Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಸಂಸತ್‌ ದಾಳಿ: 8 ಭದ್ರತಾ ಸಿಬ್ಬಂದಿ ಅಮಾನತು

ಸಂಸತ್‌ ದಾಳಿ: 8 ಭದ್ರತಾ ಸಿಬ್ಬಂದಿ ಅಮಾನತು

0
ಸಂಸತ್‌ ದಾಳಿ

ನವದೆಹಲಿ: ಭದ್ರತಾ ಲೋಪದ ಬಗ್ಗೆ ಚರ್ಚೆಯನ್ನು ನಡೆಸುವಂತೆ  ಪ್ರತಿಪಕ್ಷಗಳ ನಾಯಕರು ಬುಧವಾರ ಪಟ್ಟು ಹಿಡಿದ ಕಾರಣ ಸಂಸತ್ತಿನ ಉಭಯ ಸದನಗಳನ್ನು ಗುರುವಾರ ಕೆಲ ಕಾಲ ಮುಂದೂಡಲಾಗಿದೆ.

ಈ ಸಂದರ್ಭದಲ್ಲಿ ಚೇಂಬರ್‌ನ ಸುರಕ್ಷತೆಯ ಉಸ್ತುವಾರಿ ವಹಿಸಿದ್ದ ಎಂಟು ಭದ್ರತಾ ಸಿಬ್ಬಂದಿಗಳನ್ನು ಲೋಕಸಭೆಯ ಕಾರ್ಯದರ್ಶಿ ಅಮಾನತುಗೊಳಿಸಿರುವುದು ವರದಿಯಾಗಿದೆ.

ಲೋಕಸಭೆಯಲ್ಲಿ ಪ್ರತಿಭಟನಾ ನಿರತ ಸಂಸದರಿಗೆ ಬುಧವಾರದ ಘಟನೆಯ ಬಗ್ಗೆ ಮಾತನಾಡುತ್ತಾ  ಸ್ಪೀಕರ್ ಓಂ ಬಿರ್ಲಾ ಈ ಬಗ್ಗೆ ಎಲ್ಲರೂ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ. ಇಬ್ಬರು ಆಗಂತುಕರು ಸಂದರ್ಶಕರ ಪಾಸ್‌ಗಳೊಂದಿಗೆ ಪ್ರವೇಶಿಸಿ , ಕಣ್ಣುರಿಯುಂಟು ಮಾಡುವ ಹೊಗೆಯನ್ನು ಬಿಟ್ಟಿದ್ದರು. ಓರ್ವ ಸಂದರ್ಶಕರ ಗ್ಯಾಲರಿಯಿಂದ ಕೆಳಗೆ ಜಿಗಿದಿದ್ದು, ಬೆಂಚುಗಳ ಮೇಲೆ ಹಾರಿ ನೇರವಾಗಿ ಸ್ಪೀಕರ್ ಕುರ್ಚಿಗೆ ಹೋಗುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸದನದ ಭದ್ರತೆಯು ಲೋಕಸಭೆಯ ಸೆಕ್ರೆಟರಿಯೇಟ್‌ನ ಜವಾಬ್ದಾರಿಯಾಗಿದೆ ಎಂದು ಬಿರ್ಲಾ ತಿಳಿಸಿದ್ದಾರೆ. ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡುವ ಮೊದಲು, “ನಾನು ನಿಮ್ಮೊಂದಿಗೆ ಈ ಕುರಿತು ಚರ್ಚಿಸಿದ್ದೇನೆ… ಸಚಿವಾಲಯದ ಕಾರ್ಯನಿರ್ವಹಣೆಯಲ್ಲಿ ಸರ್ಕಾರ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ರೀತಿಯ ಉಲ್ಲಂಘನೆ ದುರದೃಷ್ಟಕರ, ಭವಿಷ್ಯದಲ್ಲಿ ಜಾಗರೂಕರಾಗಿರಬೇಕು ಮತ್ತು ಸುಖಾಸುಮ್ಮನೆ ಎಲ್ಲರಿಗೂ ಸಂದರ್ಶಕರ ಪಾಸ್‌ಗಳನ್ನು ನೀಡದಂತೆ ಎಲ್ಲಾ ಸಂಸದರಿಗೆ ಮನವಿ ಮಾಡಿದ್ದಾರೆ. “ಹಳೆಯ ಸಂಸತ್ತಿನಲ್ಲೂ ಇಂತಹ ಘಟನೆಗಳು ನಡೆದಿವೆ. ಘಟನೆಯ ನಂತರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಮುಂದಿನ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ನಿರ್ದೇಶನಗಳನ್ನು ನೀಡಲಾಗಿದೆ ”ಎಂದು ಸಿಂಗ್ ಲೋಕಸಭೆಯಲ್ಲಿ ಸಂಸದರಿಗೆ ತಿಳಿಸಿದ್ದಾರೆ.

ರಾಜ್ಯಸಭೆಯಲ್ಲೂ, ಪ್ರತಿಪಕ್ಷಗಳು ಘಟನೆಯ ಬಗ್ಗೆ ಚರ್ಚೆ ಮಾಡುವಂತೆ ಜೋರಾಗಿ ಕೂಗಿ ಒತ್ತಾಯಿಸುತ್ತಿದ್ದಂತೆ, ಸಭಾಪತಿ ಜಗದೀಪ್ ಧನಕರ್ ಅವರು ಸದನವನ್ನು ಸಂಕ್ಷಿಪ್ತವಾಗಿ ಮುಂದೂಡಿದರು.

ಬುಧವಾರ ಭದ್ರತಾ ಲೋಪಕ್ಕಾಗಿ ಐವರನ್ನು ಬಂಧಿಸಲಾಗಿದ್ದು, ಪೊಲೀಸರು ಆರನೇ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಗುಂಪು 18 ತಿಂಗಳಿನಿಂದ ದಾಳಿಯನ್ನು ಯೋಜಿಸಿತ್ತು.

ಅವರಲ್ಲಿ ಇಬ್ಬರು, ಮೈಸೂರಿನ ಇಂಜಿನಿಯರ್ ಡಿ ಮನೋರಂಜನ್ ಮತ್ತು ಲಕ್ನೋ ಪದವೀಧರ ಸಾಗರ್ ಶರ್ಮಾ ಅವರು ಬುಧವಾರ ಕೆಳಮನೆಗೆ ನುಗ್ಗುತ್ತಿದ್ದಂತೆ ಭದ್ರತಾ ಸಿಬ್ಬಂದಿ ಅವರನ್ನು ವಶಕ್ಕೆ ತೆಗೆದುಕೊಂಡರು.

ಮತ್ತಿಬ್ಬರು, ಹಿಸಾರ್‌ನ ನೀಲಂ ಆಜಾದ್ ಮತ್ತು ಲಾತೂರ್ ಪದವೀಧರ ಅನ್ಮೋಲ್ ಶಿಂಧೆ ಸಂಸತ್ತಿನ ಹೊರಗೆ ಘೋಷಣೆಗಳನ್ನು ಕೂಗಿ, ಹೊಗೆಯ ಡಬ್ಬಿಯನ್ನು ಹಾರಿಸಿದ್ದಾರೆ. ಮತ್ತು “ಸರ್ವಾಧಿಕಾರ ಸಾಧ್ಯವಿಲ್ಲ,” ಎಂದು ಕೂಗಿದ್ದಾರೆ.

ಬಂಧನಕ್ಕೊಳಗಾದ ಐದನೇ ವ್ಯಕ್ತಿ ಗುರ್‌ಗಾಂವ್‌ನ ಲಲಿತ್ ಝಾ ಮನೆಯಲ್ಲಿ ಇವರು ತಂಗಿದ್ದರು. ವಿಕ್ಕಿ ಅಥವಾ ವಿಶಾಲ್ ಶರ್ಮಾ ಎಂಬ ಶಂಕಿತ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಅಧಿಕಾರವನ್ನು ಬಳಸಿ ಮನೋರಂಜನ್ ಮತ್ತು ಶರ್ಮಾ ಸಂದರ್ಶಕರ ಪಾಸ್ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. 

ಸಂಸತ್ತಿನ ಭದ್ರತಾ ಉಲ್ಲಂಘನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಕೇಂದ್ರ ಗೃಹ ಸಚಿವಾಲಯವು ಸಿಆರ್‌ಪಿಎಫ್ ಮಹಾನಿರ್ದೇಶಕ ಅನೀಶ್ ದಯಾಳ್ ಸಿಂಗ್ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದೆ.

You cannot copy content of this page

Exit mobile version