ಪಹಲ್ಗಾಮ್ ದಾಳಿಯ ನಂತರ ನಡೆದ ಭಾರತ ಪಾಕಿಸ್ತಾನ ಎರಡೂ ದೇಶಗಳ ನಡುವಿನ ಸಂದಿಗ್ಧತೆ ಈಗ ಮಿತಿ ಮೀರುವ ಹಂತಕ್ಕೆ ತಲುಪಿದೆ. ಸಧ್ಯ ಎರಡೂ ದೇಶಗಳು ಯುದ್ಧಕ್ಕೆ ಎರಡೂ ದೇಶಗಳು ಸಿದ್ಧ ಎಂಬ ಸಂದೇಶ ನೀಡುವತ್ತ ಎರಡೂ ದೇಶಗಳ ನಡುವಿನ ಅಂತರರಾಷ್ಟ್ರೀಯ ಒಪ್ಪಂದಗಳನ್ನು ಮುರಿದು ಕೊಳ್ಳಲು ಮುಂದಾಗಿವೆ.
ಇತ್ತ ಭಾರತ ಸಿಂಧೂ ನದಿ ನೀರಿನ ಒಪ್ಪಂದಕ್ಕೆ ಅಂತರರಾಷ್ಟ್ರೀಯ ನದಿ ನೀರಿನ ಹಂಚಿಕೆ ಕರಾರನ್ನು ಮುರಿಯುವ ಹೇಳಿಕೆಗೆ ಮುಂದಾದರೆ, ಅತ್ತ ಪಾಕಿಸ್ತಾನ ಮಹತ್ವದ ಶಿಮ್ಲಾ ಒಪ್ಪಂದಕ್ಕೆ ತಿರುಗಿ ನಿಲ್ಲುವ ಮಾತನ್ನಾಡಿದೆ. ಅಷ್ಟಕ್ಕೂ ಶಿಮ್ಲಾ ಒಪ್ಪಂದದ ಸುತ್ತ ಇರುವ ಪ್ರಮುಖ ಅಂಶಗಳ ಬಗ್ಗೆ ಕಣ್ಣಾಡಿಸುವುದಾದರೆ..
ಕಾಂಗ್ರೆಸ್ ನಾಯಕಿ ಇಂದಿರಾಗಾಂಧಿ ಪ್ರಧಾನಿ ಆಗಿದ್ದ ಸಂದರ್ಭದಲ್ಲಿ 1971ರ ಭಾರತ-ಪಾಕಿಸ್ತಾನ ಯುದ್ಧದ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಸಹಿ ಹಾಕಲಾದ ಮಹತ್ವದ ಶಾಂತಿ ಒಪ್ಪಂದವೇ ಈ ಶಿಮ್ಲಾ ಒಪ್ಪಂದ. ಭಾರತ ಪಾಕಿಸ್ತಾನ ಯುದ್ಧದ ನಂತರ ಸಹಿ ಹಾಕಲಾದ ಈ ಒಪ್ಪಂದವು ಭಾರತ-ಪಾಕಿಸ್ತಾನ ಸಂಬಂಧಗಳಲ್ಲಿ ಒಂದು ಪ್ರಮುಖ ಕ್ಷಣ ಎಂದೇ ಹೇಳಬೇಕು. ಆಂತರಿಕವಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಒಂದು ಆಳವಾದ ಧ್ವೇಷ ಇದ್ದರೂ ಶಿಮ್ಲಾ ಒಪ್ಪಂದದ ಕಾರಣಕ್ಕೆ ಗಡಿ ಭದ್ರತೆ ಹೊರತುಪಡಿಸಿ ಬೇರಾವುದೇ ಪರಿಣಾಮಕಾರಿ ಪ್ರತಿಕಾರ ಎರಡೂ ದೇಶಗಳ ನಡುವೆ ನಡೆದಿದ್ದು ತೀರಾ ಕಡಿಮೆ.
ಪೂರ್ವ ಪಾಕಿಸ್ತಾನದ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತ ಮಧ್ಯೆ ಪ್ರವೇಶಿಸುವ ಅನಿವಾರ್ಯತೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತ ಮಧ್ಯಪ್ರವೇಶಿಸಿದಾಗ ಪಾಕಿಸ್ತಾನ ಭಾರತದ ನಡುವೆ ಯುದ್ಧ ಸಂಭವಿಸಿತ್ತು. ಯುದ್ಧದಲ್ಲಿ ಭಾರತದ ಪಾತ್ರ ನಿರ್ಣಾಯಕವಾಗಿತ್ತು. ಇದರ ಪರಿಣಾಮವಾಗಿ ಪೂರ್ವ ಪಾಕಿಸ್ತಾನವು ಪಶ್ಚಿಮ ಪಾಕಿಸ್ತಾನದಿಂದ ಬೇರ್ಪಟ್ಟು ಬಾಂಗ್ಲಾದೇಶ ಎಂಬ ಹೊಸ ರಾಷ್ಟ್ರವನ್ನು ಸೃಷ್ಟಿಸಿತು. ಆಗ ಭಾರತದ ಪ್ರಧಾನಿ ಆಗಿದ್ದದ್ದು ಉಕ್ಕಿನ ನಾಯಕಿ ಇಂದಿರಾಗಾಂಧಿ.
ಯುದ್ಧದ ನಂತರ, ಭಾರತವು ಸುಮಾರು 93,000 ಪಾಕಿಸ್ತಾನದ ಸೈನಿಕರನ್ನು ಯುದ್ಧ ಕೈದಿಗಳಾಗಿ ಸೆರೆ ಹಿಡಿದಿತ್ತು. ಎರಡೂ ರಾಷ್ಟ್ರಗಳ ಸಂಘರ್ಷ ತೀವ್ರವಾಗಿತ್ತು. ಈ ಸಂದರ್ಭದಲ್ಲಿ, ಶಾಂತಿಯುತ ಸಂಬಂಧಗಳನ್ನು ಮರುಸ್ಥಾಪಿಸಲು ಮತ್ತು ಯುದ್ಧದಿಂದ ಉಂಟಾದ ನಷ್ಟವನ್ನು ಸರಿದೂಗಿಸಿಕೊಳ್ಳಲು ಸಮರ್ಥ ಹಾಗೂ ಸೂಕ್ತವಾದ ಒಂದು ಒಪ್ಪಂದದ ಅಗತ್ಯವಿತ್ತು.
1971ರ ಭಾರತ-ಪಾಕಿಸ್ತಾನ ಯುದ್ಧದ ನಂತರ ಎರಡೂ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಸರಿದೂಗಿಸಿಕೊಳ್ಳಲು ಮತ್ತು ಶಾಂತಿಯನ್ನು ಸ್ಥಾಪಿಸಲು ನಿರ್ಧರಿಸಲಾಯ್ತು. ಈ ಒಪ್ಪಂದವನ್ನು ಜುಲೈ 2, 1972 ರಂದು ಶಿಮ್ಲಾದಲ್ಲಿ ಭಾರತದ ಆಗಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ಮತ್ತು ಪಾಕಿಸ್ತಾನದ ಆಗಿನ ಅಧ್ಯಕ್ಷ ಜುಲ್ಫಿಕರ್ ಅಲಿ ಭುಟ್ಟೋ ಅವರು ಸಹಿ ಮಾಡಿದರು. ಈ ಒಪ್ಪಂದವು ದ್ವಿಪಕ್ಷೀಯ ಸಂಬಂಧಗಳನ್ನು ಮರುಸ್ಥಾಪಿಸುವಲ್ಲಿ ಮತ್ತು ಭವಿಷ್ಯದ ಯುದ್ಧ, ಸಂಘರ್ಷಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿತು.
ಎರಡೂ ದೇಶಗಳ ನಡುವಿನ ಸಂಬಂಧ ಸುಧಾರಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ಎರಡೂ ರಾಷ್ಟ್ರಗಳು ಯಾವುದೇ ಭಿನ್ನಾಭಿಪ್ರಾಯಗಳನ್ನು ಮೂರನೇ ವ್ಯಕ್ತಿಯ ಹಸ್ತಕ್ಷೇಪವಿಲ್ಲದೆ ಶಾಂತಿಯುತ ವಿಧಾನಗಳು ಮತ್ತು ದ್ವಿಪಕ್ಷೀಯ ಮಾತುಕತೆಗಳ ಮೂಲಕ ಪರಿಹರಿಸಲು ಒಪ್ಪಿಕೊಂಡವು. ಆಗ ಜಾರಿಯಾದ ಒಪ್ಪಂದವೇ ಶಿಮ್ಲಾ ಒಪ್ಪಂದ.
ಶಿಮ್ಲಾ ಒಪ್ಪಂದ ವಿಫಲತೆ!
ಈ ಒಪ್ಪಂದದ ಉದ್ದೇಶಗಳು ಹಲವು ಬಾರಿ ಮುರಿದು ಎರಡೂ ದೇಶಗಳು ಕಾದಾಡಿದ ಹಲವು ನಿದರ್ಶನಗಳಿವೆ. ಒಪ್ಪಂದ ಮಹತ್ವದ್ದೇ ಆದರೂ ಭಾರತ ಪಾಕಿಸ್ತಾನ ನಡುವಿನ ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಈ ಒಪ್ಪಂದ ಒದಗಿಸದಿರುವುದು ಈ ಒಪ್ಪಂದದ ವಿಫಲತೆಗೆ ಪ್ರಮುಖ ಕಾರಣ.
ಎರಡೂ ರಾಷ್ಟ್ರಗಳು ಈ ವಿಷಯದಲ್ಲಿ ತಮ್ಮ ತಮ್ಮ ನಿಲುವುಗಳನ್ನು ಉಳಿಸಿಕೊಂಡವು, ಇದು ಭವಿಷ್ಯದಲ್ಲಿ ಮತ್ತೆ ಸಂಘರ್ಷಕ್ಕೆ ಕಾರಣವಾಯಿತು.
1984ರಲ್ಲಿ ಆಪರೇಷನ್ ಮೇಘದೂತ್
1984 ರಲ್ಲಿ ಭಾರತವು ಸಿಯಾಚಿನ್ ಹಿಮನದಿ ಪ್ರದೇಶವನ್ನು ವಶಪಡಿಸಿಕೊಂಡ ಆಪರೇಷನ್ ಮೇಘದೂತ್ ಅನ್ನು ಪಾಕಿಸ್ತಾನವು ಸಿಮ್ಲಾ ಒಪ್ಪಂದದ ಉಲ್ಲಂಘನೆ ಎಂದು ಪರಿಗಣಿಸಿತು.
1999ರ ಕಾರ್ಗಿಲ್ ಯುದ್ಧ
ಸಿಮ್ಲಾ ಒಪ್ಪಂದವು ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿದ್ದರೂ, ಕಾಲಾನಂತರದಲ್ಲಿ ಎರಡೂ ದೇಶಗಳ ನಡುವಿನ ಸಂಬಂಧ ಹದಗೆಡುವುದನ್ನು ಅದು ತಡೆಯಲಿಲ್ಲ. 1999 ರಲ್ಲಿ ಕಾರ್ಗಿಲ್ ಯುದ್ಧಸಂಭವಿಸಿತು. ಇದು ಎರಡೂ ರಾಷ್ಟ್ರಗಳ ನಡುವಿನ ಸಂಬಂಧವನ್ನು ಹದಗೆಡಿಸಿತು.
ಗಡಿ ರೇಖೆ ಉಲ್ಲಂಘನೆ
ಪಾಕಿಸ್ತಾನ ನಿರಂತರವಾಗಿ ಗಡಿ ರೇಖೆ ಉಲ್ಲಂಘಿಸಿದ್ದು ಈ ಒಪ್ಪಂದ ವಿಫಲವಾಗಲು ಪ್ರಮುಖ ಕಾರಣ ಎನ್ನಲಾಗಿದೆ. ಆಗಾಗ LoC ದಾಟಿ ಒಳಬರುವ ಪಾಕ್ ಸೇನೆ ಭಾರತವನ್ನು ಕೆಣಕಲು ಇನ್ನಿಲ್ಲದ ತಂತ್ರಗಾರಿಕೆ ಹೆಣೆದಿದೆ.
ಪಾಕ್ ನಿಂದ ಭಯೋತ್ಪಾದನೆ ಪೋಷಣೆ ಮತ್ತು ಭಾರತಕ್ಕೆ ಅದರ ದುಷ್ಪರಿಣಾಮ
ಪ್ರತಿಯೊಬ್ಬರೂ ತಿಳಿದಿರುವಂತೆ ಪಾಕಿಸ್ತಾನ ನಿರಂತರವಾಗಿ ಭಯೋತ್ಪಾದನೆ ಪೋಷಿಸಿಕೊಂಡು ಬಂದಿದೆ. ಭಾರತದಲ್ಲಿ ನಡೆದ ಹಲವು ಭಯೋತ್ಪಾದಕ ದಾಳಿಗಳ ಹಿಂದೆ ಪಾಕಿಸ್ತಾನದ ನೇರ ಬೆಂಬಲ ಇದೆ ಎಂದೇ ಭಾವಿಸಲಾಗಿದೆ. ಅದು ಮುಂಬೈ ದಾಳಿ, ಪಾರ್ಲಿಮೆಂಟ್ ಭವನದ ಮೇಲಿನ ದಾಳಿ ಅಥವಾ ಪುಲ್ವಾಮ ದಾಳಿ ಹಿಂದೆ ಭಾರತಕ್ಕೆ ತುಂಬಾ ದೊಡ್ಡ ಘಾಸಿ ಮಾಡಿದೆ.. ಇವೆಲ್ಲವುಗಳೂ ಶಿಮ್ಲಾ ಒಪ್ಪಂದ ವಿಫಲತೆ ಕಾಣುವ ಪ್ರಮುಖ ಅಂಶಗಳಾಗಿವೆ.