Home ಅಪರಾಧ ನಾಸಿಕ್ ಟಿ.ಸಿ.ಎಸ್ ಪ್ರಕರಣ: ನಿದಾ ಖಾನ್ ಬಂಧನ, ಮೇ 11ರ ತನಕ ಪೊಲೀಸ್ ಕಸ್ಟಡಿಗೆ

ನಾಸಿಕ್ ಟಿ.ಸಿ.ಎಸ್ ಪ್ರಕರಣ: ನಿದಾ ಖಾನ್ ಬಂಧನ, ಮೇ 11ರ ತನಕ ಪೊಲೀಸ್ ಕಸ್ಟಡಿಗೆ

0

ನಾಸಿಕ್: ನಾಸಿಕ್‌ನ ಟಿ.ಸಿ.ಎಸ್ (TCS) ಘಟಕದಲ್ಲಿ ಧರ್ಮ ಮತಾಂತರ ಮತ್ತು ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ತಲೆಮರೆಸಿಕೊಂಡಿದ್ದ ಉದ್ಯೋಗಿ ನಿದಾ ಖಾನ್ ಅವರನ್ನು ಮಧ್ಯ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಬಂಧಿಸಲಾಗಿದೆ. ಸ್ಥಳೀಯ ಎಐಎಂಐಎಂ (AIMIM) ಕಾರ್ಪೊರೇಟರ್ ಆಕೆಗೆ ಆಶ್ರಯ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಆಕೆಯನ್ನು ಬಂಧಿಸಿದ ನಂತರ, ಶುಕ್ರವಾರ ನಾಸಿಕ್ ರೋಡ್ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆಕೆಯನ್ನು ಮೇ 11 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ದೇವಲಾನಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ನಂತರ, 27 ವರ್ಷದ ಖಾನ್ ಕಳೆದ ತಿಂಗಳು ಸೆಷನ್ಸ್ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ತಾವು ನಿರಪರಾಧಿ ಎಂದು ವಾದಿಸಿದ್ದ ಅವರು, ತಮ್ಮ ಮೂರು ತಿಂಗಳ ಗರ್ಭಾವಸ್ಥೆಯನ್ನು ಉಲ್ಲೇಖಿಸಿ ಜಾಮೀನು ಕೋರಿದ್ದರು. ಆದರೆ, ಮೇ 2 ರಂದು ಅರ್ಜಿಯನ್ನು ತಿರಸ್ಕರಿಸಿದ್ದ ನ್ಯಾಯಾಲಯವು, ಸಂತ್ರಸ್ತೆಯ ಬ್ರೇನ್‌ ವಾಶ್‌ ಮಾಡುವ “ವ್ಯವಸ್ಥಿತ ಯೋಜನೆ” ಕಂಡುಬರುತ್ತಿದೆ ಎಂದು ಹೇಳಿತ್ತು.

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್, ನಿದಾ ಖಾನ್‌ಗೆ ಆಶ್ರಯ ನೀಡುವಲ್ಲಿ ಎಐಎಂಐಎಂ ಕಾರ್ಪೊರೇಟರ್ ಪಾತ್ರವಿರುವುದು ಸ್ಪಷ್ಟವಾಗಿದೆ ಎಂದು ಹೇಳಿದರು. “ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ನಾವು ಪತ್ತೆ ಹಚ್ಚುತ್ತೇವೆ. ಅವರು ಮತಾಂತರದ ಜಾಲದಲ್ಲಿ ಭಾಗಿಯಾಗಿದ್ದಾರೆಯೇ ಮತ್ತು ಅದನ್ನು ಪ್ರೋತ್ಸಾಹಿಸುತ್ತಿದ್ದಾರೆಯೇ ಎಂಬುದನ್ನು ನಾವು ಕಂಡುಕೊಳ್ಳುತ್ತೇವೆ” ಎಂದು ಫಡ್ನವಿಸ್ ಸುದ್ದಿಗಾರರಿಗೆ ತಿಳಿಸಿದರು.

ಶುಕ್ರವಾರ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಕೆ.ಜಿ. ಜೋಶಿ ಅವರ ಮುಂದೆ ಖಾನ್ ಅವರನ್ನು ಹಾಜರುಪಡಿಸಿದ ಪೊಲೀಸರು ಏಳು ದಿನಗಳ ಕಸ್ಟಡಿಗೆ ಕೋರಿದರು. ಜಿಲ್ಲಾ ಸರ್ಕಾರಿ ಅಭಿಯೋಜಕ ಎ.ಎಸ್. ಮಿಸರ್ ಮಾತನಾಡಿ, ಸಂತ್ರಸ್ತೆಯೊಬ್ಬರಿಗೆ ಬುರ್ಖಾ ನೀಡಿ, ನಮಾಜ್ ಮಾಡಲು ತರಬೇತಿ ನೀಡುವ ಮೂಲಕ ಮತಾಂತರಕ್ಕೆ ಪ್ರಯತ್ನಿಸಲಾಗಿತ್ತು ಎಂದು ತಿಳಿಸಿದರು. ಖಾನ್ ಸಂತ್ರಸ್ತೆಯ ಮನೆಗೆ ಭೇಟಿ ನೀಡಿ “ನಮಾಜ್ ಮತ್ತು ಬುರ್ಖಾ ಸಂಬಂಧಿತ ಚಟುವಟಿಕೆಗಳಲ್ಲಿ” ತೊಡಗಿದ್ದರು ಎಂದು ಪ್ರಾಸಿಕ್ಯೂಷನ್ ಪ್ರತಿಪಾದಿಸಿದೆ.

ಸಂತ್ರಸ್ತೆಗೆ ಪದೇ ಪದೇ ಕಳುಹಿಸಲಾದ ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಲಿಂಕ್‌ಗಳು ಮತ್ತು ರೀಲ್ಸ್‌ಗಳ ಬಗ್ಗೆ ವಿವರವಾದ ತನಿಖೆ ನಡೆಸಲಾಗುತ್ತಿದೆ ಎಂದು ಮಿಸರ್ ಹೇಳಿದರು. ತನಿಖೆಯ ಪ್ರಕಾರ, ಸಂತ್ರಸ್ತೆಯ ಹೆಸರನ್ನು ‘ಹನಿಯಾ’ ಎಂದು ಬದಲಾಯಿಸಿ ಮಲೇಷ್ಯಾಕ್ಕೆ ಕಳುಹಿಸುವ ಉದ್ದೇಶವಿತ್ತು. ನಾಸಿಕ್ ಜಿಲ್ಲೆಯ ಮಾಲೆಗಾಂವ್‌ನಲ್ಲಿ ನಡೆಯುತ್ತಿರುವ ಮತಾಂತರ ಜಾಲದ ಲಿಂಕ್‌ಗಳು ತನಿಖೆಯ ಸಮಯದಲ್ಲಿ ಹೊರಬಂದಿದ್ದು, ಇವೆಲ್ಲವನ್ನೂ ಕೂಲಂಕಷವಾಗಿ ತನಿಖೆ ಮಾಡಬೇಕಾಗಿದೆ ಎಂದು ಪ್ರಾಸಿಕ್ಯೂಷನ್ ತಿಳಿಸಿದೆ.

ಇದಕ್ಕೂ ಮೊದಲು ಖಾನ್ ಬಂಧನದ ಬಗ್ಗೆ ಮಾತನಾಡಿದ ನಾಸಿಕ್ ಪೊಲೀಸ್ ಕಮಿಷನರ್ ಸಂದೀಪ್ ಕಾರ್ಣಿಕ್, ಛತ್ರಪತಿ ಸಂಭಾಜಿನಗರದ ಕ್ರೈಮ್ ಬ್ರಾಂಚ್ ತಂಡವು ಕಳೆದ ಕೆಲವು ದಿನಗಳಿಂದ ಆಕೆಯ ಚಲನವಲನಗಳನ್ನು ಪತ್ತೆಹಚ್ಚುತ್ತಿತ್ತು ಎಂದು ಹೇಳಿದರು. ನಾಸಿಕ್ ಪೊಲೀಸರ ವಿಶೇಷ ತನಿಖಾ ತಂಡವು (SIT) ಟಿ.ಸಿ.ಎಸ್ ಘಟಕದಲ್ಲಿ ನಡೆದಿದೆಯೆನ್ನಲಾದ ಕಿರುಕುಳದ ಒಂಬತ್ತು ಪ್ರಕರಣಗಳನ್ನು ತನಿಖೆ ಮಾಡುತ್ತಿದೆ. ಈ ಹಿಂದೆ ಇದು ಮಹಿಳಾ ಆಪರೇಷನ್ಸ್ ಮ್ಯಾನೇಜರ್ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿತ್ತು.

ನಿದಾ ಖಾನ್ ವಾಟ್ಸಾಪ್ ಗ್ರೂಪ್‌ನಲ್ಲಿ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು, ನಮಾಜ್ ಮಾಡಲು ಮತ್ತು ಮಾಂಸಾಹಾರ ಸೇವಿಸಲು ಒತ್ತಡ ಹೇರುತ್ತಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೆ ಮಹಿಳಾ ಉದ್ಯೋಗಿಗಳಿಗೆ ಇಸ್ಲಾಮಿಕ್ ಸಂಪ್ರದಾಯದಂತೆ ನಡೆದುಕೊಳ್ಳಲು ಸಲಹೆ ನೀಡುತ್ತಿದ್ದರು ಎನ್ನಲಾಗಿದೆ. ಸಂತ್ರಸ್ತೆ ಪರಿಶಿಷ್ಟ ಜಾತಿಗೆ ಸೇರಿರುವುದರಿಂದ ಖಾನ್ ವಿರುದ್ಧ ಅಟ್ರಾಸಿಟಿ ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರ ಪ್ರಕಾರ, ಎಐಎಂಐಎಂ ಕಾರ್ಪೊರೇಟರ್ ಮತಿನ್ ಪಟೇಲ್ ಕಳೆದ ಕೆಲವು ದಿನಗಳಿಂದ ಖಾನ್ ಮತ್ತು ಆಕೆಯ ಕುಟುಂಬಕ್ಕೆ ಆಶ್ರಯ ನೀಡಿದ್ದರು. ಪಟೇಲ್ ಅವರನ್ನು ವಿಚಾರಣೆಗೊಳಪಡಿಸಿದ ನಂತರ ಖಾನ್ ಬಂಧನ ಸಾಧ್ಯವಾಯಿತು. ಈಕೆ ಅಡಗಿದ್ದ ನರೇಗಾಂವ್ ಪ್ರದೇಶದಿಂದ ಆಕೆಯನ್ನು ಬಂಧಿಸಲಾಗಿದ್ದು, ಪಟೇಲ್ ಅವರನ್ನೂ ಈ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗಿದೆ. ನಿದಾ ಅವರೊಂದಿಗೆ ಆಕೆಯ ತಂದೆ ಏಜಾಜ್ ಬಶೀರ್, ತಾಯಿ ನೀಲೋಫರ್, ಸಹೋದರ ಮೊಹಮ್ಮದ್ ಮತ್ತು ಚಿಕ್ಕಮ್ಮ ನೂರ್ಜೆಹಾನ್ ಕೂಡ ಇದ್ದರು.

ಪ್ರಕರಣ ಬೆಳಕಿಗೆ ಬಂದ ನಂತರ ಟಿ.ಸಿ.ಎಸ್ ಪ್ರತಿಕ್ರಿಯಿಸಿದ್ದು, ಕಿರುಕುಳದ ಬಗ್ಗೆ ಶೂನ್ಯ ಸಹನೆ ನೀತಿ ಹೊಂದಿರುವುದಾಗಿ ಮತ್ತು ಕಿರುಕುಳದಲ್ಲಿ ಭಾಗಿಯಾದ ಉದ್ಯೋಗಿಗಳನ್ನು ಅಮಾನತುಗೊಳಿಸಿರುವುದಾಗಿ ತಿಳಿಸಿದೆ. ಮತ್ತೊಂದೆಡೆ, ನಿದಾ ಖಾನ್ ಬಂಧನವು ಮಹಾರಾಷ್ಟ್ರ ಸಚಿವ ಸಂಜಯ್ ಶಿರಸಾತ್ ಮತ್ತು ಎಐಎಂಐಎಂ ನಾಯಕ ಇಮ್ತಿಯಾಜ್ ಜಲೀಲ್ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಶಿರಸಾತ್ ಅವರು ಮತಾಂತರದ ಜಾಲದಲ್ಲಿ ಜಲೀಲ್ ಪಾತ್ರದ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದರೆ, ಜಲೀಲ್ ಅವರು ನಿದಾ ಖಾನ್ ಅವರನ್ನು ಮಾಧ್ಯಮಗಳ ವಿಚಾರಣೆಗೆ ಬಲಿಯಾದವರು ಎಂದು ಕರೆದಿದ್ದಾರೆ.

ಈ ಘಟನೆಯ ಹಿನ್ನೆಲೆಯಲ್ಲಿ, ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ‘ಪೋಶ್’ (POSH) ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಮಹಾರಾಷ್ಟ್ರ ಸರ್ಕಾರ ಶುಕ್ರವಾರ ಆದೇಶಿಸಿದೆ. 10 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಎಲ್ಲಾ ಸಂಸ್ಥೆಗಳು ಕಡ್ಡಾಯವಾಗಿ ಆಂತರಿಕ ದೂರು ಸಮಿತಿಗಳನ್ನು ರಚಿಸಿ ‘ಶೀ-ಬಾಕ್ಸ್’ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

You cannot copy content of this page

Exit mobile version