73 ರ ಹರಯದ ಜನಪರ ಹೋರಾಟಗಾರ, ಅಂಬೇಡ್ಕರ್ ವಾದಿ, ವೈಚಾರಿಕ ಚಿಂತಕ, ಕ್ರಾಂತಿಕಾರಿ ಮಂಟೇ ಲಿಂಗಯ್ಯನವರು ಇಂದು ನಮ್ಮೊಡನಿಲ್ಲ. ಅದರೆ ಅವರ ಹೋರಾಟದ ಶೈಲಿ, ಸಿಡಿಲಿನ ಭಾಷಣ ಎಂದೆಂದೂ ಗುನುಗಲ್ಪಡುತ್ತಿರುತ್ತದೆ. ಹೋರಾಟದ ಹಣತೆಗೆ ನಿತ್ಯ ಎಣ್ಣೆ ಎರೆಯುತ್ತಿರುತ್ತದೆ. ಚಿಂತಕ ರಘೋತ್ತಮ ಹೊ ಬ ಅವರು ಬರೆದಿರುವ ಈ ಆಪ್ತ ನುಡಿ ನಮನದ ಮೂಲಕ ಪೀಪಲ್ ಮೀಡಿಯಾವು ಅಗಲಿದ ಚೇತನಕ್ಕೆ ಗೌರವ ಸಲ್ಲಿಸುತ್ತದೆ.
ಮಂಟೇಲಿಂಗಯ್ಯ, ಈ ಹೆಸರು ಕೆಲವರ ಎದೆಯಲ್ಲಿ ಸ್ಪೂರ್ತಿಯ ಮಿಂಚಿನ ಸಂಚಾರ ಹರಿಸಿದರೆ ದೌರ್ಜನ್ಯಕೋರರ ತೊಳ್ಳೆ ನಡುಗಿಸುತ್ತಿತ್ತು. ಹೌದು, ಮೈಸೂರಿನಲ್ಲಿ ನಿನ್ನೆ ನಿಧನರಾದ ವಿಚಾರವಾದಿ ಮಂಟೇಲಿಂಗಯ್ಯ ಅಂತಹ ಅಪರೂಪದ ವ್ಯಕ್ತಿತ್ವದವರು.
ಮಂಟೇಲಿಂಗಯ್ಯ ಹುಟ್ಟಿದ್ದು ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದ ದೊಡ್ಡ ಹೊಲೆಗೇರಿಯಲ್ಲಿ. ಹಾಲಿ ಅದನ್ನು ಈಗ ಕೀರ್ತಿ ನಗರ ಎಂದು ಕರೆಯುತ್ತಾರೆ. ಮುಂದೆ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದ ಅವರು ಮೈಸೂರು ವಾಸಿಗಳೇ ಆಗಿ ಹೋದರು. 1975 -76 ಸಂದರ್ಭ ಅದು ದಲಿತ ಸಂಘರ್ಷ ಸಮಿತಿಯ ಉಗಮದ ಕಾಲ. ಆರಂಭದಲ್ಲಿ ದಸಂಸದಲ್ಲಿ ಗುರುತಿಸಿಕೊಂಡ ಅವರು ರಾಜ್ಯಾದ್ಯಂತ ದಸಂಸದ ಪ್ರಮುಖ ಕಾರ್ಯಕ್ರಮಗಳಲ್ಲಿ ಮುಖ್ಯ ಭಾಷಣಕಾರರು. ಯಾವ ಮಟ್ಟಿಗೆಂದರೆ ಪ್ರೊ.ಬಿ.ಕೃಷ್ಣಪ್ಪ, ಚಂದ್ರ ಪ್ರಸಾದ್ ತ್ಯಾಗಿ , ಡಾ.ಸಿದ್ದಲಿಂಗಯ್ಯ ನವರ ನಂತರ ಮಂಟೇಲಿಂಗಯ್ಯ ಭಾಷಣಕ್ಕೆ ನಿಂತರೆ ಇಡೀ ಸಭಾಂಗಣ ಹುಚ್ಚೆದ್ದು ಕುಣಿಯುತ್ತಿತ್ತು. ಆ ಮಟ್ಟಿಗಿನ ಫೈರ್ ಬ್ರಾಂಡ್ ಭಾಷಣಕಾರರು ಮಂಟೇಲಿಂಗಯ್ಯ. ಮುಂದೆ ಬೆಂಗಳೂರಿನಲ್ಲಿ ನಡೆದ ದಸಂಸದ ಕಾರ್ಯಕ್ರಮವೊಂದರಲ್ಲಿ ದಸಂಸದ ಒಬ್ಬ ನಾಯಕರು ನಾನು ಗಾಂಧಿವಾದಿ, ಒಬ್ಬರು ನಾನು ಲೋಹಿಯಾವಾದಿ, ಒಬ್ಬರು ನಾನು ಮಾರ್ಕ್ಸ್ ವಾದಿ, ಮತ್ತೊಬ್ಬರು ನಾನು ಸಮಾಜವಾದಿ ಎಂದು ಭಾಷಣ ಆರಂಭಿಸಿದಾಗ ಮಂಟೇಲಿಂಗಯ್ಯ ಹಾಗಿದ್ದರೆ ಇಲ್ಲಿ ಅಂಬೇಡ್ಕರ್ ವಾದಿ ಯಾರೂ ಇಲ್ಲವೇ? ಎಂದು ದಸಂಸ ಬಿಟ್ಟು ಹೊರಬಂದರು!

ಅಂದಹಾಗೆ ಆ ಸಂದರ್ಭ, ದೇವರಾಜ ಅರಸುರವರ ಕಾಲ. ಉಳುವವನೆ ಭೂಮಿ ಒಡೆಯ ಕಾರ್ಯಕ್ರಮ ಜಾರಿಯಾಗಿತ್ತು. ಆ ಸಮಯದಲ್ಲಿ ಅವಿಭಜಿತ ಮೈಸೂರು ಜಿಲ್ಲೆಯ (ಈಗಿನ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳನ್ನೊಳಗೊಂಡ) ಭೂ ನ್ಯಾಯ ಮಂಡಳಿ ಅಧ್ಯಕ್ಷರಾಗಿ ಮಂಟೇಲಿಂಗಯ್ಯನವರು ಆಯ್ಕೆ ಆಗುತ್ತಾರೆ. ಆ ಮೂಲಕ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಭೂರಹಿತ ರೈತರಿಗೆ ಜಾತಿ ಭೇದ ಎಣಿಸದೆ ವಿಶೇಷವಾಗಿ ಬಡವರಿಗೆ ಮಂಟೇಲಿಂಗಯ್ಯ ಭೂಮಿ ಕೊಡಿಸುತ್ತಾರೆ. ಯಾವ ಮಟ್ಟಿಗೆಂದರೆ 15 ದಿನಗಳಿಗೊಮ್ಮೆ ನಡೆಯುತ್ತಿದ್ದ ಅದರ ಸಭೆಯಲ್ಲಿ ಕಡ್ಡಾಯವಾಗಿ ಮಂಟೇಲಿಂಗಯ್ಯ ಹಾಜರಿರಲೇಬೇಕು! ಒಮ್ಮೆ ಹೀಗೆ ಅವರು ಹಾಜರಿರದ ಸಮಯ ನೋಡಿ ಶಾಸಕರೊಬ್ಬರು ಅದರ ಅಧ್ಯಕ್ಷತೆ ವಹಿಸಿ ಭೂಮಿಯನ್ನು ಶ್ರೀಮಂತರಿಗೆ ಕೊಡುವ ತೀರ್ಮಾನ ತೆಗೆದುಕೊಳ್ಳುತ್ತಾರೆ. ಆದರೆ ಅದರ ಮುಂದಿನ ಸಭೆಯಲ್ಲೇ ಮಂಟೇಲಿಂಗಯ್ಯ ಆ ಶಾಸಕರ ಕಪಾಳಕ್ಕೆ ಬಾರಿಸಿ ಆ ಮಂಜೂರಾತಿ ರದ್ದುಪಡಿಸುತ್ತಾರೆ!
ಬಡವರ ಒಡನಾಡಿ
ಬಡವರ ಒಡನಾಟ ವಿಶೇಷವಾಗಿ ಎಲ್ಲಾ ಜಾತಿಯ ಬಡವರ ಒಡನಾಟದಲ್ಲಿ ಬೆರೆಯುವ ಗುಣ ಹೊಂದಿದ್ದ ಮಂಟೇಲಿಂಗಯ್ಯನವರು ಬಡವರು ಯಾರೇ ಬರಲಿ ಅವರಿಗೆ ಮನೆ , ಜಮೀನು, ನಿವೇಶನ ಕೊಡಿಸುವ ಕೆಲಸವನ್ನು ಆದ್ಯತೆಯ ಕೆಲಸವಾಗಿಕೈಗೊಳ್ಳುತ್ತಾರೆ. ಯಾವ ಪರಿ ಎಂದರೆ ಮೈಸೂರಿನಲ್ಲಿ ಇಂದು ರಮಾಬಾಯಿ ಅಂಬೇಡ್ಕರ್ ನಗರ, ಯಶವಂತ್ ರಾವ್ ಅಂಬೇಡ್ಕರ್ ನಗರ, ಸವಿತಾ ಅಂಬೇಡ್ಕರ್ ನಗರ ಮತ್ತು ಲಕ್ಷ್ಮೀಕಾಂತ ನಗರ ಎಂಬ ನಾಲ್ಕು ಬಡಾವಣೆಗಳಿವೆ. ಈ ನಾಲ್ಕು ಬಡಾವಣೆಗಳ ನಿರ್ಮಾತೃ ಮಂಟೇಲಿಂಗಯ್ಯ. ಹಾಗಂತ ಮಂಟೇಲಿಂಗಯ್ಯ ರಿಯಲ್ ಎಸ್ಟೇಟ್ ಉದ್ಯಮಿಯಲ್ಲ! ಕಾನೂನು ಮತ್ತು ಹೋರಾಟದ ಮೂಲಕ ಸ್ಲಂಗಳಲ್ಲಿ ವಾಸಿಸುತ್ತಿದ್ದ ಬಡ ಜನರ ಗುಡಿಸಲು ಒಡೆದು ಹಾಕಿಸಿ, ಆ ಜಾಗಗಳನ್ನು ಆ ಬಡವರಿಗೆ ನೀಡಿ, ಅಲ್ಲಿ ಸರ್ಕಾರದಿಂದ ಮನೆಗಳನ್ನು ಕಟ್ಟಿಸಿ ಮಂಟೇಲಿಂಗಯ್ಯನವರು ಬಡವರಿಗೆ ನೀಡುತ್ತಾರೆ. ಒಂದೆರಡು ಸಂದರ್ಭಗಳಲ್ಲಿ ಸರ್ಕಾರ ವಿವಿಧ ಯೋಜನೆಗಳಲ್ಲಿ ನಿರ್ಮಿಸಿದ್ದ ಫಲಾನುಭವಿಗಳಿಗೆ ವಿತರಿಸದೆ ವರ್ಷಾನುಗಟ್ಟಲೆ ಖಾಲಿ ಬಿದ್ದಿದ್ದ ಮನೆಗಳನ್ನು ಬೀಗ ಒಡೆಸಿ ಮಂಟೇಲಿಂಗಯ್ಯ ಬಡವರು ವಾಸಿಸಲು ಅನುವು ಮಾಡಿಕೊಟ್ಟದ್ದು ಉಂಟು!
ಈ ನಿಟ್ಟಿನಲ್ಲಿ ಈ ರೀತಿ ಇವರಿಂದ ಫಲಾನುಭವ ಪಡೆದ ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಮೈಸೂರು ನಗರವೊಂದರಲ್ಲೇ ಸಿಗುತ್ತಾರೆಂದರೆ ಬಡವರ ಪರ ಮಂಟೇಲಿಂಗಯ್ಯ ನವರ ಹೋರಾಟದ ಮಾದರಿ ಎಂತಹದ್ದು ಎಂದು ಯಾರಾದರೂ ಊಹಿಸಬಹುದು. ಆ ಸಂದರ್ಭದಲ್ಲಿ ಒಮ್ಮೆ ಮುಖ್ಯಮಂತ್ರಿ ಧರ್ಮಸಿಂಗ್ ಸ್ವತಃ ಮಂಟೇಲಿಂಗಯ್ಯನವರ ಮನೆಗೆ ಭೇಟಿ ನೀಡಿದ್ದರು ಮತ್ತು ಅದು ಆ ಕಾಲದಲ್ಲಿ ದೊಡ್ಡ ಸುದ್ದಿಯಾಗಿತ್ತು ಕೂಡ.
ಈ ನಡುವೆ ಸೈದ್ಧಾಂತಿಕ ಕಾರಣ ದಸಂಸ ಬಿಡುವ ಅಥವಾ ಗುರುತಿಸಿಕೊಳ್ಳಲು ಇಷ್ಟಪಡದ ಮಂಟೇಲಿಂಗಯ್ಯನವರು ತಮ್ಮದೆ ಸ್ವಂತ ಡಾ.ಅಂಬೇಡ್ಕರ್ ಜನಜಾಗೃತಿ ಮಹಾಸಮಿತಿ ಎಂಬ ಸಂಘಟನೆ ಕಟ್ಟಿದರು. ಎಜೆಎಂಎಸ್ ಎಂದೇ ಖ್ಯಾತಿ ಪಡೆದ ಆ ಸಂಘಟನೆ ದಕ್ಷಿಣ ಕರ್ನಾಟಕದಲ್ಲಿ ಬಹಳಷ್ಟು ಸುದ್ದಿ ಮಾಡಿತು. ಒಂದರ್ಥದ ನೈಜ ಅಂಬೇಡ್ಕರ್ ವಾದಿ ಚಳುವಳಿಗೆ ಅಕ್ಷರಶಃ ನಾಂದಿ ಹಾಡಿತು. ಈ ನಿಟ್ಟಿನಲ್ಲಿ ತಮ್ಮ ಈ ಸಂಘಟನೆಯ ಅಡಿಯಲ್ಲಿ 1988 ರಲ್ಲಿ ಮೈಸೂರಿನಲ್ಲಿ ಲಕ್ಷ ಬಡಜನರ ಮೆರವಣಿಗೆ ಎಂಬ ಭವ್ಯ ಕಾರ್ಯಕ್ರಮ ಏರ್ಪಡಿಸಿದ್ದ ಮಂಟೇಲಿಂಗಯ್ಯನವರು ಆ ಕಾರ್ಯಕ್ರಮಕ್ಕೆ ಪ್ರಪ್ರಥಮವಾಗಿ ಅಂಬೇಡ್ಕರ್ ರವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ರವರನ್ನು ಅತಿಥಿಯಾಗಿ ಆಹ್ವಾನಿಸಿದ್ದರು. ಇದರ ನಡುವೆ ರಾಜಕೀಯವಾಗಿ ಬಹುಜನ ಸಮಾಜ ಪಕ್ಷದತ್ತ ಒಲವು ತೋರಿದ ಮಂಟೇಲಿಂಗಯ್ಯ ನವರು ಪ್ರೊ.ಬಿ.ಕೃಷ್ಣಪ್ಪನವರ ನಂತರ ಅದರ ರಾಜ್ಯ ಅಧ್ಯಕ್ಷರಾದರು. ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಮೈಸೂರಿನ ಟೌನ್ ಹಾಲ್ ಗೆ ಬಿಎಸ್ಸಿ ಸಂಸ್ಥಾಪಕ ಕಾನ್ಷೀರಾಮ್ ರವರನ್ನು ಕರೆಸಿದ್ದ ಮಂಟೇಲಿಂಗಯ್ಯ ಬಹುಜನ ಸಮಾಜ ಪಕ್ಷದ ಬೆಳವಣಿಗೆಗೆ ರಾಜ್ಯದಲ್ಲಿ ಭದ್ರ ಬುನಾದಿ ಹಾಕಿದ್ದರು. ಈ ನಡುವೆ ಕಾರಣಾಂತರಗಳಿಂದ ಬಿಎಸ್ಸಿಯಿಂದಲೂ ದೂರವಾದ ಮಂಟೇಲಿಂಗಯ್ಯನವರು ಬಾಬಾಸಾಹೇಬ್ ಅಂಬೇಡ್ಕರ್ ರವರು ಸ್ಥಾಪಿಸಿಸಿದ್ದ ಪ್ರಕಾಶ್ ಅಂಬೇಡ್ಕರ್ ರವರ ನೇತೃತ್ವದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್ ಪಿ ಐ) ನ ರಾಜ್ಯ ಅಧ್ಯಕ್ಷರಾದರು. ರಾಜ್ಯವ್ಯಾಪಿ ಆರ್ ಪಿ ಐ ಸಂಘಟನೆಯಲ್ಲಿ ಮಂಟೇಲಿಂಗಯ್ಯ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.
ಫೈರ್ ಬ್ರಾಂಡ್ ಭಾಷಣಕಾರ
ಮಂಟೇಲಿಂಗಯ್ಯ ನವರ ಒಂದು ಅವಿಚ್ಛಿನ್ನ ಗುಣ ಅದ್ವಿತೀಯ ಭಾಷಣ ಶೈಲಿ ಹಾಗೂ ಯಾವುದೇ ಹೋರಾಟವಾದರೂ ಯಾರಿಗು ಹೆದರದೆ ಮುನ್ನುಗ್ಗುವುದು. ಯಾವ ರೀತಿ ಎಂದರೆ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಯೊಬ್ಬರಿಗೆ ಮೋಸ ಮಾಡುತ್ತಿದ್ದಾರೆ ಎಂಬ ದೂರು ಅವರಿಗೆ ಬಂದಿತ್ತು. ಆಗ ಅವರು ಆ ಪೊಲೀಸ್ ಅಧಿಕಾರಿಗೆ ಠಾಣೆಯಲ್ಲೇ ಕಪಾಳ ಮೋಕ್ಷ ಮಾಡಿದ್ದರು. ಒಂದರ್ಥದಲ್ಲಿ ಇದು ಅವರಿಗೆ ಹೊರೆಯಾಯಿತು ಕೂಡ. ಹಾಗೆಯೇ ಡಾ.ಅಂಬೇಡ್ಕರ್ ಚಾರಿಟೇಬಲ್ ಟ್ರಸ್ಟ್ ರಚಿಸಿದ್ದ ಮಂಟೇಲಿಂಗಯ್ಯನವರು ಅದರ ಅಡಿಯಲ್ಲಿ “ಎಸ್ಸಿ/ ಎಸ್ಟಿ, ಐಎಎಸ್ , ಐಪಿಎಸ್ ಅಧಿಕಾರಿಗಳ ಸಂಘ”ವನ್ನು ಕೂಡ ಸಂಘಟಿಸಿ ಅದರ ರಾಜ್ಯ ಅಧ್ಯಕ್ಷರು ಕೂಡ ಆಗಿದ್ದರು.
ಬ್ರಾಹ್ಮಣ್ಯದ ವಿರುದ್ಧ ಸಿಡಿಗುಂಡು
ಮಂಟೇಲಿಂಗಯ್ಯನವರ ಭಾಷಣದ ಒಂದು ಪ್ರಮುಖ ತಿರುಳು ದೇವರು ದಿಂಡಿರನ್ನು ಟೀಕಿಸುವುದಾಗಿತ್ತು, ಪುರೋಹಿತಶಾಹಿಯನ್ನು ಧಿಕ್ಕರಿಸುವುದಾಗಿತ್ತು. ಯಾವ ಪರಿ ಎಂದರೆ ಇವರ ಹೋರಾಟದ ಇಂತಹ ಉಚ್ಛ್ರಾಯ ಕಾಲದಲ್ಲಿ ವಿ.ಪಿ.ಬಳಿಗಾರ್ ರವರು ಮೈಸೂರು ಜಿಲ್ಲಾಧಿಕಾರಿ ಆಗಿದ್ದ ಸಂದರ್ಭದಲ್ಲಿ ಮಂಟೇಲಿಂಗಯ್ಯ ನವರ ಸಲಹೆ ಮೇರೆಗೆ ಬಳಿಗಾರ್ ರವರು ದಲಿತನೊಬ್ಬನನ್ನು ಮೈಸೂರಿನ ವಿಶ್ವವಿಖ್ಯಾತ ಚಾಮುಂಡಿ ಬೆಟ್ಟದ ಅರ್ಚಕನನ್ನಾಗಿ ನೇಮಿಸಿದ್ದರು! ಅಂದಹಾಗೆ ಇಂತಹ ಬೆಳವಣಿಗೆ ಪುರೋಹಿತಶಾಹಿಯನ್ನು ಕಂಗೆಡಿಸಿತ್ತು. ಹಾಗೆ ಅದು ಸಮಯಕ್ಕಾಗಿ ಕಾಯುತ್ತಿತ್ತು ಜೊತೆಗೆ ಪೊಲೀಸರು ಕೂಡ!
ಅಂತಹ ಸಂದರ್ಭವು ಬಂತು! ಅದು 2004. ಗಂಗಮ್ಮ ಎಂಬ 74 ವರ್ಷ ವಯಸ್ಸಿನ ಮಹಿಳೆಯ ಹತ್ಯೆಯ ಆರೋಪ ಮಂಟೇಲಿಂಗಯ್ಯನವರ ಮೇಲೆ ಕೇಳಿ ಬಂದಿತ್ತು, 250 ಜನರು ಸೇರಿ ಮಾಡಿದ ಹತ್ಯೆ ಅದು ಎಂದು! ಇದೇ ಸಮಯ ಎಲ್ಲರೂ ಮಂಟೇಲಿಂಗಯ್ಯನವರ ಮೇಲೆ ಮುಗಿಬಿದ್ದರು. ಪೊಲೀಸರು, ಪುರೋಹಿತಶಾಹಿಗಳು, ಕೆಲವು ಪ್ರಮುಖ ದಲಿತ ರಾಜಕಾರಣಿಗಳು! ಹೇಗೆಂದರೆ ಮಂಟೇಲಿಂಗಯ್ಯನವರಿಗೆ ಜಾಮೀನು ಸಿಗುತ್ತದೆ ಎನ್ನುತ್ತಿದ್ದಂತೆ ನ್ಯಾಯಾಲಯಕ್ಕೆ ಮಂಟೇಲಿಂಗಯ್ಯನವರು ಹೊರಡಿಸಿದ್ದ ಕೆಲವು ಹಳೆಯ ಬ್ರಾಹ್ಮಣ್ಯ ವಿರೋಧಿ ಕರಪತ್ರಗಳನ್ನು ದೂರುದಾರರು ಹಾಜರುಪಡಿಸಿ, ಇವರನ್ನು ಹೊರಬಿಟ್ಟರೆ ಸಮಾಜದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುತ್ತದೆ ಎಂದು ವಾದಿಸಿದ್ದರು. ಪೂರಕವಾಗಿ ಮಂಟೇಲಿಂಗಯ್ಯನವರ ಜೊತೆ ಒಂದು ಗ್ಯಾಂಗ್ ಎಂದು ಬಿಂಬಿಸಲು ಅವರ ಬಂಧನ ದಿನ ಮೈಸೂರು ನಗರದಲ್ಲಿ ಬೀದಿ ಬೀದಿಯಲ್ಲಿ ನಿಂತಿದ್ದ ಲೈಂಗಿಕ ಕಾರ್ಯಕರ್ತರು ಮತ್ತು ಅವರ ಸಂಗಡಿಗರನ್ನು ಬಂಧಿಸಿ ರಾತ್ರೋರಾತ್ರಿ ಮಂಟೇಲಿಂಗಯ್ಯ ನವರ “ತಂಡವನ್ನು” ಕಟ್ಟಲಾಗಿತ್ತು ಮತ್ತು ಆ ತಂಡಕ್ಕೆ ಒಂದಿಬ್ಬರು ನಕ್ಸಲೀಯರು ಮತ್ತು ಎಲ್ ಟಿ ಟಿ ಇ ಭಯೋತ್ಪಾದಕರನ್ನು ಸೇರಿಸಿ ಅದೊಂದು ದೊಡ್ಡ ಗ್ಯಾಂಗ್ ಎಂದು ಬಿಂಬಿಸಿ ಮಂಟೇಲಿಂಗಯ್ಯನವರಿಗೆ ಶಿಕ್ಷೆ ಆಗಲೇಬೇಕು ಎಂದು ಹಟಕ್ಕೆ ಬಿದ್ದು ಷಡ್ಯಂತ್ರ ರೂಪಿಸಲಾಗಿತ್ತು. ಈ ಮಧ್ಯೆ ಮಾಧ್ಯಮದಲ್ಲಿ ರವಿ ಬೆಳಗೆರೆ ತನ್ನ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಮಂಟೇಲಿಂಗಯ್ಯನವರ ವಿರುದ್ಧ ಪುಂಖಾನುಪುಂಖ ಕತೆ ಕಟ್ಟಿದ್ದ. ಒಟ್ಟಾರೆ ಒಬ್ಬ ಅಂಬೇಡ್ಕರ್ ವಾದಿ ಧೀಮಂತ ನಾಯಕ , ಹೋರಾಟಗಾರನ ವಿರುದ್ಧ ದೌರ್ಜನ್ಯಕೋರ ಎಲ್ಲಾ ಮನಸ್ಥಿತಿಗಳು ರಣಹದ್ದಿನಂತೆ ಎರಗಿದ್ದವು. ಪರಿಣಾಮ ಮಂಟೇಲಿಂಗಯ್ಯ ಮತ್ತು ಅವರ ಜೊತೆ 22 ಜನರಿಗೆ ಜೀವಾವಧಿ ಶಿಕ್ಷೆಯಾಯಿತು.(2005)
ಈ ನಡುವೆ ಜೈಲನ್ನೂ ಬಿಡದ ರಣಹದ್ದುಗಳು ಜೈಲಿನಲ್ಲಿದ್ದಾಗಲೇ ಮಂಟೇಲಿಂಗಯ್ಯ ನವರನ್ನು ಹತ್ಯೆಗೈಯುವ ಸಂಚು ರೂಪಿಸಿದ್ದರು. ಹಿಂದೆ ಅವರಿಂದ ಅಪಮಾನಿತನಾಗಿದ್ದ ಪೊಲೀಸ್ ಅಧಿಕಾರಿಯೊಬ್ಬ ಆ ಸಂಚಿನ ಪ್ರಮುಖ ರೂವಾರಿಯಾಗಿದ್ದ. ಆದರೆ ಕೂದಲೆಳೆಯ ಅಂತರದಲ್ಲಿ ಮಂಟೇಲಿಂಗಯ್ಯನವರ ಎಜೆಎಂಎಸ್ ಸಂಘಟನೆಯ ಸದಸ್ಯರು ಅಂತಹ ಪ್ರಯತ್ನವನ್ನು ತಡೆದಿದ್ದರು ಮಂಟೇಲಿಂಗಯ್ಯನವರನ್ನು ರಕ್ಷಿಸಿದ್ದರು. ಈ ನಡುವೆ ಜೈಲಿನಲ್ಲಿ ಮಂಟೇಲಿಂಗಯ್ಯನವರ ಆರೋಗ್ಯ ಆಗಾಗ ಹದಗೆಡುತ್ತಿತ್ತು. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿದ್ದ ಅವರ ಅಭಿಮಾನಿ ಅನುಯಾಯಿ ಕೆಲ ವೈದ್ಯರು ಮಂಟೇಲಿಂಗಯ್ಯನವರನ್ನು ಅಕ್ಷರಶಃ ಅಭಿಮಾನಪೂರ್ವಕವಾಗಿ ಉಳಿಸಿಕೊಂಡರು.
ಹಾಗಿದ್ದರೆ ಯಾಕೀ ಈ ಪರಿ ಅಭಿಮಾನ? ಕಾರಣ, ಮಂಟೇಲಿಂಗಯ್ಯ ಬರೀ ಮಂಟೇಲಿಂಗಯ್ಯ ಅಲ್ಲ! ಅವರು ವಿಚಾರವಾದಿ ಮಂಟೇಲಿಂಗಯ್ಯ. ತಮ್ಮ ಹೋರಾಟದುದ್ದಕ್ಕೂ ಅವರು ಅಂಬೇಡ್ಕರ್ ಜಯಂತಿಗಳ ಖಾಯಂ ಭಾಷಣಕಾರರು. ಸೋಷಿಯಲ್ ಮೀಡಿಯಾ ಇಲ್ಲದ 1980, 1990 ರ ಆ ದಶಕದಲ್ಲಿ ಮಂಟೇಲಿಂಗಯ್ಯನವರ ಭಾಷಣಕ್ಕೆ ಜನ ಎದ್ದೆನೋ ಬಿದ್ದೆನೋ ಎಂದು ಸೇರುತ್ತಿದ್ದರು. ದೌರ್ಜನ್ಯದ ವಿರುದ್ಧ, ಪುರೋಹಿತಶಾಹಿ ವಿರುದ್ಧ ಅವರ ಸಿಡಿಗುಂಡು ಮಾತುಗಳು ಕೇಳುಗರ ಹುಚ್ಚೆಬ್ಬಿಸುತ್ತಿತ್ತು. ಹಾಗೆಯೇ ಅಂತಹ ಭಾಷಣ ಅಂತಹದೇ ಮಾದರಿಯ ಸಾಕಷ್ಟು ಭಾಷಣಕಾರರ ಉದಯಕ್ಕೆ ಕಾರಣವಾಯಿತು ಎಂದರೆ ಮಂಟೇಲಿಂಗಯ್ಯ ನವರ ಪ್ರಭಾವವನ್ನು ಯಾರಾದರೂ ಅರಿಯಬಹುದು. ಒಟ್ಟಾರೆ ಮಂಟೇಲಿಂಗಯ್ಯನವರು ಅವರ ಬಂಧನದವರೆಗೆ (2005) ರಾಜ್ಯದ ಅಂಬೇಡ್ಕರ್ ವಾದಿ ಚಳುವಳಿಯ ಒಂದು ಅಭೂತಪೂರ್ವ ದನಿಯಾಗಿದ್ದರು. ದಸಂಸ ಸೌಮ್ಯವಾಗಿ ಚಳುವಳಿ ಕಟ್ಟುತ್ತಿದ್ದರೆ ಮಂಟೇಲಿಂಗಯ್ಯ ಅದಕ್ಕೊಂದು ತೀಕ್ಷ್ಣರೂಪ ಕೊಡುವಲ್ಲಿ ಯಶಸ್ವಿಯಾಗಿದ್ದರು. ತದನಂತರ ಬಹುಜನ ಚಳವಳಿಗು ಮಂಟೇಲಿಂಗಯ್ಯ ನವರ ಆ ಚಳವಳಿ ದೊಡ್ಡ ಪ್ರೇರಣೆಯಾಯಿತು. ಈ ನಿಟ್ಟಿನಲ್ಲಿ ಹೋರಾಟ, ಭಾಷಣ ಹೇಗಿರಬೇಕು… ಮಂಟೇಲಿಂಗಯ್ಯ ಅಕ್ಷರಶಃ ಮಾದರಿಯಾಗಿದ್ದರು, ಮಾದರಿ ತೋರಿಸಿ ಹೋಗಿದ್ದರು.
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಮಂಟೇಲಿಂಗಯ್ಯ ನವರ ಬಿಡುಗಡೆಗೊಂಡಿದ್ದರು ಮತ್ತು ಅವರ ಬಿಡುಗಡೆ ಅಕ್ಷರಶಃ ಅವರ ಅಭಿಮಾನಿಗಳಿಗೆ ಅತೀವ ಸಂತಸ ತಂದಿತ್ತು. ಮತ್ತೆ ಅಂತಹ ಚಳುವಳಿಯ ಮಿಂಚಿನ ಭಾಷಣ ಮರುಕಳಿಸಬಹುದಾ ಎಂಬ ಆಶಾ ಭಾವ ಗರಿಗೆದರಿತ್ತು. ಆದರೆ ಕಾಲದ ಅವಧಿ ಮುಗಿದಿತ್ತು. 73 ರ ಹರಯದ ಮಂಟೇಲಿಂಗಯ್ಯ ಇಂದು ನಮ್ಮೊಡನಿಲ್ಲ. ಹೃದಯ ಸ್ಥಗಿತಗೊಂಡು ನಮ್ಮನ್ನು ಅಗಲಿದ್ದಾರೆ. ಅದರೆ ಅವರ ಹೋರಾಟದ ಶೈಲಿ, ಸಿಡಿಲಿನ ಭಾಷಣ ಎಂದೆಂದೂ ಗುನುಗಲ್ಪಡುತ್ತಿರುತ್ತದೆ. ಹೋರಾಟದ ಹಣತೆಗೆ ನಿತ್ಯ ಎಣ್ಣೆ ಎರೆಯುತ್ತಿರುತ್ತದೆ.
ರಘೋತ್ತಮ ಹೊ ಬ
ಚಿಂತಕರು
ಇದನ್ನೂ ಓದಿ-ಅಂಬೇಡ್ಕರ್ ವಾದಿ, ಜನಪರ ಹೋರಾಟಗಾರ, ಕ್ರಾಂತಿಕಾರಿ ಮೈಸೂರು ಮಂಟೆ ಲಿಂಗಯ್ಯ ನಿಧನ