ಮಹಿಳೆ ಮತ್ತು ಸ್ತ್ರೀ ಪರ ಚಿಂತನೆ ಹಿನ್ನೆಲೆಯಲ್ಲಿ ಕಳ್ಳುಬಳ್ಳಿ ಅಂಕಣದಲ್ಲಿ ಲೇಖಕರಾದ ನಳಿನಿ ಚಿಕ್ಕಮಗಳೂರು ಅಂಕಣಕ್ಕೆ ಜೀವ ತುಂಬಲಿದ್ದಾರೆ. ಪೀಪಲ್ ಮೀಡಿಯಾದ ಕಳ್ಳುಬಳ್ಳಿಗೆ ಇದು ಅವರ ಮೊದಲ ಅಂಕಣ.
ರಾಜ ಮಹಾರಾಜರ ಕಾಲದಲ್ಲಿ ವಿಶೇಷವಾಗಿ ರಾಣಿಯರು ಲೋಹದ ಚಡ್ಡಿಯನ್ನು ಧರಿಸಿಕೊಳ್ಳಬೇಕಾಗಿತ್ತು. ಅದರ ಬೀಗವನ್ನು ರಾಜ ಮಾತ್ರ ತೆರೆಯಲು ಅವಕಾಶ ಇರುತ್ತಿತ್ತು. ಹೀಗೆ ಮಾಡುವ ಕ್ರಮ ಏಷ್ಯಾದ ದೇಶಗಳಲ್ಲಿ ನಡೆಯುತ್ತಿತ್ತು.
ಚೀನಾ ದೇಶದಲ್ಲೂ ಈ ಕ್ರಮ ಇತ್ತು. ಓರ್ವ ಚೀನಿ ಯುವತಿಯ ತಂದೆ ಮಾಡಿಸಿದ್ದ ಇಂಥಾ ಒಂದು ಸಾಧನ ಧರಿಸಿದ್ದ ಹೆಣ್ಣೊಬ್ಬಳಿಗೆ ವಿವಾಹ ನಡೆದ ಮೇಲೂ ಅದನ್ನು ಬಿಚ್ಚಿಕೊಳ್ಳಲು ಕಬ್ಬಿಣದ ಕೆಲಸಗಾರನ ಬಳಿಗೆ ಕೋರಿದರೂ ಸಾಧ್ಯವಾಗಲಿಲ್ಲ. ಹೀಗೇ ನಿರಾಸೆಯಲ್ಲೇ ಗಂಡ ಹೆಂಡಿರು ಆ ಲೋಹದ ಸಾಧನ ಬಿಚ್ಚುವ ವಿಫಲ ಯತ್ನ ನಡೆಸುತ್ತಲೇ ವರ್ಷಗಳನೇಕ ಕಳೆಯುತ್ತಾರೆ. ಹೀಗೇ ಒಂದು ದಿನ ಆಕೆಯ ಗಂಡನೂ ಸಾಯುತ್ತಾನೆ. ಗಂಡ ಸತ್ತ ದಿವಸ ಅಚಾನಕ್ ಆಕೆಯ ಲೋಹದ ಒಳ ಉಡುಗೆ ತೆರೆದುಕೊಂಡು ಆಕೆಗೆ ಇನ್ನಿಲ್ಲದಷ್ಟು ದುಃಖ ಉಂಟು ಮಾಡುತ್ತದೆ.
ಹೆಣ್ಣು ರಾಜನೊಬ್ಬನಿಗೇ ನಿಗದಿ ಪಡಿಸಿದಂತೆ ಬಾಳಬೇಕು ಎಂಬ ಉದ್ದೇಶದಿಂದ ಲೋಹದ ಒಳ ಉಡುಪನ್ನು ಆತನನ್ನು ವರಿಸುವ ಹೆಣ್ಣುಗಳು ಧರಿಸಬೇಕಾಗಿತ್ತು.
ಈ ಕ್ರಮ ರಾಜ ಮಹಾರಾಜರಲ್ಲಷ್ಟೇ ಅಲ್ಲದೆ ಉಚ್ಚ ಜಾತಿಯವರಲ್ಲೂ ರೂಢಿಯಲ್ಲಿತ್ತು. ಇಂಥಾ ಲೋಹದ ಒಳಾಂಗ ಸಾಧನ ಧರಿಸುವ ಹೆಣ್ಣುಮಕ್ಕಳಲ್ಲಿ ಎಲ್ಲರಿಗೂ ಅದರ ಕೀ ಹೊಂದುವ ಅವಕಾಶ ಇರಲಿಲ್ಲ. ಆಕೆಯ ವಿವಾಹಿತ ಪುರುಷರು ಅದರ ಕೀಲಿಕೈಗಳನ್ನು ಹೊಂದಿರುತ್ತಿದ್ದರು.
ಕೆಲವು ವರ್ಷಗಳ ಹಿಂದೆ ಉತ್ತರ ಭಾರತದ ಭಾಗದಲ್ಲಿ ನಡೆದ ಪ್ರಕರಣವೊಂದರ ಸುದ್ದಿ ಹೀಗೆ ಪ್ರಕರಣವಾಗಿತ್ತು. ಪತ್ನಿಯ ಮೇಲಿನ ಶಂಕೆಯಿಂದ ಓರ್ವ ಪತಿಯು ತನ್ನ ಪತ್ನಿಯ ಮರ್ಮಾಂಗವನ್ನು ಹೊಲೆದಿದ್ದ. ಘಟನೆ ಬಗ್ಗೆ ಸ್ಥಳೀಯರಿಂದ ಪೊಲೀಸರು ಆಕೆಯನ್ನು ರಕ್ಷಿಸಿ ವೈದ್ಯಕೀಯ ಚಿಕಿತ್ಸೆ ನೀಡಲು ಯಶಸ್ವಿಯಾಗಿದ್ದರು. ಇಂತಹ ಕ್ರೌರ್ಯ ಮೆರೆದ ಪತಿಗೆ ಶಿಕ್ಷೆ ಸಹ ವಿಧಿಸಲು ನ್ಯಾಯಾಂಗಕ್ಕೆ ಕೋರಿದ್ದರು.
ಶತಶತಮಾನಗಳಿಂದಲೂ ಹೆಣ್ಣಿನ ಲೈಂಗಿಕ ಸ್ವಾತಂತ್ರ್ಯದ ಹಕ್ಕನ್ನು ಹತ್ತಿಕ್ಕಲಾಗುತ್ತಿದೆ. ಇಂದಿಗೂ ಜರುಗುವ ಮರ್ಯಾದೆ ಹತ್ಯೆಗಳು ಇದಕ್ಕೆ ನೈಜ ಉದಾಹರಣೆ.
ಮುಸ್ಲಿಂ ಮಹಿಳೆಯರಿಗೆ ದಿನಕ್ಕೊಬ್ಬ ಗಂಡ ಎನ್ನುವಂತಹ ಅಮಾನವೀಯ ಹೇಳಿಕೆಗಳು ಇದೇ ಸಾಲಿನಲ್ಲಿ ಸರಿಗಟ್ಟಿ ನಿಲ್ಲುತ್ತವೆ.
ಒಂದುಕಡೆ ಹೆಣ್ಣು ತನ್ನ ಇಷ್ಟದ ಸಂಗಾತಿ ಹೊಂದಲು ಅವಕಾಶ ನೀಡುವಲ್ಲಿ ಜಾತಿ, ಧರ್ಮ, ಅಂತಸ್ತಿನ ತಡೆಗೋಡೆಗಳನ್ನು ಎತ್ತಿ ಕಟ್ಟುತ್ತದೆ. ಮತ್ತೊಂದೆಡೆ ವಿವಾಹಿತ ಮಹಿಳೆಯರು ತಮ್ಮ ಸಂಗಾತಿ ಯೊಡನೆ ಸುಖಿಸುವ ಹಕ್ಕನ್ನೂ ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತದೆ.
ಧರ್ಮದ ಹೆಸರಿನಲ್ಲಿ ಸಾವಿರಾರು ಹೆಣ್ಣುಮಕ್ಕಳನ್ನು ಬೆತ್ತಲೆ ಮಾಡಿದ್ದ ಅಸಾರಾಮ್ ಬಾಪು ತರಹದ ಧರ್ಮಾಂಧ ವಿಟರಿಗೆ ಕೋಟಿ ಕೋಟಿ ಬಂದು ಕೊಳೆಯುತ್ತಿತ್ತು. ಚಿತ್ರದುರ್ಗದ ಮಠದ ಕಾಮಕತೆಗಳು ಮುಕ್ಕಿದ ಹಸುಳೆಗಳ ಭವಿಷ್ಯ ಬದಲಿಸಿಲ್ಲ ಇನ್ನೂ.
ಒಟ್ಟಾರೆ ಹೇಳುವುದಾದರೆ ಸ್ತ್ರೀಯರು ಸ್ವಾತಂತ್ರ್ಯಕ್ಕೆ ಅರ್ಹತೆ ಪಡೆದಿಲ್ಲ. ಅದರಲ್ಲೂ ಲೈಂಗಿಕ ಸ್ವಾತಂತ್ರ್ಯ ಕನಸಿನ ಮಾತು.
ರಾಣಿಯರು ರಾಜ ವರ್ಷಗಟ್ಟಲೆ ಯುದ್ಧ, ಬೇಟೆ ಮೊದಲಾದವುಗಳನ್ನು ನಡೆಸಿ ಅಂತಃಪುರಕ್ಕೆ ಬರುವವರೆಗೂ ಸಹ ಕೀಲಿಕೈಗಾಗಿ ಕಾಯಬೇಕಿತ್ತು. ಇಂತಹ ಸಾಧನ ಧರಿಸಿದ ಮೇಲೆ ಮುಟ್ಟಿನ ನಿರ್ವಹಣೆ, ಮಲಮೂತ್ರ ವಿಸರ್ಜನೆಯೂ ಸಹ ತಾಪತ್ರಯವೇ ಆಗಿರುತ್ತಿತ್ತು. ಕೆಲವೊಮ್ಮೆ ದಾಸಿಯರು ಸಹ ಈ ಕೀಲಿಕೈ ನಿರ್ವಹಣೆ ಮಾಡಿದ್ದಿರಬಹುದೆನೋ.. ಒಂದರ್ಥದಲ್ಲಿ ಇದು ದೈಹಿಕ ಹಿಂಸೆ ಹುಟ್ಟಿಸಿದ್ದಲ್ಲಿ ಆಶ್ಚರ್ಯವಿಲ್ಲ.
ಬಹು ಪತ್ನಿತ್ವ ಅನುಸರಿಸುವ ಕುಟುಂಬದಲ್ಲಿ ಯಾವ ಪತ್ನಿಗೆ ಲೈಂಗಿಕ ಸ್ವಾತಂತ್ರ್ಯ ಇದೆ? ತನ್ನ ಗಂಡನ ಬಳಿಗೆ ಹೋಗಲು ಸಹ ಆತನದೇ ಒಪ್ಪಿಗೆಯ ಅವಶ್ಯಕತೆ ಇರುತ್ತದೆ.
ರಾಜನೊಬ್ಬನ ಹಲವಾರು ಪತ್ನಿಯರು ಎಲ್ಲಾ ಅರಸೊತ್ತಿಗೆ ನಡುವೆ ತನ್ನ ರಾಜನ ಬಳಿಗೆ ಹೋಗಲು, ಸುಖಿಸಲು ಸ್ವಾತಂತ್ರ್ಯವಿಲ್ಲದೇ ಬದುಕುತ್ತಾರೆ. ಈ ಅಸುಖದ ಮನಸ್ಸುಗಳಿಗೆ ಬಹಳ. ನೋವಿರುತ್ತದೆ. ಇದರ ಜೊತೆಗೆ ರಾಜನ ಮೊದಲ ಮಗನಿಗೆ ಮಾತ್ರ ಧಕ್ಕುವ ಸಿಂಹಾಸನ ಉಳಿದ ಮಕ್ಕಳು ಹಡೆದವರನ್ನು ಅತಂತ್ರ ಸ್ಥಿತಿಗೆ ದೂಕುತ್ತಿತ್ತು. ಹೀಗಿರುವಾಗ ಅಂಥಾ ರಾಣಿಯರು ರಾಜನೊಂದಿಗೆ ನಿಜವಾಗಿಯೂ ಸುಖಿಸಲು ಅವಕಾಶ ಇರುತ್ತಿತ್ತೇ ಎಂಬುದೇ ಯಕ್ಷಪ್ರಶ್ನೆ.
ಒಂದರ್ಥದಲ್ಲಿ ಕೆಲವು ಹೆಣ್ಣು ಮಕ್ಕಳು ವಿವಾಹಿತರಾದರೂ ಊರ್ಮಿಳೆಯರಂತೆ ಕಾಯುತ್ತಲೇ ಜೀವನ ಸಾಗಿಸಬೇಕಾದ ಸಂದರ್ಭಗಳು ಅನೇಕ. ಸೈನ್ಯದಲ್ಲಿ ಉದ್ಯೋಗ ಮಾಡುವ ಪತಿ, ದುಬೈ ಸೇರಿದಂತೆ ವಿದೇಶದಲ್ಲಿ ಉದ್ಯೋಗದಲ್ಲಿರುವ ಪತಿ ಹೀಗೆ ಪತಿ ಸತಿಯಿಂದ ದೂರ ಇದ್ದಾಗ ಆತನಿಗಾಗಿ ಕಾಯುತ್ತಲೇ ಬಾಳಬೇಕಾಗುವುದು.
ಹದಿನಾರಕ್ಕಿಂತ ಬೇಗ ಋತುಮತಿಯರಾಗುವ ಹೆಣ್ಣುಮಕ್ಕಳು ಐರೋಪ್ಯ ರಾಷ್ಟ್ರಗಳಲ್ಲಿ ಕಿರಿಯ ವಯಸ್ಸಿಗೇ ತಾಯಂದಿರಾಗಿ ಆ ಮಗುವನ್ನು ಬೆಳೆಸುವ ತಾಯಿಯಾಗಿ ಬದಲಾವಣೆ ಆಗುತ್ತಿದ್ದಾರೆ. ದೇಹದ ಅಂಗಗಳ ಬಗ್ಗೇ ಏನೂ ಅರಿಯದ ಕಿರಿಯ ಹೆಣ್ಣುಮಕ್ಕಳಿಗೆ ಒತ್ತಾಯವೋ, ದೇಹ ಚಪಲವೋ ಕಾಮ ಕ್ರೀಡೆಗೆ ಇಳಿಸಿ ಗರ್ಭಿಣಿಯರನ್ನಾಗಿ ಮಾಡುತ್ತಿರುವವರು ಸಹ ಕಿರಿಯ ವಯೋಮಾನದ ಗಂಡು ಮಕ್ಕಳೇ. ಇಂಥಾ ಪ್ರಕರಣಗಳಲ್ಲಿ ನೋಯುವ ಹೆಣ್ಣು ಭವಿಷ್ಯದಲ್ಲಿ ಇನ್ಯಾವ ಸುಖಗಳ ನಿರೀಕ್ಷೆ ಇರಿಸಿಕೊಳ್ಳಲು ಸಾಧ್ಯ? ಇನ್ನು ಲೈಂಗಿಕ ಸ್ವಾತಂತ್ರ್ಯದ ಹಕ್ಕು ದೂರವೇ ಉಳಿಯುವುದು.