂಸಾಚಾರದ ಕುರಿತು ಪ್ರಧಾನಿ ಮೋದಿ ತುಟಿ ಎರಡು ಮಾಡದಿರುವುದು ಈ ಮಹಿಳೆಯರಲ್ಲಿ ನೋವನ್ನುಂಟುಮಾಡಿದೆ.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ರನೀತಾ ಲೈಶ್ರಾಮ್, “ಮಾನ್ಯ ಮೋದಿಯವರಿಗೆ ಕೇಳಬಯಸುತ್ತೇನೆ, ನಾವು ಭಾರತೀಯರಲ್ಲವೇ? ನಮ್ಮ ಕುರಿತಾಗಿಯೂ ಸ್ವಲ್ಪ ಯೋಚಿಸಿ, ನಮ್ಮನ್ನು ನೀವು ಭಾರತೀಯರೆಂದು ಪರಿಗಣಿಸಿದ್ದರೆ ಇಲ್ಲಿ ಬಂದು ಏನಾಗುತ್ತಿದೆಯೆನ್ನುವುದನ್ನು ನೋಡಿ. ನಮ್ಮ ಮಣಿಪುರದಲ್ಲಿ ವ್ಯವಹಾರಗಳು ಮುಚ್ಚಿಹೋಗಿವೆ, ಶಾಲೆಗಳು ಮುಚ್ಚಿವೆ, ಇಲ್ಲಿ ಎಲ್ಲವೂ ನಾಶವಾಗುತ್ತಿವೆ” ಎಂದು ಆಕ್ರೋಶಭರಿತ ಹತಾಶೆಯಿಂದ ನುಡಿದರು.
“ನೀವು ಸುಮ್ಮನೆ ಕುಳಿತರೆ ಯಾವುದೇ ಪರಿಹಾರ ಸಿಗುವುದಿಲ್ಲ. ಮಣಿಪುರದಲ್ಲಿ ನಡೆಯುತ್ತಿರುವುದನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಮಾತ್ರವೇ ಒಟ್ಟಾಗಿ ಪರಿಹರಿಸಬಲ್ಲವು. ಸಾಧ್ಯವಾದಷ್ಟು ಬೇಗ ಈ ಕುರಿತು ಯೋಚಿಸಿ. ಇದು ಆರಂಭಗೊಂಡು ಎರಡು ತಿಂಗಳಿಗೂ ಹೆಚ್ಚು ಸಮಯವಾಗಿದೆ.”
ಮೇ 3ನೇ ತಾರೀಖಿನಂದು ಆರಂಭಗೊಂಡ ಹಿಂಸಾಚಾರದಲ್ಲಿ ಇದುವರೆಗೆ ಮಣಿಪುರದಲ್ಲಿ 142 ಜನರು ಸತ್ತಿದ್ದಾರೆ ಮತ್ತು 60,000 ಸಾವಿರ ಜನರ ನಿರ್ವಸತಿಗರಾಗಿದ್ದಾರೆ. ರಾಜ್ಯ ಸರ್ಕಾರದ ಪ್ರಕಾರ, ಈ ಹಿಂಸಾಚಾರದಲ್ಲಿ 5000 ಬೆಂಕಿ ಹಚ್ಚಿದ ಘಟನೆಗಳು ನಡೆದಿವೆ.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 5,995 ಪ್ರಕರಣಗಳು ದಾಖಲಾಗಿದ್ದು, 6,745 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮಣಿಪುರ ಸರ್ಕಾರ ಇತ್ತೀಚೆಗೆ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.
ಪ್ರಸ್ತುತ ಮಣಿಪುರದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಆನ್ ರೆಕಾರ್ಡ್ ಮಾತನಾಡಲು ಯಾರೂ ಸಿದ್ಧರಿಲ್ಲ, ಆದರೆ ಪರಿಸ್ಥಿತಿ ಕ್ರಮೇಣ ಸುಧಾರಿಸುತ್ತಿದೆ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿಗೆ ತಿಳಿಸಿದೆ.
ಚುರಾಚಾಂದ್ಪುರವೋ ಅಥವಾ ಲಮಕಾವೋ?
ಮೊದಲಿಗೆ ಹಿಂಸೆ ಆರಂಭಗೊಂಡಿದ್ದ ಚುರಾಚಾಂದ್ಪುರಕ್ಕೆ ನಾವು ಹೋಗಿದ್ದೆವು.
ಚುರಾಚಾಂದ್ಪುರ ಇಂಫಾಲ್ ನಗರದಿಂದ ಕೇವಲ 70 ಕಿಲೋಮೀಟರ್ ದೂರದಲ್ಲಿದೆ. ಆದರೆ ಈಗ ಅಲ್ಲಿಗೆ ಹೋಗುವುದು ಅಷ್ಟು ಸುಲಭದ ಕೆಲಸವಲ್ಲ.ಏಕೆಂದರೆ ಇಂಫಾಲ್ ಮತ್ತು ಚುರಾಚಾಂದ್ಪುರ ನಡುವೆಯಿರುವ ಬಿಷ್ಣುಪುರ ಜಿಲ್ಲೆಯ ಪ್ರದೇಶವನ್ನು ಪ್ರಸ್ತುತ ಬಫರ್ ವಲಯವನ್ನಾಗಿ ಮಾಡಲಾಗಿದೆ. ಭಾರತೀಯ ಸೇನೆ ಮತ್ತು ಅರೆಸೈನಿಕ ಪಡೆಗಳ ಹಲವಾರು ಚೆಕ್ ಪೋಸ್ಟುಗಳನ್ನು ದಾಟಿದ ನಂತರ ನಮಗೆ ಚುರಾಚಾಂದ್ಪುರ ತಲುಪಲು ಸಾಧ್ಯವಾಯಿತು
ಇಲ್ಲಿ ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟವರ ನೆನಪಿಗಾಗಿ ಸ್ಮಾರಕವೊಂದನ್ನು ನಿರ್ಮಿಸಲಾಗಿದ್ದು, ಇದನ್ನು “ವಾಲ್ ಆಫ್ ಮೆಮೋರೀಸ್” ಎಂದು ಹೆಸರಿಸಲಾಗಿದೆ.
ಪ್ರತಿದಿನ, ನೂರಾರು ಜನರು ಈ ಸ್ಮಾರಕದಲ್ಲಿರುವ ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟವರ ಚಿತ್ರಗಳ ಮುಂದೆ ನೋವಿನಿಂದ ಗೋಳಾಡುವುದನ್ನು ಕಾಣಬಹುದು.
ಸ್ಮಾರಕದಲ್ಲಿರುವ ಸತ್ತವರ ಚಿತ್ರಗಳಲ್ಲಿ ಎರಡು ತಿಂಗಳ ಮಗುವೊಂದರ ಚಿತ್ರವೂ ಇದೆ. ಇದೇ ಸ್ಮಾರಕದ ಮುಂದೆ ಹಲವಾರು ಮಹಿಳೆಯರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸುವುದು ದೈನಂದಿನ ದೃಶ್ಯವಾಗಿದೆ.
ಇಲ್ಲಿ ನಡೆಯುತ್ತಿರುವ ಪ್ರತಿಭಟನೆಯೊಂದರ ಭಾಗವಾಗಿದ್ದ ಕ್ರಿಸ್ಟಿ ಸುವಾಂಟಕ್, “ಈಗ ನಮ್ಮಲ್ಲಿ ಸರ್ಕಾರವಿಲ್ಲ. ನಮ್ಮ ಪರವಾಗಿ ಮಾತನಾಡಬಲ್ಲವರು, ನಮ್ಮೊಂದಿಗೆ ನಿಲ್ಲಬಲ್ಲವರು ಯಾರೂ ಇಲ್ಲ. ಹೀಗಾಗಿಯೇ ನಾವು ನಮ್ಮ ಜನರೊಡನೆ ಇಲ್ಲಿ ಸೇರಿ ಕಳೆದುಕೊಂಡವರಿಗಾಗಿ ಶೋಕಿಸುತ್ತಾ, ಸಹಾಯಕ್ಕಾಗಿ ಬೇಡಿಕೊಳ್ಳುತ್ತಿದ್ದೇವೆ. ದಯವಿಟ್ಟು ನಮ್ಮನ್ನು ಉಳಿಸಿ… ಇದು ನಾನು ಜಗತ್ತಿನೊಡನೆ ಮಾಡಿಕೊಳ್ಳುವ ಮನವಿ…” ಎಂದು ನೋವಿನಿಂದ ಹೇಳಿದರು.
ಕುಕಿ ಸಮುದಾಯದ ಪ್ರಾಬಲ್ಯವಿರುವ ಚುರಾಚಾಂದ್ಪುರ ಪ್ರದೇಶದಲ್ಲಿ ಪ್ರತ್ಯೇಕ ಆಡಳಿತದ ಬೇಡಿಕೆಯೂ ಈಗ ಹೆಚ್ಚು ಮುನ್ನೆಲೆಗೆ ಬರುತ್ತಿದೆ.
ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆಯ ಸಂಚಾಲಕಿ ಮೇರಿ ಜೋನ್ಸ್, “ನಾವು ಪೂರ್ತಿಯಾಗಿ ಬೇರೆ ಆಡಳಿತವನ್ನು ಬಯಸುತ್ತೇವೆ. ಅದು ರಾಜ್ಯವೂ ಆಗಬಹುದು ಅಥವಾ ಕೇಂದ್ರಾಡಳಿತ ಪ್ರದೇಶವಾಗಿಯಾದರೂ ಸರಿ. ಕೇಂದ್ರ ಸರ್ಕಾರ ಬುದ್ಧಿವಂತಿಕೆಯಿಂದ ವರ್ತಿಸಿ ಮಣಿಪುರದ ಬುಡಕಟ್ಟು ಜನರಿಗೆ ಒಂದು ಸರಿಯಾದ ಪರಿಹಾರವನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳುತ್ತಾರೆ.
ಹಿಂಸಾಚಾರಕ್ಕೆ ಮಣಿಪುರ ಸರ್ಕಾರ ಮತ್ತು ಮೈತೇಯಿ ಸಮುದಾಯ ಕಾರಣವೇ?
ಈ ಪ್ರದೇಶದ ಜನರು ಮಣಿಪುರ ಹಿಂಸಾಚಾರಕ್ಕೆ ಇಲ್ಲಿನ ರಾಜ್ಯ ಸರ್ಕಾರ ಮತ್ತು ಮೈತೇಯಿ ಸಮುದಾಯ ಕಾರಣವೆಂದು ದೂರುತ್ತಾರೆ. “ನಾವು ನಮ್ಮನ್ನು ಮಣಿಪುರ ಸರ್ಕಾರದ ಭಾಗವೆಂದು ಪರಿಗಣಿಸುವುದಿಲ್ಲ. ಅವರು ನಮ್ಮನ್ನು ಈಗಾಗಲೇ ದೂರವಿರಿಸಿರುವಾಗ ನಾವು ಹೇಗೆ ಅದರ ಭಾಗವೆಂದು ಭಾವಿಸಲು ಸಾಧ್ಯ? ನಮಗೆ ಇಷ್ಟವಿದೆಯೋ ಇಲ್ಲವೋ ಎನ್ನುವುದು ಬೇರೆ ಪ್ರಶ್ನೆ. ಆದರೆ ಅವರು ನಮ್ಮನ್ನು ದೂರ ಮಾಡಿಯಾಗಿದೆ ಎನ್ನುವುದು ನಾವು ಒಪ್ಪಿಕೊಳ್ಳಲೇಬೇಕಾದ ಸತ್ಯವಾಗಿದೆ” ಎನ್ನುತ್ತಾರೆ ಮೇರಿ ಜೋನ್ಸ್.
ಹಿಂಸಾಚಾರ ಆರಂಭಗೊಂಡ ಎರಡು ತಿಂಗಳ ನಂತರ ಚುರಾಚಾಂದ್ಪುರದಲ್ಲಿ ಪರಿಸ್ಥಿತಿ ಸುಧಾರಿಸಿದೆಯಾದರೂ, ಅಲ್ಲಿನ ಉದ್ವಿಗ್ನತೆ ಈಗಲೂ ಮುಂದುವರೆದಿದೆ.
ಚುರಾಚಾಂದ್ಪುರವು ಇಂಫಾಲ್ ನಗರದಿಂದ ಪೂರ್ತಿಯಾಗಿ ಸಂಪರ್ಕ ಕಡಿದುಕೊಂಡಿದ್ದು, ಇಲ್ಲಿಗೆ ದಿನಬಳಕೆಯ ವಸ್ತುಗಳು ಮಿಜೋರಾಂ ಮೂಲಕ ಸುತ್ತು ಬಳಸಿನ ಹಾದಿಯಲ್ಲಿ ಬರುತ್ತಿದೆ.
ಹಿಂಸಾಚಾರದ ಸಮಯದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖವು ಇಲ್ಲಿನ ಜನರ ಮನಸ್ಸಿನಲ್ಲಿ ಇನ್ನೂ ಉಳಿದಿದೆ. ಅವರಲ್ಲಿ ಈ ಕುರಿತು ದುಃಖ ಮತ್ತು ಆಕ್ರೋಶವಿದೆ. ಜನರ ಆಕ್ರೋಶದ ಮಟ್ಟ ಎಷ್ಟಿದೆಯೆಂದರೆ ಇಲ್ಲಿನ ಜನರು ಈ ಪ್ರದೇಶದ ಹೆಸರನ್ನೇ ಬದಲಾಯಿಸಲು ಹೊರಟಿದ್ದಾರೆ. ಚುರಾಂಚಾಂದ್ಪುರ ಎಂದು ಬರೆದಿರುವ ಕಡೆ ಅದನ್ನು ಅಳಿಸಿ ಲಮಕಾ ಎನ್ನುವ ಹೊಸ ಹೆಸರನ್ನು ಬರೆಯುತ್ತಿದ್ದಾರೆ.
ಚುರಾಚಾಂದ್ಪುರ ಎನ್ನುವುದು ಮಣಿಪುರದ ಮೈತೇಯಿ ರಾಜನು ತಮ್ಮ ಮೇಲೆ ಹೇರಿರುವ ಹೆಸರು ಎನ್ನುವುದು ಈ ಜನರ ಹೇಳಿಕೆ. ಈಗ ಅವರು ಮಣಿಪುರದಿಂದ ಬೇರಾಗಲು ಬಯಸುತ್ತಿರುವ ಕಾರಣ ಮಣಿಪುರದ ಮೈತೇಯಿ ರಾಜರಿಗೆ ಸಂಬಂಧಿಸಿದ ಯಾವುದೂ ತಮ್ಮ ಮನಸ್ಸಿನಲ್ಲಿರಬಾರದು ಎನ್ನುವುದು ಅವರ ಜಿದ್ದು.
NRC ಗೆ ಆಗ್ರಹ
ಗುಡ್ಡಗಾಡು ಪ್ರದೇಶಗಳಲ್ಲಿ ಪ್ರತ್ಯೇಕ ಆಡಳಿತಕ್ಕಾಗಿ ಬೇಡಿಕೆ ಇದ್ದರೂ, ಮಯನ್ಮಾರಿನಿಂದ ಮಣಿಪುರ ಪ್ರವೇಶಿಸಿದ ಜನರು ಈ ಹಿಂಸಾಚಾರದಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆನ್ನುವುದು ಬಯಲು ಪ್ರದೇಶದ ಜನರ ಆರೋಪ.
ಹೀಗಾಗಿಯೇ ಕಣಿವೆ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು NRC ಮೂಲಕ ಅಕ್ರಮ ವಲಸಿಗರನ್ನು ಗುರುತಿಸಲು ಒತ್ತಾಯಿಸುತ್ತಿದ್ದಾರೆ.
ಆದರೆ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಕುಕಿ ಸಮುದಾಯದ ಜನರು ಇದನ್ನು ನಿರಾಕರಿಸುತ್ತಾರೆ.
“ಅವರು ನಮ್ಮನ್ನು ಭಾರತೀಯರೆಂದೇ ಪರಿಗಣಿಸುವುದಿಲ್ಲ” ಎಂದು ಚುರಾಚಾಂದ್ಪುರದಲ್ಲಿ ಪ್ರತಿಭಟನೆ ನಡೆಸುತ್ತಿರುವ ಹಾತ್ನೇಯಿನಿಂಗ್ ಹೇಳುತ್ತಾರೆ. ನಾವು ಹೊರಗಿನಿಂದ ಬಂದವರೆನ್ನುವುದು ಅವರ ಭಾವನೆ. ನಾವು ಮಯನ್ಮಾರ್ ಮೂಲದವರು ಎಂದು ಅವರು ಹೇಳುತ್ತಾರೆ. ಅವರು ಹಾಗೆ ಹೇಳುವುದು ಎಷ್ಟು ಸರಿ? ನಾವು ಮಯನ್ಮಾರಿನಿಂದ ಬಂದವರಲ್ಲ, ನಾವು ಅಲ್ಲಿಂದ ಬಂದಿಲ್ಲ. ನಾವು ಇಲ್ಲಿ ಮೊದಲಿನಿಂದಲೂ ಇದ್ದೇವೆ. ನಮ್ಮ ಪೂರ್ವಜರು ಬ್ರಿಟಿಷರೊಂದಿಗಿನ ಯುದ್ಧದ ಸಮಯದಲ್ಲಿ ಇಲ್ಲಿದ್ದರು. ನಾವು ಇಲ್ಲಿನ ಸ್ಥಳೀಯರು. ಅವರು ನಮ್ಮನ್ನು ಅಕ್ರಮ ವಲಸಿಗರು ಎಂದು ಕರೆಯುವುದು ಎಷ್ಟು ಸರಿ?
ಚಲನಚಿತ್ರ ನಿರ್ಮಾಪಕ ಮತ್ತು ಕೃಷಿಕಾರಗಿ ಗುರುತಿಸಿಕೊಂಡಿರುವ ನಿಂಗ್ಥೌಜಾ ಅವರ ನಂಬಿಕೆಯ ಪ್ರಕಾರ ಪ್ರಸ್ತುತ ಮಣಿಪುರದಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಅಕ್ರಮ ವಲಸಿಗರೇ ಕಾರಣ.
“ಆ ಜನರನ್ನು ಗುರುತಿಸಲು ಮತ್ತು ಪರಿಶೀಲಿಸಲು ಕೆಲವು ಮೆಕಾನಿಸಮ್ ಜಾರಿಗೆ ತರಬೇಕಾಗಿದೆ. ಇದಾಗದೆ ಹೋದರೆ, ಇಂತಹ ಹೋರಾಟಗಳು ಮತ್ತು ಬಿಕ್ಕಟ್ಟುಗಳು ಉದ್ಭವಿಸುತ್ತಲೇ ಇರುತ್ತವೆ.” ಎನ್ನುತ್ತಾರವರು.
ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಹಿಂಸಾಚಾರ ಮುಂದುವರೆಯುತ್ತಿರುವ ಈ ಹೊತ್ತಿನಲ್ಲಿ, ಇದೆಲ್ಲ ನಿಲ್ಲುವುದು ಯಾವಾಗ ಎನ್ನುವ ಪ್ರಶ್ನೆ ದೊಡ್ಡದಾಗಿ ಎದ್ದು ನಿಲ್ಲುತ್ತದೆ. “ಜನರ ನಡುವೆ ನಂಬಿಕೆ ಬೆಳೆಸುವ ಕೆಲಸ ನಡೆಯಬೇಕಿದೆ. ಆದರೆ ಎರಡು ಸಮುದಾಯಗಳು ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ವಿಶ್ವಾಸದ ಕೊರತೆಯೇ ಈಗ ದೊಡ್ಡ ಸಮಸ್ಯೆಯಾಗಿದೆ.”
ಸುಟ್ಟ ಮನೆಗಳು, ಭಯಭೀತ ಮುಖಗಳು ಮತ್ತು ನಿರ್ಜನ ಹಳ್ಳಿಗಳು
ಸುಮಾರು ಎರಡು ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರದಿಂದಾಗಿ ಸಾವಿರಾರು ಜನರು ರಾಜ್ಯದ ವಿವಿಧ ಪ್ರದೇಶಗಳಿಂದ ತಮ್ಮ ಊರುಗಳನ್ನು ತೊರೆದಿದ್ದಾರೆ.
ಅಂತಹದ್ದೇ ಒಂದು ಹಳ್ಳಿಗೆ ಹೋದಾಗ ಅಲ್ಲಿನ ಮಹಿಳೆಯರು ಎಲ್ಲೆಡೆ ವಾಹನಗಳ ತಪಾಸಣೆ ನಡೆಸುತ್ತಿದ್ದರು.
ಇಂತಹ ಗಸ್ತು ಮಹಿಳೆಯರ ಗುಂಪನ್ನು ಮನ್ನಡೆಸುತ್ತಿದ್ದ ಮಹಿಳೆಯೊಬ್ಬರು “ನಾವು ಊರಿಗೆ ಬರುವ ಒಂದು ಗಾಡಿಯನ್ನೂ ಬಿಡದೆ ತಪಾಸಣೆ ಮಾಡುತ್ತಿದ್ದೇವೆ. ಯಾರು ಏನು ತರುತ್ತಿದ್ದಾರೆ ಎನ್ನುವುದನ್ನು ನೋಡಬೇಕಲ್ಲವೆ? ಯಾರಾದರೂ ಬಂದೂಕು ತಂದರೆ ಏನು ಮಾಡುವುದು?” ಎಂದು ಕೇಳುತ್ತಾರೆ.
ಮೈತೇಯಿ ಸಮುದಾಯಕ್ಕೆ ಸೇರಿದ ಮಹಿಳೆರು ಕುಕಿ ಸಮುದಾಯಕ್ಕೆ ಸೇರಿದ ಮಹಿಳೆಯರಿಂದ ದಾಳಿಯೆದುರಾಗುವ ಭಯದಲ್ಲಿದ್ದಾರೆ. ಹೀಗಾಗಿಯೇ ದಾರಿಯುದ್ದಕ್ಕೂ ಅಲ್ಲಲ್ಲಿ ಚೆಕ್ ಪೋಸ್ಟ್ಗಳನ್ನು ಹಾಕಲಾಗಿದೆ.
ಸುಗನು ಎನ್ನುವುದು ಮೈತೇಯಿ ಮತ್ತು ಕುಕಿ ಸಮುದಾಯಗಳೆರಡೂ ವಾಸವಿರುವ ಪ್ರದೇಶ. ಇಲ್ಲಿ ಜನರು ದಶಕಗಳ ಕಾಲದಿಂದ ಒಟ್ಟಿಗೆ ಬದುಕುತ್ತಿದ್ದಾರೆ. ಮೇ 3ರಂದು ದಂಗೆ ಆರಂಭಗೊಂಡ ದಿನದಂದು ಇಲ್ಲಿ ಎರಡೂ ಸಮುದಾಯಗಳು ಪರಸ್ಪರ ಶಾಂತಿ ಒಪ್ಪಂದಕ್ಕೆ ಬಂದು ಪರಸ್ಪರ ಹಿಂಸಾಚಾರಕ್ಕೆ ಇಳಿಯದಿರುವ ನಿರ್ಧಾರಕ್ಕೆ ಬಂದಿದ್ದವು. ಈ ಒಪ್ಪಂದವು 23 ದಿನಗಳ ಕಾಲ ಮುಂದುವರೆಯಿತು. ಮೇ 28ರಂದು ಇಲ್ಲಿಯೂ ಹಿಂಸಾಚಾರ ಭುಗಿಲೆದ್ದಿತು.
ಇದರ ಪರಿಣಾಮವಾಗಿ ಇಲ್ಲಿ ವಾಸವಿದ್ದ ಸಾವಿರಾರು ಜನರು ತಮ್ಮ ಮನೆಗಳನ್ನು ತೊರೆಯಬೇಕಾಯಿತು. ಊರಿನಲ್ಲಿರುವವರು ಯಾವ ಕ್ಷಣದಲ್ಲಿ ಏನಾಗುವುದೋ ಎನ್ನುವ ಭಯದಲ್ಲಿ ಬದುಕುತ್ತಿದ್ದಾರೆ.
ಪಲಾಯನಗೈದವರಲ್ಲಿ ಜನರಲ್ಲಿ ಎರಡೂ ಸಮುದಾಯಕ್ಕೆ ಸೇರಿದ ಜನರಿದ್ದಾರೆ. ಸುಮಾರು 7,000 ಜನರಿದ್ದ ಈ ಊರಿನಲ್ಲಿ ಈಗ ಕೇವಲ 1,000 ಜನರು ಉಳಿದಿದ್ದಾರೆ ಎಂದು ಊರಿನವರು ಹೇಳುತ್ತಾರೆ.
ಕುಕಿ ಸಮುದಾಯಕ್ಕೆ ಸೇರಿದ ಪ್ರದೇಶಗಳಿಂದ ಸ್ಥಳೀಯವಾಗಿ ತಯಾರಿಸಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸುಗನುವಿನಲ್ಲಿ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿ ತಿಳಿಸಿದರು.
ಇಲ್ಲಿನ ಕೆಲವರು ತಮ್ಮ ಗುರುತನ್ನು ಮುಚ್ಚಿಡುವ ಭರವಸೆ ನೀಡಿದ ನಂತರ ನಮ್ಮೊಂದಿಗೆ ಮಾತನಾಡಿದರು.
ಈ ಊರಿನ ನಿವಾಸಿಯೊಬ್ಬರು ಮಾತನಾಡುತ್ತಾ “ಎಲ್ಲರೂ ಹೆದರಿದ್ದಾರೆ. ಆದರೆ ನಾನು ನನ್ನ ಊರನ್ನು ಕಾಪಾಡಿಕೊಳ್ಳಲೇಬೇಕಿದೆ. ನಾನು ನನ್ನ ಜನರನ್ನು ರಕ್ಷಿಸಬೇಕು. ಜನರಿಲ್ಲದಿದ್ದರೆ ಊರು ಊರೆನ್ನಿಸಿಕೊಳ್ಳುವುದಿಲ್ಲ” ಎಂದು ಹೇಳಿದರು.
ಸ್ಥಳೀಯರಿಗಿಂತಲೂ ಹೆಚ್ಚಿನ ಭದ್ರತಾ ಪಡೆಗಳು ಕಂಡು ಬರುವ ಸಗನುವಿನಂತಹ ಸಾಕಷ್ಟು ಊರುಗಳಿವೆ. ಕೆಲವು ಊರುಗಳಲ್ಲಿ ಗ್ರಾಮಸ್ಥರೇ ತಮ್ಮ ಊರುಗಳ ಸುತ್ತ ಶಸ್ತ್ರಾಸ್ತ್ರಗಳೊಂದಿಗೆ ಊರಿನ ಕಾವಲು ಕಾಯುವುದನ್ನು ಸಹ ಕಾಣಬಹುದು.
ಈ ಹಿಸಾಚಾರದ ಕುರಿತು ತನಿಖೆ ನಡೆಸಲು ಕೇಂದ್ರ ಸರ್ಕಾರವು ನ್ಯಾಯಾಂಗ ಆಯೋಗವನ್ನು ರಚಿಸಿದೆ. ಹಾಗೆಯೇ ಸಿಬಿಐ ಕೂಡಾ ತನಿಖೆ ಆರಂಭಿಸಿದೆ.
ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ರಾಜ್ಯ ಸರ್ಕಾರ ಹೇಳುತ್ತದೆ.
ಆದರೆ ರಾಜ್ಯದಲ್ಲಿ ನಡೆಯುತ್ತಿರುವ ದೈನಂದಿನ ಹಿಂಸಾಚಾರವು ಎರಡು ಸಮುದಾಯಗಳ ನಡುವಿನ ಅಪನಂಬಿಕೆ ಗಾಢವಾಗುತ್ತಲೇ ಇದೆ ಎಂಬುದನ್ನು ನೆನಪಿಸುತ್ತದೆ.
ಇಂತಹ ದಳ್ಳುರಿಯಲ್ಲಿ ಮಣಿಪುರದ ಸಾವಿರಾರು ಜನರು ಪ್ರತಿದಿನ ನರಳುತ್ತಿದ್ದಾರೆ.
ಆಧಾರ: ಬಿಬಿಸಿ