ಹಾಸನ : ಚಿರತೆಗಳ ಹಾವಳಿ ಹೆಚ್ಚಾಗುತ್ತಿದ್ದು, ಹೊಳೆನರಸೀಪುರ ತಾಲ್ಲೂಕಿನ ಮಾಯಗೌಡನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ ಮೂರು ಸಿಂಧಿ ಕರುಗಳು ಬಲಿಯಾಗಿವೆ.
ಗ್ರಾಮದ ದಿಲೀಪ್ ಅವರಿಗೆ ಸೇರಿದ ಕರುಗಳನ್ನು ಶೆಡ್ನಲ್ಲಿ ಕಟ್ಟಿ ಹಾಕಲಾಗಿತ್ತು. ಇಂದು ಮುಂಜಾನೆ ಸುಮಾರು 5.30ರ ವೇಳೆಗೆ ಶೆಡ್ಗೆ ನುಗ್ಗಿದ ಚಿರತೆ ಕರುಗಳ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ ಮೂರು ಕರುಗಳು ಮೃತಪಟ್ಟಿದ್ದು, ಚಿರತೆ ಅವುಗಳನ್ನು ಭಾಗಶಃ ತಿಂದು ಹಾಕಿರುವುದು ಪತ್ತೆಯಾಗಿದೆ. ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದ್ದು, ಹಗಲು ವೇಳೆಯಲ್ಲೂ ಮೇಯಲು ಬಿಟ್ಟಿರುವ ಜಾನುವಾರುಗಳ ಮೇಲೆ ಚಿರತೆಗಳು ದಾಳಿ ನಡೆಸುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ರಾತ್ರಿ ವೇಳೆ ಆಹಾರ ಅರಸಿ ಗ್ರಾಮ ಹಾಗೂ ವಾಸದ ಮನೆಗಳ ಸಮೀಪ ಚಿರತೆಗಳು ಸಂಚರಿಸುತ್ತಿರುವುದರಿಂದ ಜನರು ಭಯಭೀತರಾಗಿದ್ದಾರೆ.
ಕೂಡಲೇ ಬೋನು ಅಳವಡಿಸಿ ಚಿರತೆಯನ್ನು ಸೆರೆಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
