Home ಅಂಕಣ ಇತಿಹಾಸವನ್ನು ಇತಿಹಾಸವಾಗಿ ನೋಡೋಣ

ಇತಿಹಾಸವನ್ನು ಇತಿಹಾಸವಾಗಿ ನೋಡೋಣ

0
ರಾಹುಲ್ ಗಾಂಧಿಯವರನ್ನು ಬಂಧಿಸಬೇಕು ಎಂದು ಸಾವರ್ಕರ್ ಅವರ ಮೊಮ್ಮಗ ದೂರು ನೀಡಿದ್ದು ಮತ್ತು ಸಾವರ್ಕರ್ ಅವರ ಶಿಷ್ಯ ಗೋಡ್ಸೆಯಿಂದ ಹತರಾದ ಬಾಪು ಅವರ ಮರಿಮಗ ತುಷಾರ್ ಗಾಂಧಿ ರಾಹುಲ್ ಜತೆ ನಿಂತು ಅವರೊಂದಿಗೆ ಹೆಜ್ಜೆ ಹಾಕಿದ್ದು, ದೇಶದ ಇಂದಿನ ಸ್ಥಿತಿಯಲ್ಲಿ ಬಹುದೊಡ್ಡ ಒಂದು ರೂಪಕದಂತಿದೆ. ಓದಿ- ಇಂದಿನ ʼಶ್ರೀನಿ ಕಾಲಂʼ

ಎರಡು ದಿನಗಳ ಹಿಂದೆ ಆಸಕ್ತಿಕರ ವಿದ್ಯಮಾನವೊಂದು ನಡೆಯಿತು. ಮಹಾರಾಷ್ಟ್ರದಲ್ಲಿ ‘ಭಾರತ ಐಕ್ಯತಾ ಯಾತ್ರೆ’ (ಭಾರತ್ ಜೋಡೋ ಯಾತ್ರಾ) ನಡೆಸುತ್ತಿರುವ ರಾಹುಲ್ ಗಾಂಧಿಯವರ ಮೇಲೆ ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾವರ್ಕರ್ ‘ರಾಹುಲ್ ಗಾಂಧಿಯವರನ್ನು ಬಂಧಿಸಬೇಕು’ ಎಂಬ ಆಗ್ರಹದೊಂದಿಗೆ ದೂರು ದಾಖಲಿಸಿದರು. ಅದೇ ದಿನ ಮಹಾತ್ಮಾ ಗಾಂಧಿಯವರ ಮರಿ ಮಗ ತುಷಾರ್ ಗಾಂಧಿ ಭಾರತ ಐಕ್ಯತಾ ಯಾತ್ರೆಯಲ್ಲಿ ರಾಹುಲ್ ಗಾಂಧಿ ಕೈಹಿಡಿದು ಹೆಜ್ಜೆ ಹಾಕಿದರು.

ಇದರ ಹಿನ್ನೆಲೆ ಹೀಗಿದೆ – ರಾಹುಲ್ ಗಾಂಧಿ ಹಿಂದಿನಿಂದಲೂ ತನ್ನ ಮನದ ಮಾತನ್ನು ಯಾವ ಮುಲಾಜೂ ಇಲ್ಲದೆ ಹೇಳಿಕೊಂಡು ಬಂದವರು. ಹೀಗೆ ಹೇಳುವಾಗ ಅವರು ತನ್ನ ಹೇಳಿಕೆಯಿಂದ ಮುಂದೆ ಆಗಬಹುದಾದ ಚುನಾವಣಾ ನಷ್ಟವನ್ನು ನೋಡುವುದಿಲ್ಲ. ದೇಶದ ಬಗ್ಗೆ ನಿಜ ಕಾಳಜಿಯುಳ್ಳ ರಾಜಕೀಯ ನಾಯಕನೊಬ್ಬನಿಗೆ ಮುಂದಿನ ಚುನಾವಣೆ ಗೆಲ್ಲುವುದು ಗುರಿಯಾಗ ಕೂಡದು ಕೂಡಾ. ರಾಜಕೀಯ ಫುಡಾರಿಯೊಬ್ಬ ಮುಂದಿನ ಚುನಾವಣೆಯ ಬಗ್ಗೆ ಯೋಚಿಸಿದರೆ, ರಾಜಕೀಯ ಮುತ್ಸದ್ದಿಯೊಬ್ಬ ಮುಂದಿನ ತಲೆಮಾರಿನ ಬಗ್ಗೆ ಯೋಚಿಸುತ್ತಾನೆ ಎಂಬ ಮಾತೇ ಇದೆಯಲ್ಲ? ಈವತ್ತು ಮುಸ್ಲಿಂ ಸಮುದಾಯವನ್ನು ದುರುಳೀರಿಸಿ, ಅವರಿಗೆ ಅನ್ಯಾಯವಾದಾಗಲೂ ಅವರನ್ನು ಬೆಂಬಲಿಸಿ ಮಾತನಾಡುವವರನ್ನು ‘ಹಿಂದೂ ವಿರೋಧಿ’ ಎಂದು ಬಿಂಬಿಸಲಾಗುತ್ತಿದೆ. ಹೀಗೆ ಹಿಂದೂ ವಿರೋಧಿ ಎಂದು ಬಿಂಬಿತವಾದ ತಕ್ಷಣ ಹಿಂದೂಗಳ ಓಟನ್ನು ಕಳೆದು ಕೊಳ್ಳುವ ಅಪಾಯವೂ ಇರುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಆದರೆ ದೇಶದ ಒಟ್ಟಾರೆ ಹಿತದ ಬಗ್ಗೆ ಕಾಳಜಿ ಇರುವ ಒಬ್ಬ ರಾಜಕೀಯ ನಾಯಕ ಏನು ಮಾಡಬೇಕು? ಚುನಾವಣಾ ಪರಿಣಾಮ ನೋಡಿಕೊಂಡು ಸುಮ್ಮನೆ ಕೂರಬೇಕೇ? ಅಥವಾ ಆ ದಮನಿತ ಸಮುದಾಯದ ಬಗ್ಗೆ ಮಾತನಾಡಬೇಕೇ? ಅದು ಬಿಲ್ಕಿಸ್ ಬಾನು ಪ್ರಕರಣವಿರಬಹುದು, ಮಹಮದ್ ಜುಬೇರ್ ಪ್ರಕರಣವಿರಬಹುದು, ಲಿಂಚ್ಂಗ್ ಗೆ ಬಲಿಯಾಗುತ್ತಿರುವ ಅಮಾಯಕ ಮುಸ್ಲಿಮರ ಬಗ್ಗೆಯೇ ಇರಬಹುದು, ಅನೇಕರು ಓಟು ಕಳೆದುಕೊಳ್ಳುವ  ಭಯದಿಂದ ಬಾಯಿ ಮುಚ್ಚಿ ಕೂತಿರುವಾಗ, ದಿಟ್ಟವಾಗಿ ಮಾತನಾಡಿದ್ದು ರಾಹುಲ್ ಗಾಂಧಿ.

ಸಾವರ್ಕರ್ ಬಗ್ಗೆಯೂ ರಾಹುಲ್ ಗಾಂಧಿ ಹಿಂದಿನಿಂದಲೂ ಒಂದು ಸ್ಪಷ್ಟ ನಿಲುವನ್ನು ಹೊಂದಿದ್ದಾರೆ. ದಾಖಲೆಗಳೇ ಹೇಳುವ ಪ್ರಕಾರ ಒಂದು ಕಾಲದಲ್ಲಿ ಸಾವರ್ಕರ್ ಬ್ರಿಟಿಷರ ವಿರುದ್ಧ ಇದ್ದುದು ಹೌದು. 1911 ರ ಪೂರ್ವದಲ್ಲಿ ಅವರು ಲಂಡನ್ನಿನಲ್ಲಿದ್ದಾಗ  ಭಾರತೀಯ ಕ್ರಾಂತಿಕಾರಿಗಳ ನಿಲಯವಾಗಿದ್ದ ‘ಇಂಡಿಯಾ ಹೌಸ್’ ನ ಖಾಯಂ ಸದಸ್ಯರಾಗಿದ್ದರು. ಲಂಡನ್ನಿನಲ್ಲಿದ್ದ ಬಿಸಿರಕ್ತದ ತರುಣರನ್ನು ಬ್ರಿಟಿಷ್ ವಿರೋಧಿ ಕೃತ್ಯಗಳಿಗೆ ಪ್ರಚೋದಿಸುತ್ತಿದ್ದರು. ತಾವು ತೆರೆಮರೆಯಲ್ಲಿದ್ದು ಕೊಂಡು ಅಂಥಾ ಕೃತ್ಯಗಳಲ್ಲಿ ತಮ್ಮ ಪಾತ್ರ ಸಾಬೀತಾಗದಂತೆ ಎಚ್ಚರವಹಿಸುತ್ತಿದ್ದರು.  ಸಾವರ್ಕರ್ 1911ಕ್ಕೆ ಮುನ್ನ ತೆರೆಮರೆಯ ಕ್ರಾಂತಿಕಾರಿಯಾಗಿದ್ದರೂ 1911ರ ಬಳಿಕ ಬಹಿರಂಗ ದೇಶದ್ರೋಹಿ ಆಗಿದ್ದರು.

ಸಾವರ್ಕರ್ ನಿಜ ಮುಖ

ಅವರು ಅಂಡಮಾನ್ ಜೈಲಿಗೆ ಹೋದುದು ನಾಸಿಕ್ ನ ಬ್ರಿಟಿಷ್ ಮ್ಯಾಜಿಸ್ಟ್ರೇಟ್ ಆಗಿದ್ದ ಎ ಎಮ್ ಟಿ ಜಾಕ್ಸನ್ ಎಂಬ ಬ್ರಿಟಿಷ್ ಅಧಿಕಾರಿಯ ಕೊಲೆಗೆ ಪಿಸ್ತೂಲ್ ಸರಬರಾಜು ಮಾಡಿದ ಪ್ರಕರಣದಲ್ಲಿ. ಅಲ್ಲಿಗೆ ಹೋದ ಆನಂತರ ಅವರು ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆಯುತ್ತ ಹೋದರು. ಬಿಡುಗಡೆಯಾದ ಬಳಿಕ ಬ್ರಿಟಿಷರು ಕೊಟ್ಟ ರತ್ನಗಿರಿಯ ಬಂಗಲೆಯಲ್ಲಿ ವಾಸಿಸಿದರು. ಬ್ರಿಟಿಷರಿಂದ ಅಂದಿನ ಕಲೆಕ್ಟರ್ ರ ಸಂಬಳಕ್ಕೆ ಸಮನಾದ ಮಾಸಿಕ ಐವತ್ತು ರುಪಾಯಿ ಪಿಂಚಣಿ ಪಡೆದರು. ಇಡೀ ಭಾರತವೇ ಕ್ವಿಟ್ ಇಂಡಿಯಾ ಹೋರಾಟದಲ್ಲಿ ತೊಡಗಿದ್ದಾಗ ಸಾವರ್ಕರ್ ಬ್ರಿಟಿಷರ ಪರ ನಿಂತರು. ದ್ವಿರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾದಿಸಿದ್ದು ಇದೇ ಸಾವರ್ಕರ್. ಚಿತ್ರಗುಪ್ತನ ಹೆಸರಿನಲ್ಲಿ ತನ್ನ ಜೀವನ ಚರಿತ್ರೆಯನ್ನು ತಾನೇ ಬರೆದು ತನ್ನನ್ನು ‘ವೀರ’ ಎಂದು ಕರೆದುಕೊಂಡದ್ದೂ ಇದೇ ಸಾವರ್ಕರ್. ಅಂತಿಮವಾಗಿ ರಾಷ್ಟ್ರಪಿತ ಗಾಂಧಿಯ ಕೊಲೆಗಡುಕನಾದ ನಾಥೂರಾಮ್ ಗೋಡ್ಸೆಯ ಗುರುವಾಗಿ, ಆತನಿಗೆ ಗಾಂಧಿ ಕೊಲೆಗೆ ಸೂಕ್ತ ಬಂದೂಕು ಲಭಿಸುವಂತೆ ಮಾಡಿದ್ದೂ ಇದೇ ಸಾವರ್ಕರ್. ಈ ಬಗ್ಗೆ ಗಾಂಧಿ ಮರಿಮಗ ತುಷಾರ್ ಗಾಂಧಿ ಹೀಗೆ ಹೇಳಿದ್ದಾರೆ- Savarkar not only helped the British, he also helped Nathuram Godse find an efficient gun to murder Bapu. Till two days before Bapu’s murder, Godse did not have a reliable weapon to carry out the murder of M. K. Gandhi. ಗಾಂಧಿ ಕೊಲೆಯ ಕೋರ್ಟ್ ವಿಚಾರಣೆಯಲ್ಲಿ ಆರೋಪಿಯಾಗಿ ಸಾವರ್ಕರ್ ಕೋರ್ಟ್  ಕಟಕಟೆಯಲ್ಲಿ ನಿಂತಿದ್ದರು.

ಇದು ವಾಸ್ತವ ಇತಿಹಾಸ.  ಮೊನ್ನೆ ರಾಹುಲ್ ಗಾಂಧಿಯವರು, ಸಾವರ್ಕರ್ ಬ್ರಿಟಿಷರಿಗೆ ‘ನಿಮ್ಮ ಅತ್ಯಂತ ವಿಧೇಯ ಸೇವಕನಾಗಿ ಇರುವೆ’ (I beg to remain Sir, Your most obedient servant) ಎಂದು ಕ್ಷಮಾಪಣೆ ಪತ್ರ ಬರೆದಿದ್ದ, ಆತ ಬ್ರಿಟಿಷರಿಗೆ ಸಹಾಯ ಮಾಡಿದ್ದ ಎಂದು ಹೇಳಿದರು. ಸಾವರ್ಕರ್ ರನ್ನು ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಸುವ ಜನ ಇರುವ ಮಹಾರಾಷ್ಟ್ರದಲ್ಲಿಯೇ ಹೀಗೆ ಹೇಳುವುದಕ್ಕೆ ಅಸಾಧಾರಣ ಧೈರ್ಯ ಬೇಕು. ಆ ಧೈರ್ಯವನ್ನು ರಾಹುಲ್ ಪ್ರದರ್ಶಿಸಿದರು. ತಡಮಾಡದೆ ಗೋದಿ ಮೀಡಿಯಾ ಅದನ್ನೊಂದು ವಿವಾದ ಮಾಡಿತು. ಇದರ ಮುಂದುವರಿದ ಭಾಗವಾಗಿ ಸಾವರ್ಕರ್ ಅವರ ಮೊಮ್ಮಗ ‘ರಾಹುಲ್ ಗಾಂಧಿ ಸ್ವಾತಂತ್ರ್ಯ ಹೋರಾಟಗಾರನಿಗೆ ಅವಮಾನ ಮಾಡಿದ್ದಾರೆ, ಅವರನ್ನು ತಕ್ಷಣ ಬಂಧಿಸಬೇಕು ಎಂದು ದೂರು ನೀಡಿದರು.

ಈಗ ಗೋಡ್ಸೆ ಹೀರೋ !

ರಾಹುಲ್ ಗಾಂಧಿಯವರನ್ನು ಬಂಧಿಸಬೇಕು ಎಂದು ಸಾವರ್ಕರ್ ಅವರ ಮೊಮ್ಮಗ ದೂರು ನೀಡಿದ್ದು ಮತ್ತು ಸಾವರ್ಕರ್ ಅವರ ಶಿಷ್ಯ ಗೋಡ್ಸೆಯಿಂದ ಹತರಾದ ಬಾಪು ಅವರ ಮರಿಮಗ ತುಷಾರ್ ಗಾಂಧಿ ರಾಹುಲ್ ಜತೆ ನಿಂತು ಅವರೊಂದಿಗೆ ಹೆಜ್ಜೆ ಹಾಕಿದ್ದು, ದೇಶದ ಇಂದಿನ ಸ್ಥಿತಿಯಲ್ಲಿ ಬಹುದೊಡ್ಡ ಒಂದು ರೂಪಕದಂತಿದೆ.

ರಾಹುಲ್ ಗಾಂಧಿಯವರನ್ನು ಬಂಧಿಸಬೇಕು ಎಂದು ಸಾವರ್ಕರ್ ಅವರ ಮೊಮ್ಮಗ ದೂರು ನೀಡಿದ್ದು ಮತ್ತು ಸಾವರ್ಕರ್ ಅವರ ಶಿಷ್ಯ ಗೋಡ್ಸೆಯಿಂದ ಹತರಾದ ಬಾಪು ಅವರ ಮರಿಮಗ ತುಷಾರ್ ಗಾಂಧಿ ರಾಹುಲ್ ಜತೆ ನಿಂತು ಅವರೊಂದಿಗೆ ಹೆಜ್ಜೆ ಹಾಕಿದ್ದು, ದೇಶದ ಇಂದಿನ ಸ್ಥಿತಿಯಲ್ಲಿ ಬಹುದೊಡ್ಡ ಒಂದು ರೂಪಕದಂತಿದೆ. ಗಾಂಧಿ ಹತ್ಯೆಯಲ್ಲಿ ನಾಥೂರಾಮ್ ಗೋಡ್ಸೆಯ ಪಾತ್ರ ಏನು, ಗಾಂಧಿಯನ್ನು ಆತ ಕೊಲ್ಲಲು ನಿಜ ಕಾರಣ ಏನು? ಎಂಬುದು ಎಲ್ಲರಿಗೂ ಗೊತ್ತಿದೆ. ಮಾತ್ರವಲ್ಲ, ಕೆಲವೇ ದಶಕಗಳ ಹಿಂದಿನವರೆಗೂ ಗಾಂಧಿ ಹತ್ಯೆಯ ಬಗ್ಗೆ ಒಂದು ಪಾಪ ಪ್ರಜ್ಞೆ ಇತ್ತು. ಗೋಡ್ಸೆಯ ಕೆಟ್ಟ ಅಭಿಪ್ರಾಯ ಇತ್ತು. ಆದರೆ ಇತ್ತೀಚಿನ ದಶಕಗಳಲ್ಲಿ ಬಲಪಂಥೀಯ ಶಕ್ತಿಗಳು ಬಲಗೊಂಡು ಪ್ರಭುತ್ವವೇ ಇಂತಹ ಕೆಲಸಗಳಿಗೆ ಪ್ರೋತ್ಸಾಹ ಮತ್ತು ರಕ್ಷಣೆ ಕೊಡಲಾರಂಭಿಸಿದ ಮೇಲೆ ದೇಶ ವಿಭಜನೆ ಸಹಿತ ದೇಶದ ಎಲ್ಲ ಸಮಸ್ಯೆಗಳಿಗೂ ಗಾಂಧಿಯನ್ನು ಹೊಣೆ ಮಾಡಿ ನಿಂದಿಸುವ ಮತ್ತು ಗಾಂಧಿಯನ್ನು ಕೊಂದುದು ಸರಿ ಎಂದು ವಾದಿಸುತ್ತಾ ಗೋಡ್ಸೆಯನ್ನು ಬಹಿರಂಗವಾಗಿಯೇ ಆರಾಧಿಸುವುದು, ಅತನಿಗೆ ಗುಡಿ ಕಟ್ಟುವುದು, ಗಾಂಧಿ ಪ್ರತಿಕೃತಿ ಮಾಡಿ ಗುಂಡಿಟ್ಟು ಕೊಲ್ಲುವ ಪ್ರಸಂಗವನ್ನು ಅಭಿನಯಿಸುವುದು ಇವೆಲ್ಲ ಯಾವ ಅಳುಕೂ ಇಲ್ಲದೆ ನಡೆಯುತ್ತಿವೆ. ಈ ಕೆಲಸದಲ್ಲಿ ಸೋಶಿಯಲ್ ಮಿಡಿಯಾ ಬಹುದೊಡ್ಡ ಪಾತ್ರವನ್ನು ವಹಿಸುತ್ತಿದೆ. ಸುಳ್ಳನ್ನು ಹರಡುವ ಕೆಲಸ ದೊಡ್ಡ ಮಟ್ಟದಲ್ಲಿಯೇ ನಡೆಯುತ್ತಿದೆ. ಇದನ್ನು ಓದುವ ನಂಬುವ ಎಳೆಯ ತಲೆಮಾರು ಗಾಂಧಿಯನ್ನು ನಿಂದಿಸುವ ಮತ್ತು ಗೋಡ್ಸೆಯನ್ನು ಹೊಗಳುವ ಕೆಲಸವನ್ನು ಬಹಿರಂಗವಾಗಿಯೇ ಮಾಡುತ್ತಿದೆ!

ದೇಶದ ಹಿಡಿತವು ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಜಕೀಯ ಮುಖವಾದ ಬಿಜೆಪಿಯ ಕೈಗೆ ಹೋದಮೇಲೆ ಅದರ ಅಜೆಂಡಾಗಳು ಒಂದೊಂದಾಗಿ ಜಾರಿಗೆ ಬರುತ್ತಿವೆ. ಮುಸ್ಲಿಮರನ್ನು ಅನ್ಯರನ್ನಾಗಿ, ಎರಡನೆಯ ದರ್ಜೆಯ ಪ್ರಜೆಯಾಗಿ ಬಿಂಬಿಸುವ ಕಾರ್ಯಕ್ರಮವೂ ಇದರ ಮುಂದುವರಿದ ಭಾಗ. ಉದಾಹರಣೆಗೆ ನೋಡಿ, ಮೊಗಲರು ದುಷ್ಟರು, ಈ ದೇಶದ ಎಲ್ಲ ಸಮಸ್ಯೆಗಳಿಗೆ ಅವರು ಕಾರಣ ಎಂದು ಬಿಂಬಿಸಲಾಗುತ್ತಿದೆ. ವಾಸ್ತವದಲ್ಲಿ ಮೊಗಲ್ ದೊರೆ ಬಾಬರ್ ಹುಟ್ಟಿದ್ದು ವಿದೇಶದಲ್ಲಿ ಅಂದರೆ ಉಜ್ಬೆಕಿಸ್ತಾನದಲ್ಲಿ. ಕೊನೆಯ ದೊರೆ ಬಹದ್ದೂರ್ ಷಾ ಜಫರ್ ಸತ್ತಿದ್ದು ಬರ್ಮಾ ಅಂದರೆ ಈಗಿನ ಮಯನ್ಮಾರ್ ನ ರಂಗೂನ್ ನಲ್ಲಿ (ಬ್ರಿಟಿಷರು ನೀಡಿದ ಶಿಕ್ಷೆಯ ಕಾರಣ). ಇದನ್ನು ಹೊರತು ಪಡಿಸಿದರೆ ಇತರ ಮೊಗಲ್ ದೊರೆಗಳೆಲ್ಲರೂ ಭಾರತದಲ್ಲಿಯೇ ಹುಟ್ಟಿದವರು, ಇಲ್ಲೇ ಮಣ್ಣಾದವರು, ಅವರಲ್ಲಿ ಅನೇಕರು ಇಲ್ಲಿನ ರಜಪೂತ ಹೆಣ್ಣುಗಳನ್ನೇ ಮದುವೆಯಾದರು ಕೂಡಾ. ಕಲೆ, ಸಾಹಿತ್ಯ, ಸಂಸ್ಕೃತಿಗೆ ಅವರ ಕೊಡುಗೆ ಅಪಾರ. ಭಾರತದಾದ್ಯಂತ ಅವರು ನಿರ್ಮಿಸಿದ ಸಾವಿರಾರು ಮೋಹಕ ಸ್ಮಾರಕಗಳು ಈಗಲೂ ಇವೆ. ಅವು ದೇಶಕ್ಕೆ ಜಗತ್ತಿನಲ್ಲಿ ಕೀರ್ತಿ ತಂದಿವೆ. ತಾಜಮಹಲ್ ನಂತಹ ವಿಶ್ವವಿಸ್ಮಯ ಸ್ಮಾರಕಗಳು ದೇಶಕ್ಕೆ ಕೋಟ್ಯಂತರ ವಿದೇಶೀ ವಿನಿಮಯವನ್ನು ತಂದುಕೊಡುತ್ತಿವೆ.

ಟಿಪ್ಪೂ ನಮ್ಮವನು

ನಮ್ಮ ಟಿಪ್ಪೂ ವಿಷಯಕ್ಕೇ ಬರೋಣ. ಟಿಪ್ಪೂ ವಿದೇಶದಿಂದ ಬಂದವನಲ್ಲ. ಆತ ದೇವನಹಳ್ಳಿಯಲ್ಲಿ ಹುಟ್ಟಿ ಮೈಸೂರು ರಾಜ್ಯವನ್ನು ಆಳಿ ಶ್ರೀರಂಗಪಟ್ಟಣದಲ್ಲಿ ಮಣ್ಣಾದವನು. ಬ್ರಿಟಿಷರು ವಿದೇಶೀಯರು ಮತ್ತು ಈ ದೇಶವನ್ನು 150 ವರ್ಷ ಕೊಳ್ಳೆ ಹೊಡೆದು 45 ಟ್ರಿಲಿಯನ್ ಡಾಲರ್ ಸಂಪತ್ತನ್ನು ಈ ದೇಶದಿಂದ ತಮ್ಮ ದೇಶಕ್ಕೆ ಸಾಗಿಸಿದವರು. ಟಿಪ್ಪೂ ಏನನ್ನೂ ಇಲ್ಲಿಯಿಂದ ಹೊರಗೆ ಒಯ್ಯಲಿಲ್ಲ. ಆತ ಇಲ್ಲಿ ಸಂಪತ್ತನ್ನು ಸೃಷ್ಟಿಸಿದ. ಇಲ್ಲೇ ಬಿಟ್ಟು ಹೋದ. ಆತನಿಗೆ ತನ್ನ ಧರ್ಮದಲ್ಲಿ ಶ್ರದ್ಧೆ ಇತ್ತು ಆದರೆ ಇದನ್ನು ಬಳಸಿಕೊಂಡು ಆತ ಬೇರೆ ಧರ್ಮೀಯರಿಗೆ ತೊಂದರೆ ಮಾಡಲಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ತನ್ನ ಧರ್ಮದಲ್ಲಿ ಹರಾಮ್ ಅನಿಸಿಕೊಂಡ ಜೂಜು, ವೇಶ್ಯಾವಾಟಿಕೆ, ಸಾರಾಯಿ ಇವನ್ನೆಲ್ಲ ನಿಷೇಧಿಸಿ ಜನರಿಗೆ ಉಪಕಾರ ಮಾಡಿದ. ಕನ್ನಂಬಾಡಿ ಅಣೆಕಟ್ಟಿನ ಕನಸು ಕಂಡ, ರೇಷ್ಮೆ ಪರಿಚಯಿಸಿದ, ಮಹಾರಾಷ್ಟ್ರದ ಪೇಶ್ವೆಗಳು ಹಿಂದೂ ದೇವಾಲಯವಾದ ಶೃಂಗೇರಿಯ ಮೇಲೆ ದಾಳಿ ಮಾಡಿದಾಗ ಅವರನ್ನು ಓಡಿಸಿ ದೇವಾಲಯಕ್ಕೆ ರಕ್ಷಣೆ ನೀಡಿದ, ನೂರಾರು ದೇವಾಲಯಗಳಿಗೆ ಉಂಬಳಿ ನೀಡಿದ, ತನ್ನ ನಾಡಿಗಾಗಿ ಹೋರಾಡುತ್ತಾ ಕದನ ಕಣದಲ್ಲಿಯೇ ಸತ್ತ ಏಕೈಕ ರಾಜನಾದ.

ಇನ್ನು, ಟಿಪ್ಪು ತಪ್ಪು ಮಾಡಿಲ್ಲವೇ? ಖಂಡಿತಾ ಮಾಡಿರಬಹುದು. ಇಂದಿನಂತೆ ಸಂವಿಧಾನ, ಪ್ರಜಾತಂತ್ರ, ಮಾನವಹಕ್ಕುಗಳು ಇರದ ಅದು ರಾಜಸತ್ತೆಯ ಕಾಲ. ತನ್ನ ವಿರೋಧಿಗಳನ್ನು ಶಿಕ್ಷಿಸುವ, ತನ್ನ ಶತ್ರುಗಳಿಗೆ ನೆರವಾದವರನ್ನು ಶಿಕ್ಷಿಸುವ ಕೆಲಸವನ್ನು ಆತ ಮಾಡಿರಬಹುದು. 18ನೆಯ ಶತಮಾನದ ಕೊನೆಯ ದಿನಗಳ ವಿದ್ಯಮಾನಗಳನ್ನು ನಾವು 21 ನೆಯ ಶತಮಾನದಲ್ಲಿ ವಿಶ್ಲೇಷಿಸುವಾಗ ಅವೆಲ್ಲವೂ ಆ ಯುಗಧರ್ಮ ಎಂಬ ಎಚ್ಚರ ನಮ್ಮಲ್ಲಿರಬೇಕು.

ಇತಿಹಾಸವನ್ನು ಇತಿಹಾಸವಾಗಿ ನೋಡೋಣ

ಇಷ್ಟಕ್ಕೂ ಇತಿಹಾಸವೆಂದರೆ ಏನು? ಇತಿಹಾಸವನ್ನು ಬರೆಯುವುದಲ್ಲ. ಇತಿಹಾಸವನ್ನು ದಾಖಲಿಸುವುದು. ಅದು ನಡೆದು ಹೋದ ಘಟನೆಗಳ ದಾಖಲೀಕರಣ. ಹಾಗೆ ದಾಖಲಿಸಿದ ಎಲ್ಲ ಅಂಶಗಳೂ ಸತ್ಯವಿರಬಹುದೇ? ಇರಬೇಕಾಗಿಲ್ಲ. ಕೆಲವೊಮ್ಮೆ ಬಲವಾದ ಸಾಕ್ಷ್ಯಾಧಾರಗಳೂ ಇಲ್ಲದಿರಬಹುದು. ಆದರೆ ನೂರಾರು ಇತಿಹಾಸಜ್ಞರು ಸಂಶೋಧನೆ ನಡೆಸಿ, ಚುಕ್ಕಿಗಳನ್ನು ಜೋಡಿಸಿ ಒಂದು ಒಮ್ಮತಕ್ಕೆ ಬರುತ್ತಾರೆ. ಅದನ್ನು ಮುಂದೆ ಇನ್ನೂ ಹೆಚ್ಚಿನ ಪುರಾವೆ ದೊರೆಯುವ ವರೆಗೂ ಇತಿಹಾಸ ಎಂದು ಒಪ್ಪಿಕೊಳ್ಳುವುದು ನಡೆದುಕೊಂಡು ಬಂದಿರುವ ಒಂದು ಸಂಪ್ರದಾಯ. ಅದು ಅನಿವಾರ್ಯ ಕೂಡಾ.

ಹಾಗಾಗಿ ನಮ್ಮ ಮುಂದಿರುವ ಇತಿಹಾಸ ನಮ್ಮ ಅಜೆಂಡಾಕ್ಕೆ ಪೂರಕವಾಗಿರಲಿಲ್ಲ ಎಂದು ಅದನ್ನು ಬದಲಾಯಿಸಲು ಬರುವುದಿಲ್ಲ. ಈಗ ಸಮಸ್ಯೆಯೇನೆಂದರೆ, ಎಲ್ಲರೂ ಇತಿಹಾಸಕಾರರು. ತಮ್ಮ ಮೂಗಿನ ನೇರಕ್ಕೆ ಇತಿಹಾಸ ಬರೆಯುತ್ತಿದ್ದಾರೆ. ಈ ಬಗ್ಗೆ ಹಿರಿಯ ವಿದ್ವಾಂಸ ಪುರುಷೋತ್ತಮ ಬಿಳಿಮಲೆಯವರು ಒಂದೆಡೆ ಹೀಗೆ ಹೇಳುತ್ತಾರೆ – “ಭಾರತೀಯ ಇತಿಹಾಸ ಇದೀಗ ತೀವ್ರವಾದ ಬಿಕ್ಕಟ್ಟಿನಲ್ಲಿದೆ. ಅದಕ್ಕೆ ಮುಖ್ಯ ಕಾರಣ ಇತಿಹಾಸ ತಜ್ಞರಲ್ಲದವರು ಇತಿಹಾಸದ ಬಗ್ಗೆ ಬರೆಯುವುದು ಮತ್ತು ಮಾತಾಡುವುದು. ಇತಿಹಾಸ ರಚನೆಯನ್ನು ತಮ್ಮ ವೃತ್ತಿಯಾಗಿ ಮಾಡಿಕೊಂಡವರು ರಾಜಕೀಯ ಬದಲಾವಣೆಗಳೊಂದಿಗೆ ತಮ್ಮ ಬರವಣಿಗೆಯ ಸ್ವರೂಪವನ್ನು ಬದಲು ಮಾಡಿ ಕೊಳ್ಳುವುದಿಲ್ಲ. ಅವರು ನಿರಂತರವಾಗಿ ಬರೆಯುತ್ತಲೇ ಇರುತ್ತಾರೆ, ಹೊಸ ಮಾಹಿತಿಗಳು ಲಭಿಸಿದಾಗ ತಮ್ಮ ನಿಲುವುಗಳನ್ನು ಬದಲಿಸಿಕೊಂಡು ಮತ್ತೆ ಬರವಣಿಗೆಯನ್ನು ಮುಂದುವರೆಸುತ್ತಾರೆ. ಈ ಅರ್ಥದಲ್ಲಿ ಚರಿತ್ರೆಯ ಬರವಣಿಗೆ ನಿರಂತರವಾದ ಒಂದು ಪ್ರಕ್ರಿಯೆ. ರಾಜಕೀಯ ಆಸಕ್ತಿ ಇರುವ ನಕಲಿ ಇತಿಹಾಸಕಾರರು ಮಾತ್ರ ಆಳುವ ವರ್ಗವನ್ನು ಸಂಪ್ರೀತಗೊಳಿಸಲು ಇದ್ದಕ್ಕಿದ್ದಂತೆ ಹುಟ್ಟಿ, ರಾಡಿ ಎಬ್ಬಿಸಿ ಮರೆಯಾಗುತ್ತಾರೆ”. 

ಸಾವರ್ಕರ್ ಭಾರತ ಸ್ವಾತಂತ್ರ್ಯಕ್ಕೆ ಹೋರಾಡಿದ ಎಂದು ಒಂದು ಕತೆ ಕಟ್ಟಿದ ತಕ್ಷಣ ಇತಿಹಾಸವೇನೂ ಬದಲಾಗುವುದಿಲ್ಲ. ಟಿಪ್ಪೂ ಮತಾಂಧ, ಕನ್ನಡ ದ್ರೋಹಿ, ಭಾರತ ವಿರೋಧಿ ಎಂದು ನೀವು ಹೊಸ ಇತಿಹಾಸ ಬರೆಯ ಹೊರಟರೆ ನೈಜ ಇತಿಹಾಸ ಬದಲಾಗುವುದಿಲ್ಲ. ಟಿಪ್ಪೂ ಇರಲೀ, ನೆಹರೂ ಇರಲೀ ಅವರು ನಿಮಗೆ ಇಷ್ಟವಾಗಲಿಲ್ಲ ಎಂದು ಪಠ್ಯಪುಸ್ತಕದಿಂದ ಅವರ ಬಗೆಗಿನ ಪಾಠವನ್ನು ಕಿತ್ತು ಹಾಕಬಹುದು, ರೈಲಿನಿಂದ ಅವರ ಹೆಸರನ್ನು ಅಳಿಸಬಹುದು. ಆದರೆ ಇತಿಹಾಸದ ಪುಸ್ತಕದಿಂದ ಅವರ ಹೆಸರನ್ನು ಅಳಿಸಿ ಹಾಕಲಾರಿರಿ, ಜನರ ಹೃದಯಗಳಿಂದ ಅವರ ನೆನಪನ್ನು ಅಳಿಸಿ ಹಾಕಲಾರಿರಿ.

ಹಾಗಾಗಿ, ಇತಿಹಾಸವನ್ನು ಇತಿಹಾಸವಾಗಿಯೇ ನೋಡುವುದನ್ನು ಕಲಿಯಬೇಕು. ಇತಿಹಾಸ ಇರುವುದು ಓದುವುದಕ್ಕೆ, ಅಧ್ಯಯನ ಮಾಡುವುದಕ್ಕೆ, ಭೂತಕಾಲದ ತಪ್ಪುಗಳನ್ನು ಅರಿತುಕೊಂಡು ಭವಿಷ್ಯತ್ಕಾಲದಲ್ಲಿ ಅವು ಮರುಕಳಿಸದಂತೆ ಎಚ್ಚರ ವಹಿಸುವುದಕ್ಕೆ. ನೀವು ಇತಿಹಾಸವನ್ನು ವಿಮರ್ಶಿಸಬಹುದು, ವಿಶ್ಲೇಷಿಸಬಹುದು, ವ್ಯಾಖ್ಯಾನ ಮಾಡಬಹುದು, ಪುನರ್ ವ್ಯಾಖ್ಯಾನ ಮಾಡಬಹುದು. ಆದರೆ ಇತಿಹಾಸವನ್ನು ಬದಲಾಯಿಸಲಾರಿರಿ. ಇತಿಹಾಸವನ್ನು ತಿದ್ದಲು ಹೋಗುವುದು ದಾರುಣ ಇತಿಹಾಸದ ಸೃಷ್ಟಿಗೆ ಕಾರಣವಾಗುತ್ತದೆ. ವರ್ತಮಾನವನ್ನು ಮಾತ್ರವಲ್ಲ, ಭವಿಷ್ಯವನ್ನೂ ನಾಶಮಾಡುತ್ತದೆ.

ಶ್ರೀನಿವಾಸ ಕಾರ್ಕಳ

ಚಿಂತಕರೂ ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡವರು.

You cannot copy content of this page

Exit mobile version