ಖಲಿಸ್ತಾನ ಹೋರಾಟಗಾರ ಹರದೀಪ್ ಸಿಂಗ್ ನಿಜ್ಜರ್ ಭಯೋತ್ಪಾದಕನಾದರೆ, ಗೋರಕ್ಷಣೆಯ ಹೆಸರಿನಲ್ಲಿ ಮನುಷ್ಯರನ್ನು ಬೇಟೆಯಾಡುವ ಮೋಂಟು ಮನೇಸರ್ ಏನು? ಇಬ್ಬರನ್ನೂ ಸಮಾನವಾಗಿ ಪರಿಗಣಿಸಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾದ ಬಿಜೆಪಿ ಸರಕಾರ ತಮ್ಮವರು ಎಂಬ ಕಾರಣಕ್ಕೆ ಕ್ರಿಮಿನಲ್ ಗಳಿಗೆ ರಕ್ಷಣೆ ನೀಡುವುದು ಎಷ್ಟು ಸರಿ? ದ್ವೇಷ ರಾಜಕಾರಣಕ್ಕೆ ಪ್ರೋತ್ಸಾಹ, ಆಶೀರ್ವಾದ ನೀಡಿದ ಪರಿಣಾಮವಾಗಿಯೇ ಅಲ್ಲವೇ ಭಾರತದ ಹೊಸ ಪಾರ್ಲಿಮೆಂಟ್ ನಲ್ಲಿ ಬಿಜೆಪಿ ಸಂಸದ ರಮೇಶ್ ಬಿಧೂರಿ ಅತ್ಯಂತ ಆಕ್ಷೇಪಾರ್ಹ ಮಾತುಗಳನ್ನು ಆಡುವುದು ಸಾಧ್ಯವಾದುದು? ಈ ಬಗೆಗಿನ ಚರ್ಚೆ ಇಂದಿನ ಶ್ರೀನಿ ಕಾಲಂ ನಲ್ಲಿದೆ.
ಸಾವಿರ ಕೋಟಿ ರುಪಾಯಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಿದ, ಅತ್ಯಾಧುನಿಕವೂ ಭವ್ಯವೂ ಆದ ಹೊಸ ಪಾರ್ಲಿಮೆಂಟ್ ಕಟ್ಟಡದ ಹತ್ತಾರು ಸಮಸ್ಯೆಗಳನ್ನು ಪಟ್ಟಿಮಾಡುತ್ತಾ, ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು, ‘ಈ ಹೊಸ ಪಾರ್ಲಿಮೆಂಟ್ ಗೆ ಒಂದು ಇತಿಹಾಸವೇ ಇಲ್ಲ’ ಎನ್ನುತ್ತಾರೆ.
ಇದು ಒಪ್ಪತಕ್ಕ ಮಾತಲ್ಲ. ಇತಿಹಾಸವೇನೋ ಇಲ್ಲದಿರಬಹುದು, ಆದರೆ ಹೊಸ ಪಾರ್ಲಿಮೆಂಟ್ ಕಟ್ಟಡದಲ್ಲಿಯೇ ಬಿಜೆಪಿ ಸಂಸದ ರಮೇಶ್ ಬಿಧೂರಿಯವರು ಬಿ ಎಸ್ ಪಿ ಸಂಸದ ಡ್ಯಾನಿಶ್ ಅಲಿಗೆ ‘ಭಡವಾ, ಮುಲ್ಲಾ, ಕಟುವಾ, ಆತಂಕವಾದಿ, ಉಗ್ರವಾದಿ’ ಎಂದು ಯಾವ ಭಯವೂ ಇಲ್ಲದೆ ನಿಂದನೆ ಮಾಡಿ, ಹೊಸ ‘ಇತಿಹಾಸ’ ಸೃಷ್ಟಿಸಿದ್ದನ್ನು ನಿರಾಕರಿಸುವುದು ಸಾಧ್ಯವೇ?
ಬಿಜೆಪಿ ಸಂಸದನೊಬ್ಬ ಭಾರತದ ಪಾರ್ಲಿಮೆಂಟ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಹೀಗೆ ಇನ್ನೊಬ್ಬ ಸಂಸದನನ್ನು ಮತೀಯ ನೆಲೆಯಲ್ಲಿ ತುಚ್ಛವಾಗಿ ನಿಂದಿಸಿದ ಬಳಿಕವೂ ಲೋಕಸಭಾ ಸ್ಪೀಕರ್ ಆಗಲೀ, ಬಿಜೆಪಿ ಪಕ್ಷವಾಗಲೀ ಆತನ ಮೇಲೆ ಯಾವ ಕ್ರಮವನ್ನೂ ಜರುಗಿಸದಿದ್ದುದು ಇನ್ನೊಂದು ಇತಿಹಾಸವೇ ಅಲ್ಲವೇ?! ಹೀಗೆ ಅನೇಕ ಹೊಸ ಇತಿಹಾಸಗಳಿಗೆ ಹೊಸ ಪಾರ್ಲಿಮೆಂಟ್ ಕಟ್ಟಡ ಸಾಕ್ಷಿಯಾದುದು ನಮ್ಮ ದುರ್ದೈವ!
ಅಚ್ಚರಿ ಯಾಕೆ?!

ಬಿಧೂರಿ ಘಟನೆಯ ಬಗ್ಗೆ ಅನೇಕರು ಅಚ್ಚರಿಗೊಂಡಿದ್ದು ಇನ್ನೂ ಅಚ್ಚರಿಯ ವಿಷಯ. ಕಳೆದ ಸುಮಾರು ಒಂದು ದಶಕದಿಂದ ದೇಶದಲ್ಲಿ ಕಾನೂನಿನ ಯಾವ ಭಯವೂ ಇಲ್ಲದೆ, ಮತೀಯ ನೆಲೆಯಲ್ಲಿ ಒಂದು ಸಮುದಾಯವನ್ನು ಕಂಡು ಕೇಳರಿಯದ ರೀತಿಯಲ್ಲಿ ನಿಂದನೆಗೆ ಈಡು ಮಾಡುತ್ತಿರುವುದು ಹೊಸ ವಿಷಯವೇ?
‘ಮುಸ್ಲಿಮರೊಡನೆ ವ್ಯಾಪಾರ ಮಾಡ ಬೇಡಿ’ ಎಂದು ಕರೆ ನೀಡಿದ ದೆಹಲಿ ಸಂಸದ ಪರ್ವೇಶ್ ವರ್ಮಾ, ‘ವಿರೋಧಿಗಳಿಗೆ ಗೋಲಿ ಮಾರೋ’ ಎಂದು ಕರೆ ನೀಡಿದ ಕೇಂದ್ರ ಮಂತ್ರಿ ಅನುರಾಗ ಠಾಕೂರ್, ‘ಗೋಡ್ಸೆಯು ದೇಶಪ್ರೇಮಿ’ ಎಂದು ಈಗಲೂ ಪ್ರತಿಪಾದಿಸುತ್ತಿರುವ ಮತ್ತು ಅವಕಾಶ ಸಿಕ್ಕಾಗಲೆಲ್ಲ ಮುಸ್ಲಿಮರನ್ನು ನಿಂದಿಸುವ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ‘ಹರಾಮ್ ಜಾದೇ’ ಎನ್ನುವ ಕೇಂದ್ರ ಮಂತ್ರಿ ಸಾಧ್ವಿ ನಿರಂಜನ ಜ್ಯೋತಿ, ದ್ವೇಷ ಭಾಷಣಕ್ಕೆ ಹೆಸರಾದ ಮತ್ತು ಆಗಾಗ ವಿರೋಧಿಗಳನ್ನು ‘ಪಾಕಿಸ್ತಾನಕ್ಕೆ ಹೋಗಿ’ ಎನ್ನುವ ಸಂಸದ ಗಿರಿರಾಜ ಸಿಂಗ್ ಇವರೆಲ್ಲರೂ ಬಿಜೆಪಿ ಪಕ್ಷದವರೇ ಅಲ್ಲವೇ?
ಬಿಜೆಪಿ/ ಆರ್ ಎಸ್ ಎಸ್ ಇಂತಹ ಒಂದು ಜನಾಂಗ ದ್ವೇಷಿ ವಾತಾವರಣ ನಿರ್ಮಿಸಿದ ಕಾರಣವಾಗಿಯೇ ಅಲ್ಲವೇ, ಗೋರಕ್ಷಣೆಯ ಹೆಸರಿನಲ್ಲಿ ದೇಶದಲ್ಲಿ ಮುಸ್ಲಿಮರ ಲಿಂಚಿಂಗ್ ನಡೆಯುತ್ತಿರುವುದು? ಸಣ್ಣ ಸಣ್ಣ ಅಪರಾಧಗಳಿಗೂ ಆರೋಪಿ ಮುಸ್ಲಿಮರ ಮನೆಗಳ ಮೇಲೆ ಬುಲ್ ಡೋಜರ್ ಓಡಿಸುತ್ತಿರುವುದು? ಚೇತನ್ ಸಿಂಗ್ ಎಂಬ ರೈಲ್ವೇ ಪೊಲೀಸ್ ಫೋರ್ಸ್ ನ ಕಾನ್ಸ್ಟೇಬಲ್ ಹುಡುಕಿ ಹುಡುಕಿ ರೈಲಿನಲ್ಲಿ ಮೂವರು ಮುಸ್ಲಿಮರನ್ನು ಗುಂಡು ಹಾರಿಸಿ ಕೊಂದಿರುವುದು? ಮುಝಫರ್ ನಗರದ ಶಾಲೆಯೊಂದರಲ್ಲಿ ಶಿಕ್ಷಕಿ ತೃಪ್ತಾ ತ್ಯಾಗಿಯು ಎರಡನೆಯ ತರಗತಿಯಲ್ಲಿ ಓದುವ ಮುಸ್ಲಿಂ ಬಾಲಕನೊಬ್ಬನಿಗೆ ಇತರ ವಿದ್ಯಾರ್ಥಿಗಳಿಂದ ಕೆನ್ನೆಗೆ ಬಾರಿಸಿರುವುದು?
ಅಪರಾಧಿಗಳಿಗೆ ಶಿಕ್ಷೆಯಾಯಿತೇ?
ಇಂತಹ ಪ್ರತಿಯೊಂದು ಘಟನೆಯ ಬಳಿಕವೂ ನಡೆದ ವಿದ್ಯಮಾನಗಳನ್ನು ನೆನಪಿಸಿಕೊಳ್ಳಿ. ಸಂಸತ್ ನಲ್ಲಿ ರಮೇಶ್ ಬಿಧೂರಿ ಜನಾಂಗ ದ್ವೇಷಿ ನಿಂದನೆ ಮಾಡಿದ ಬಳಿಕವೂ ಆತನ ಮೇಲೆ ಕ್ರಮ ಜರುಗಿಸಲಿಲ್ಲ. ಬದಲಿಗೆ, ಪ್ರಚೋದಿಸಿದ ಡ್ಯಾನಿಶ್ ಅಲಿಯದ್ದೇ ತಪ್ಪು ಎಂದು ಸಂಸದ ನಿಶಿಕಾಂತ್ ದುಬೆ ಸಹಿತ ಅನೇಕ ಬಿಜೆಪಿ ಮಂದಿ ವಾದಿಸಿದರು. ಡ್ಯಾನಿಶ್ ಅಲಿ ಹೇಳಿದ ಹಳೆಯ ಮಾತುಗಳನ್ನೆಲ್ಲ ಎಳೆದು ತರಲಾಯಿತು. ಬಿಧೂರಿಗೆ ಟ್ವಿಟರ್ ನಲ್ಲಿ ಕೆಲವೇ ಗಂಟೆಗಳಲ್ಲಿ ನಾಲ್ಕು ಸಾವಿರ ಬೆಂಬಲಿಗರು ಹೆಚ್ಚಾದರು! ‘ವಿ ಸ್ಟಾಂಡ್ ವಿದ್ ಬಿಧೂರಿ’ ಹ್ಯಾಶ್ ಟ್ಯಾಗ್ ಗಳು ಟ್ರೆಂಡ್ ಆದವು.
ಟೀಚರ್ ತೃಪ್ತಾ ತ್ಯಾಗಿ
ಮುಝಫರ್ ನಗರದಲ್ಲಿ ಆ ಶಿಕ್ಷಕಿಯು ಮಗುವನ್ನು ಮುಸ್ಲಿಂ ಎಂಬ ಕಾರಣಕ್ಕೆ ಶಿಕ್ಷಿಸಿದ್ದಲ್ಲ ಎಂದು ವಾದಿಸಲಾಯಿತು. ಶಿಕ್ಷಕರು ವಿದ್ಯಾರ್ಥಿಗಳನ್ನು ಶಿಕ್ಷಿಸುವುದರಲ್ಲಿ ತಪ್ಪೇನಿದೆ, ನಾವೆಲ್ಲರೂ ಅಂತಹ ಶಿಕ್ಷೆ ಅನುಭವಿಸಿಲ್ಲವೇ ಎಂದು ಪ್ರಕರಣವನ್ನು ಸಮರ್ಥಿಸಲಾಯಿತು. ಉತ್ತರಪ್ರದೇಶ ಸರಕಾರ ತಪ್ಪಿತಸ್ಥ ಶಿಕ್ಷಕಿಯ ಮೇಲೆ ಯಾವ ಕ್ರಮವನ್ನೂ ಜರುಗಿಸಲಿಲ್ಲ (ಇದೀಗ ಆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ತೆಗೆದುಕೊಂಡು ಉತ್ತರಪ್ರದೇಶ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ).
ಚೇತನ್ ಸಿಂಗ್ ಎಂಬ ಕಾನ್ ಸ್ಟೇಬಲ್, ಚಲಿಸುವ ರೈಲಿನಲ್ಲಿ ಮೂವರು ಅಮಾಯಕರನ್ನು ಕೇವಲ ಮತೀಯ ನೆಲೆಯಲ್ಲಿ ಬರ್ಬರವಾಗಿ ಕೊಂದಾಗಲೂ, ಅದನ್ನು ಬಿಜೆಪಿ ಬೆಂಬಲಿಗರು ಪರೋಕ್ಷವಾಗಿ ಸಮರ್ಥಿಸಲು ಹಿಂಜರಿಯಲಿಲ್ಲ!
ದೇಶದಲ್ಲಿ ಹೆಚ್ಚುತ್ತಿರುವ ದ್ವೇಷ ಭಾಷಣದ ವಿರುದ್ಧ ಅನೇಕ ದೂರುಗಳು ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ದಾಖಲಾಗಿವೆ. ಇದರ ಬಗ್ಗೆ ಕಟುವಾಗಿ ಮಾತನಾಡಿರುವ ಸುಪ್ರೀಂ ಕೋರ್ಟ್, ‘ದ್ವೇಷ ಭಾಷಣದ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು, ಇಲ್ಲವಾದರೆ ಸಂಬಂಧಿಸಿದ ಅಧಿಕಾರಿಯನ್ನೇ ಹೊಣೆ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದೆ.
ಮೋದಿ ಮೌನ!
ಆದರೂ ದ್ವೇಷ ಭಾಷಣ ಕಡಿಮೆಯಾಗುತ್ತಿಲ್ಲ. ಇದನ್ನು ಮಾಡುತ್ತಿರುವವರೆಲ್ಲರೂ ಹಿಂದುತ್ವ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿರುವವರು. ಅಂದರೆ ಬಿಜೆಪಿ ಬೆಂಬಲಿಗರು. ದೇಶದಲ್ಲಿ ಈ ಜನಾಂಗ ದ್ವೇಷದ ಚಟುವಟಿಕೆಗಳು ಅರಾಜಕತೆಯನ್ನೇ ನಿರ್ಮಿಸುತ್ತಿದ್ದರೂ, ಜಗತ್ತಿನಲ್ಲಿ ದೇಶಕ್ಕೆ ಕೆಟ್ಟ ಹೆಸರು ತರುತ್ತಿದ್ದರೂ, ದನಿ ಎತ್ತ ಬೇಕಾದ ದೇಶದ ಪ್ರಧಾನಿ ಮಾತನಾಡುತ್ತಿಲ್ಲ. ಒಳ್ಳೆಯದರ ಕ್ರೆಡಿಟ್ ಪಡೆಯಲು ಧಾವಿಸಿ ಬರುವ ಮೋದಿ ಸಾಹೇಬರು ಬಿಕ್ಕಟ್ಟು ಉಂಟಾದಾಗಲೆಲ್ಲ ದಿವ್ಯ ಮೌನಕ್ಕೆ ಶರಣಾಗುತ್ತಾರೆ!
ಇದೇ ಸಂದರ್ಭದಲ್ಲಿ ಕೆನಡಾದಲ್ಲಿ ಸಿಖ್ ವ್ಯಕ್ತಿಯೊಬ್ಬನ ಹತ್ಯೆಗೆ ಸಂಬಂಧಿಸಿದಂತೆ ಕೆನಡಾ ಭಾರತ ಸಂಬಂಧ ಹಳಸಿದೆ. ಈ ಹಿನ್ನೆಲೆಯಲ್ಲಿ ಭಯೋತ್ಪಾದನೆಯ ವಿಚಾರಗಳು ಮತ್ತೆ ಮುನ್ನೆಲೆಗೆ ಬಂದಿವೆ. ಆದರೆ, ಈ ಭಯೋತ್ಪಾದನೆ ಎಂದರೆ ಏನು? ಬಂದೂಕು ಹಿಡಿದು, ಬಾಂಬು ಸಿಡಿಸಿ ಮಾಡುವ ಕೃತ್ಯ ಮಾತ್ರ ಭಯೋತ್ಪಾದನೆಯೇ? ಅದನ್ನು ಮಾಡುವವರು ಮಾತ್ರ ಭಯೋತ್ಪಾದಕರೇ? ಅಥವಾ ಮತಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಾ ಬಹುಸಂಖ್ಯಾತವಾದದ ಅಹಂಕಾರದಲ್ಲಿ ಅಲ್ಪಸಂಖ್ಯಾತರ ಬದುಕನ್ನು ಹೈರಾಣು ಮಾಡುವುದು, ಗೋರಕ್ಷಣೆಯ ಹೆಸರಿನಲ್ಲಿ ಮಾನವ ಹತ್ಯೆ ನಡೆಸುವುದು (ಇಂತಹ ಅಪರಾಧ ಕೃತ್ಯಗಳನ್ನು ಮಾಡಿದ ಬಳಿಕವೂ ತಮ್ಮದೇ ಸಿದ್ಧಾಂತದ ಸರಕಾರ ಅಸ್ತಿತ್ವದಲ್ಲಿರುವುದರಿಂದ ಕೂದಲೂ ಕೊಂಕದಂತೆ ಆರಾಮಾಗಿರುವುದು) ಇದು ಕೂಡಾ ಒಂದು ರೀತಿಯ ಭಯೋತ್ಪಾದನಾ ಕೃತ್ಯವಲ್ಲವೇ? ಇವರೂ ಭಯೋತ್ಪಾದಕರೇ ಅಲ್ಲವೇ? ಇಂಥವರಿಗೆ ‘ಅವರು ನಮ್ಮವರು’ ಎಂಬ ಕಾರಣಕ್ಕೆ ಸರಕಾರವು ರಕ್ಷಣೆ ಬೆಂಬಲ ನೀಡುವುದು ಎಂದರೆ, ಅದು ಕೂಡಾ ಭಯೋತ್ಪಾದನೆಗೆ (ಟೆರರಿಸಂ) ಬೆಂಬಲ ನೀಡಿದಂತೆಯೇ ಅಲ್ಲವೇ? ಅಂದ ಮೇಲೆ ಭಯೋತ್ಪಾದನೆಯ ವಿರುದ್ಧ ಮೋದಿ ಸರಕಾರದ ಹೋರಾಟ ಪ್ರಾಮಾಣಿಕವಾದುದೇ?
ತವ್ಲೀನ್ ಸಿಂಗ್ ದೇಶದ ಪ್ರಸಿದ್ಧ ಪತ್ರಕರ್ತೆ. ಕಾಂಗ್ರೆಸ್ ನ, ವಿಶೇಷವಾಗಿ ಸೋನಿಯಾ ಮತ್ತು ರಾಹುಲ್ ರ ಮಹಾ ವಿರೋಧಿ. ತಕ್ಕ ಮಟ್ಟಿಗೆ ಮೋದಿ ಅಭಿಮಾನಿ. ಆದರೂ ಕೂಡಾ ಆಕೆ ಇತ್ತೀಚಿನ ತನ್ನ ಒಂದು ಅಂಕಣದಲ್ಲಿ ಹೀಗೆ ಹೇಳುತ್ತಾರೆ. “ಯಾರು ಭಯೋತ್ಪಾದಕರು, ಯಾರು ಭಯೋತ್ಪಾದಕರಲ್ಲ ಎಂದು ಸ್ಪಷ್ಟಪಡಿಸಬೇಕಾದ ಸಮಯ ಬಂದಿದೆ ಈಗ. ಗೋರಕ್ಷಣೆಯ ಹೆಸರಿನಲ್ಲಿ ಮುಸ್ಲಿಮರನ್ನು ಕೊಲ್ಲುವವರು ಭಯೋತ್ಪಾದಕರೇ ಅಥವಾ ಪವಿತ್ರ ಸೇನಾನಿಗಳೇ? ನಮ್ಮ ಪ್ರಧಾನಿಗಳಿಗೆ ಇದನ್ನು ಒಪ್ಪಿಕೊಳ್ಳುವುದು ಇಷ್ಟವಾಗಲಾರದು. ಆದರೆ ಅವರು ಒಂದು ವಿಷಯ ತಿಳಿದುಕೊಳ್ಳಬೇಕು- ಒಂದೊಂದು ಲಿಂಚಿಂಗ್ (ಬಡಿದು ಸಾಯಿಸುವುದು) ನಡೆದಾಗಲೂ ಅವರು ಮೌನ ಮುರಿಯದಿರುವುದರಿಂದ, ಮುಸ್ಲಿಮರಲ್ಲಿ ಮಾತ್ರವಲ್ಲ, ಸಿಖ್ಖರಲ್ಲಿಯೂ ‘ತಮಗೆ ಅನ್ಯಾಯವಾಗಿದೆ’ ಎಂಬ ಭಾವನೆ ಮೂಡುವಂತಾಗಿದೆ. ಇದನ್ನು ತಕ್ಷಣ ಅವರು ಸರಿಪಡಿಸಬೇಕು. ಭಾರತದ ಪ್ರಭುತ್ವ ‘ನಮ್ಮನ್ನು ಅನ್ಯಾಯದಿಂದ ನಡೆಸಿಕೊಳ್ಳುತ್ತಿದೆ’ ಎಂಬ ಭಾವ ಮೂಡುತ್ತಿದ್ದಂತೆ, ಪಂಜಾಬ್ ಮತ್ತು ಕಾಶ್ಮೀರ ಮಾತ್ರವಲ್ಲ, ಇಡೀ ದೇಶದಲ್ಲಿ ಅಶಾಂತಿ ಉಂಟಾಗುತ್ತದೆ. ವಿದೇಶದ ಮುಸ್ಲಿಮರು ಮತ್ತು ಸಿಖ್ಖರಲ್ಲಿಯೂ ಅಶಾಂತಿ ಉಂಟಾಗುತ್ತದೆ. ಇದು ನಮಗೆ ಚಿಂತೆಯ ವಿಷಯವಾಗಬೇಕು ಹೊರತು ಖಾಲಿಸ್ತಾನದ ಸಂಭಾವ್ಯತೆಯಲ್ಲ. ಈ ಖಲಿಸ್ತಾನ ಎಂಬ ಮಿಥ್ಯೆ ಮತ್ತೆ ಪುನರುಜ್ಜೀವನಗೊಳ್ಳುತ್ತಿರುವ ಬಗ್ಗೆ ಸರಕಾರಿ ಮಟ್ಟದಲ್ಲಿ ಅನಗತ್ಯ ಚಿಂತೆ (ಹಿಸ್ಟೀರಿಯಾ) ಇದೆ. ಅಲ್ಪಸಂಖ್ಯಾತ ಸಮುದಾಯದಲ್ಲಿ ‘ತಾವು ಬೇರೆಯವರು’ ಎಂಬ ಭಾವನೆ ಮೂಡುತ್ತಿರುವುದರ ಬಗ್ಗೆ ಇವರಿಗೆ ಕಾಳಜಿಯಿಲ್ಲ!”
ಬಿಜೆಪಿಯ ‘ಮನ್ ಕೀ ಬಾತ್’ ಗಳು
ವಾಸ್ತವದಲ್ಲಿ ಮುತಾಲಿಕ್, ಯತ್ನಾಳ್, ಪರ್ವೇಶ್ ವರ್ಮಾ, ರಮೇಶ್ ಬಿಧೂರಿ, ದ್ವೇಷಭಾಷಣ ಪ್ರವೀಣ ಅನೇಕ ಕಾವಿಧಾರಿಗಳು ಎಲ್ಲರೂ ಬಿಜೆಪಿ/ ಆರ್ ಎಸ್ ಎಸ್ ನ ‘ಮನ ಕೀ ಬಾತ್’ ಗಳೇ ಆಗಿದ್ದಾರೆ. ಪ್ರಭುತ್ವದ ಬೆಂಬಲದೊಂದಿಗೇ, ಜನಾಂಗ ದ್ವೇಷಿ ನಿಂದನೆಗಳು ದೇಶದಲ್ಲಿ ಈಗಾಗಲೇ ಮಾಮೂಲಿಯಾಗಿ ಹೋಗಿವೆ. ಇದಕ್ಕೆ ತನ್ನ ಪಕ್ಷದ ಸಂಪೂರ್ಣ ಆಶೀರ್ವಾದ ಇದೆ ಎಂಬ ಧೈರ್ಯ ಇದ್ದ ಕಾರಣವಾಗಿಯೇ ಬಿಧೂರಿ ದಿಟ್ಟವಾಗಿ ಪಾರ್ಲಿಮೆಂಟ್ ನಲ್ಲಿಯೇ ಇಂತಹ ಆಕ್ಷೇಪಾರ್ಹ ಮಾತುಗಳನ್ನು ಆಡುವುದು ಸಾಧ್ಯವಾಗಿದೆ. ಯಾವ ಕಾನೂನು ಕ್ರಮವೂ ಇಲ್ಲದೆ ಬಚಾವ್ ಆಗುವುದು ಸಾಧ್ಯವಾಗಿದೆ.
ಈ ಅರ್ಥದಲ್ಲಿ ಇದು ಕೇವಲ ಟ್ರೇಲರ್ ಅಷ್ಟೇ. ಸಿನಿಮಾ ಇನ್ನು ಮುಂದೆಯಷ್ಟೇ ಬರಲಿದೆ. ದ್ವೇಷ ರಾಜಕಾರಣಕ್ಕೆ ಇನ್ನಷ್ಟು ರಕ್ಷಣೆ ಮತ್ತು ಪ್ರೋತ್ಸಾಹ ದೊರೆತು ‘ಮುಂದೊಂದು ದಿನ ಪಾರ್ಲಿಮೆಂಟ್ ನ ಒಳಗಡೆಯೇ ಲಿಂಚಿಂಗ್ ನಡೆದರೂ ಅಚ್ಚರಿಯಿಲ್ಲ’ ಎಂಬ ಗುಮಾನಿಯನ್ನು ಈಗಾಗಲೇ ಡ್ಯಾನಿಶ್ ಅಲಿ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ರಮೇಶ್ ಬಿಧೂರಿಯು ಡ್ಯಾನಿಶ್ ಅಲಿಯನ್ನು ನಿಂದಿಸುವ ಬದಲಿಗೆ ಡ್ಯಾನಿಶ್ ಅಲಿಯು ಇಂತಹದೇ ಮಾತುಗಳ ಮೂಲಕ ಬಿಧೂರಿಯನ್ನು ನಿಂದಿಸುತ್ತಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು, ಏನೇನು ಬೆಳವಣಿಗೆಗಳು ನಡೆಯುತ್ತಿದ್ದವು ಊಹಿಸಿ. ಇಲ್ಲಿನ ವ್ಯತ್ಯಾಸ ಗುರುತಿಸುವುದು ನಿಮಗೆ ಸಾಧ್ಯವಾದರೆ ದೇಶ ಎದುರಿಸುತ್ತಿರುವ ಅಪಾಯವೂ ನಿಮಗೆ ಅರ್ಥವಾದೀತು.
ಶ್ರೀನಿವಾಸ ಕಾರ್ಕಳ
ಇದನ್ನೂ ಓದಿ–ಸಂವಿಧಾನದ ಮೇಲೆ ಸನಾತನಿ ಸರಕಾರದ ಪ್ರಹಾರ