ಬಾಂದಾ (ಉತ್ತರ ಪ್ರದೇಶ): ಪ್ರೇಮ ವಿವಾಹದ ವಿಷಯವಾಗಿ ಎರಡು ಕುಟುಂಬಗಳ ನಡುವೆ ನಡೆಯುತ್ತಿದ್ದ ದೀರ್ಘಕಾಲದ ಗಲಾಟೆ ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಉತ್ತರ ಪ್ರದೇಶದ ಬಾಂದಾ ಜಿಲ್ಲೆಯ ಬಿಸಾಂಡಾ ಪೊಲೀಸ್ ಠಾಣಾ ವ್ಯಾಪ್ತಿಯ ಕೊರ್ರಾಹಿ ಗ್ರಾಮದಲ್ಲಿ ಅಳಿಯನೇ ತನ್ನ ಅತ್ತೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ಮೃತರನ್ನು ಬಾನೋ ಖಾನ್ ಎಂದು ಗುರುತಿಸಲಾಗಿದ್ದು, ಮುಖ್ಯ ಆರೋಪಿ ಲವಕುಶ್ ವರ್ಮಾ ಮತ್ತು ಆತನಿಗೆ ಸಹಕರಿಸಿದ ಇಬ್ಬರು ಸಂಬಂಧಿಕರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಬಳಸಿದ ಕೊಡಲಿಯನ್ನು ವಶಪಡಿಸಿಕೊಳ್ಳಲಾಗಿದೆ.
ಕೊಲೆಗೆ ಪ್ರೇಮ ವಿವಾಹದ ವಿರೋಧವೇ ಕಾರಣ:
ಬಾಂದಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (SP) ಪಲಾಶ್ ಬನ್ಸಾಲ್ ತಿಳಿಸಿರುವಂತೆ, ಪರಿಶಿಷ್ಟ ಜಾತಿ (SC) ಸಮುದಾಯಕ್ಕೆ ಸೇರಿದ ಲವಕುಶ್ ವರ್ಮಾ ಮತ್ತು ಮುಸ್ಲಿಂ ಸಮುದಾಯದ ಗುಲ್ ಅಫ್ರೋಜ್ (ಆಲಿಯಾ) ಪ್ರೀತಿಸುತ್ತಿದ್ದರು. ಸುಮಾರು ಒಂದು ವರ್ಷದ ಹಿಂದೆ ಇವರಿಬ್ಬರು ಮದುವೆಯಾಗಿದ್ದರು. ಮದುವೆಯ ನಂತರ ಹೈದರಾಬಾದ್ನಲ್ಲಿದ್ದ ಈ ದಂಪತಿ, ಇತ್ತೀಚೆಗಷ್ಟೇ ಗ್ರಾಮಕ್ಕೆ ಮರಳಿದ್ದರು. ಆದರೆ, ಹುಡುಗಿಯ ತಾಯಿ ಬಾನೋ ಖಾನ್ ಈ ಮದುವೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದರು. ಇದರಿಂದಾಗಿ ಎರಡೂ ಕುಟುಂಬಗಳ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಈ ಹಿಂದೆ ಹಳ್ಳಿಯ ಮುಖಂಡರು ಹಾಗೂ ಪೊಲೀಸರು ಸಂಧಾನ ನಡೆಸಿದ್ದರೂ ಗಲಾಟೆ ನಿಂತಿರಲಿಲ್ಲ.
ಬೆದರಿಕೆಗೆ ಹೆದರಿ ಮನೆ ಬಿಟ್ಟಿದ್ದ ಮಗಳು:
ಮೃತ ಬಾನೋ ಅವರ ಮಗಳು ಗುಲ್ ಅಫ್ರೋಜ್ ನೀಡಿರುವ ದೂರಿನ ಪ್ರಕಾರ, ಮದುವೆಯ ನಂತರ ಗಂಡ-ಹೆಂಡತಿ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ತನ್ನ ಗಂಡ ತನಗೂ ಹಾಗೂ ತನ್ನ ತಾಯಿಗೂ ಸತತವಾಗಿ ಕೊಲೆ ಬೆದರಿಕೆ ಹಾಕುತ್ತಿದ್ದ ಎಂದು ಆಕೆ ಆರೋಪಿಸಿದ್ದಾಳೆ. ಇದರಿಂದಾಗಿ ಆಕೆ ಗಂಡನ ಮನೆ ಬಿಟ್ಟು ತಾಯಿಯ ಜೊತೆ ವಾಸಿಸುತ್ತಿದ್ದಳು. ಬೆದರಿಕೆಗಳು ಹೆಚ್ಚಾದ ಕಾರಣ ಇಡೀ ಕುಟುಂಬ ಇತ್ತೀಚೆಗಷ್ಟೇ ಬಾಬೇರು ಎಂಬಲ್ಲಿ ಬಾಡಿಗೆ ಮನೆಗೆ ಶಿಫ್ಟ್ ಆಗಿತ್ತು.
ಶನಿವಾರದಂದು ಗ್ರಾಮದಲ್ಲಿದ್ದ ತಮ್ಮ ಹಳೆಯ ಮನೆಯಲ್ಲಿ ಕಳ್ಳತನವಾಗಿದೆ ಎಂಬ ಮಾಹಿತಿ ತಿಳಿದು ಬಾನೋ ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳೊಂದಿಗೆ ಹಳ್ಳಿಗೆ ವಾಪಸ್ ಬಂದಿದ್ದರು. ಗಲಾಟೆಯಾಗಬಹುದು ಎಂಬ ಭಯದಿಂದ ಅವರು ಹಳ್ಳಿಗೆ ಬರುವ ಮುನ್ನವೇ 112 ಪೊಲೀಸ್ ಸಹಾಯವಾಣಿಗೂ ಕರೆ ಮಾಡಿದ್ದರು.
ಪೊಲೀಸರು ಹೋದ ತಕ್ಷಣವೇ ದಾಳಿ:
ದೂರಿನಲ್ಲಿ ತಿಳಿಸಿರುವಂತೆ, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿ ಹೋದ ತಕ್ಷಣವೇ, ಬಾನೋ ಅವರು ಲಿಖಿತ ದೂರು ನೀಡಲು ಪೊಲೀಸ್ ಠಾಣೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ದಾರಿಯಲ್ಲಿ ಹೊಂಚು ಹಾಕಿ ಕುಳಿತಿದ್ದ ಲವಕುಶ್ ಹಾಗೂ ಆತನ ಚಿಕ್ಕಪ್ಪಂದಿರಾದ ಛೋಟೇಲಾಲ್ ಮತ್ತು ಸತ್ತು ಎಂಬುವವರು ಏಕಾಏಕಿ ದಾಳಿ ನಡೆಸಿದ್ದಾರೆ. ಇಬ್ಬರು ಆರೋಪಿಗಳು ಬಾನೋ ಅವರ ಕೈಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡರೆ, ಲವಕುಶ್ ಕೊಡಲಿಯಿಂದ ಅತ್ತೆಯ ಕುತ್ತಿಗೆಗೆ ತೀವ್ರವಾಗಿ ಜಜ್ಜಿದ್ದಾನೆ. ದಾಳಿಯಿಂದಾಗಿ ಬಾನೋ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುಲ್ ಅಫ್ರೋಜ್ ಮತ್ತು ಆಕೆಯ ತಂಗಿ ಅಲ್ಲಿಂದ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.
ಪೊಲೀಸರ ನಿರ್ಲಕ್ಷ್ಯದ ಆರೋಪ:
ತನ್ನ ಗಂಡನಿಂದ ಜೀವ ಬೆದರಿಕೆ ಇರುವ ಬಗ್ಗೆ ಈ ಹಿಂದೆಯೇ ಪೊಲೀಸರಿಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ಗುಲ್ ಅಫ್ರೋಜ್ ಆರೋಪಿಸಿದ್ದಾಳೆ. ಆದರೆ ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದು, 112 ಕರೆ ಬಂದ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಹೋಗಿದ್ದರು ಮತ್ತು ಲಿಖಿತ ದೂರು ನೀಡುವಂತೆ ಸೂಚಿಸಿ ಠಾಣೆಗೆ ಬರುವಷ್ಟರಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಕೊಲೆ ನಡೆದ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರು ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಘಟನೆಯು ಎರಡು ಬೇರೆ ಬೇರೆ ಧರ್ಮದ ಕುಟುಂಬಗಳ ನಡುವೆ ನಡೆದಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
