ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆಗೆ ಸಿದ್ಧವಾಗಿದೆ. ಫೆಬ್ರವರಿ 5ರಂದು ಚುನಾವಣೆ ನಡೆಯಲಿದ್ದು. ಇಲ್ಲ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಅದರಲ್ಲೂ ಈ ಚುನಾವಣೆ ಬಿಜೆಪಿ ಮತ್ತು ಎಎಪಿ ನಡುವಿನ ಹೋರಾಟ ಅಂತಲೇ ಬಣ್ಣಿಸಲಾಗ್ತಿದೆ.
ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಮತ್ತೊಮ್ಮೆ ದೆಹಲಿಯ ಮುಖ್ಯಮಂತ್ರಿ ಆಗಬೇಕೆಂದು ಬಯಸಿದ್ದಾರೆ. ಇದೀಗ ಕೇಜ್ರಿವಾಲ್ ಅವರು ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಮಧ್ಯಮ ವರ್ಗದವರಿಗಾಗಿ ಏಳು ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದಾರೆ.
ಈ ಕುರಿತು ವಿಡಿಯೊ ಸಂದೇಶ ಬಿಡುಗಡೆ ಮಾಡಿರುವ ಅವರು, ಮಧ್ಯಮ ವರ್ಗವು ಭಾರತೀಯ ಆರ್ಥಿಕತೆಯ ನಿಜವಾದ ಶಕ್ತಿಯಾಗಿದೆ. ಆದರೆ ದೀರ್ಘಕಾಲದಿಂದ ಅವರನ್ನು ನಿರ್ಲಕ್ಷಿಸುತ್ತಿದ್ದು ಅವರನ್ನು ಕೇವಲ ತೆರಿಗೆ ಸಂಗ್ರಹಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಅವರ ಬದುಕಿನ ಸುಧಾರಣೆಗಾಗಿ 7 ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದಾರೆ.
ಬೇಡಿಕೆಗಳು:
- ಶಿಕ್ಷಣ ಕ್ಷೇತ್ರಕ್ಕೆ ಸಂಬಧಿಸಿದ ಬಜೆಟ್ ಈಗಿರುವ ಶೇ 2ರಿಂದ ಶೇ 10ಕ್ಕೆ ಏರಿಸಬೇಕು ಮತ್ತು ಖಾಸಗಿ ಶಾಲೆಗಳ ಶುಲ್ಕವನ್ನು ಮಿತಿಗೊಳಿಸಬೇಕು .
- ಗುಣಮಟ್ಟದ ಶಿಕ್ಷಣ ಎಲ್ಲರಿಗೂ ತಲುಪುವಂತೆ ಮಾಡಲು ಉನ್ನತ ಶಿಕ್ಷಣಕ್ಕಾಗಿ ಸಹಾಯಧನ ಮತ್ತು ವಿದ್ಯಾರ್ಥಿವೇತನ ನೀಡಬೇಕು.
- ಆರೋಗ್ಯ ವಿಮಾ ಕಂತುಗಳ ಮೇಲಿನ ತೆರಿಗೆಗಳನ್ನು ತೆಗೆದು ಹಾಕಬೇಕು. ಜತೆಗೆ ಅದರ ಜಿಡಿಪಿಯನ್ನು ಶೇ 10ಕ್ಕೆ ಏರಿಸಬೇಕು.
- ಮಧ್ಯಮ ವರ್ಗದವರ ಮೇಲೆ ಹೆಚ್ಚಿನ ಆರ್ಥಿಕ ಹೊರೆಯಾಗುತ್ತಿರುವ ಕಾರಣ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ₹7 ಲಕ್ಷದಿಂದ ₹10 ಲಕ್ಷಕ್ಕೆ ಹೆಚ್ಚಿಸಬೇಕು.
- ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿ ತೆಗೆದುಹಾಕಬೇಕು
- ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ಸೇವೆ ಸೇರಿದಂತೆ ವಿವಿಧ ನಿವೃತ್ತಿ ಯೋಜನೆಗಳನ್ನು ಜಾರಿಗೊಳಿಸುವ ಬಗ್ಗೆ ಪ್ರಸ್ತಾಪಿಸಿದರು.
- ಇತ್ತೀಚಿನ ವರ್ಷಗಳಲ್ಲಿ ಸ್ಥಗಿತಗೊಂಡಿರುವ ಹಿರಿಯ ನಾಗರಿಕರಿಗೆ ರೈಲು ಪ್ರಯಾಣ ದರದಲ್ಲಿ ಶೇ 50ರಷ್ಟು ರಿಯಾಯಿತಿಯನ್ನು ಮತ್ತೆ ಜಾರಿಗೆ ತರಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಬೇಡಿಕೆಗಳ ಜೊತೆಗೆ ಎಎಪಿ ಪಕ್ಷದ ಜವಾಬ್ದಾರಿಯನ್ನು ವಿವರಿಸಿದ ಅವರು ಎಎಪಿ ಸಂಸದರು ಮುಂಬರುವ ಸಂಸತ್ತಿನ ಅಧಿವೇಶನಗಳಲ್ಲಿ ಮಧ್ಯಮ ವರ್ಗದ ಪರ ಧ್ವನಿ ಎತ್ತುತ್ತಾರೆ, ಅವರ ಸಮಸ್ಯೆಗಳನ್ನು ರಾಜಕೀಯ ಭಾಷಣದ ಕೇಂದ್ರಬಿಂದುವನ್ನಾಗಿ ಮಾಡುವುದಾಗಿ ಪ್ರತಿಜ್ಞೆ ಮಾಡುತ್ತಾರೆ ಎಂದು ವಾಗ್ದಾನ ನೀಡಿದ್ದಾರೆ.